ಸೆನ್ಸಾರ್ ಪರೀಕ್ಷೆಯಲ್ಲಿ 'ಕಡ್ಡಿಪುಡಿ' ಶಿವಣ್ಣ ಪಾಸು
ಕಡ್ಡಿಪುಡಿ ಚಿತ್ರ ಸೆನ್ಸಾರ್ ನಲ್ಲಿ ಪಾಸಾಗಿದ್ದು ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ. ಇನ್ನೇನು ಚಿತ್ರ ಬಿಡುಗಡೆಯಾಗುವುದೊಂದು ಬಾಕಿ ಇದೆ. ಮೇ ತಿಂಗಳಲ್ಲೇ ಚಿತ್ರ ತೆರೆಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಚಿತ್ರದ ಧ್ವನಿಸುರುಳಿ ಈಗಾಗಲೆ ಬಿಡುಗಡೆಯಾಗಿದ್ದು ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸ್ವಯಂವರ ಚಂದ್ರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಮುಂಗಾರುಮಳೆ' ಖ್ಯಾತಿಯ ಎಸ್ ಕೃಷ್ಣ ಅವರ ಛಾಯಾಗ್ರಹಣವಿದೆ. ರಂಗಾಯಣ ರಘು, ಅವಿನಾಶ್ ಹಾಗೂ ರೇಣು ಪ್ರಸಾದ್ ಅವರು ಪಾತ್ರವರ್ಗದಲ್ಲಿದ್ದಾರೆ.
ಒನ್ಸ್ ಎಗೈನ್ ಈ ಚಿತ್ರದಲ್ಲಿ ಶಿವಣ್ಣ ಲಾಂಗು ಹಿಡಿಯುತ್ತಿದ್ದಾರೆ. ರೌಡಿಯಿಸಂ ಚಿತ್ರವಾದರೂ ಸ್ವಲ್ಪ ಭಿನ್ನವಾಗಿರುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ದುನಿಯಾ ಸೂರಿ ಅವರ ನಿರ್ದೇಶನದ ಬಗ್ಗೆ ಕುತೂಹಲವೂ ಇದೆ. ಬಹುಶಃ ಚಿತ್ರ ಮೇ 24ಕ್ಕೆ ತೆರೆಕಾಣುವ ಸಾಧ್ಯತೆಗಳಿವೆ.
ಚಿತ್ರದಲ್ಲಿ ಶಿವಣ್ಣ ಹೆಸರು ಆನಂದ್ ಅಲಿಯಾಸ್ ಕಡ್ಡಿಪುಡಿ. ಉಮಾ ಪಾತ್ರದಲ್ಲಿ ರಾಧಿಕಾ ಪಂಡಿತ್ ಕಾಣಿಸಲಿದ್ದಾರೆ. ಕಡ್ಡಿಪುಡಿ ಹೆಸರಿಗೆ ತಕ್ಕಂತೆ ತಂಬಾಕಿನ ಕಿಚ್ ಚಿತ್ರದಲ್ಲೂ ಇರುತ್ತದೆ ಎನ್ನುತ್ತಾರೆ ನಿರ್ದೇಶಕರು. ಚಿತ್ರದಲ್ಲಿ ಶಿವಣ್ಣ ಪಾತ್ರಕ್ಕೆ ನೆಗಟೀವ್ ಶೇಡ್ ಇದ್ದರೂ ಸ್ವಾರಸ್ಯಕರವಾಗಿದೆಯಂತೆ.
ಚಿತ್ರದಲ್ಲಿ ಲಾಂಗು ಮಚ್ಚುಗಳ ಅಬ್ಬರವಿದ್ದರೂ ಪ್ರೀತಿಯ ಸಣ್ಣ ಎಳೆಯೂ ಬಿಚ್ಚಿಕೊಳ್ಳುತ್ತದೆ. ಗೆಳೆತನ, ಪ್ರೀತಿ ಪ್ರೇಮ ಪ್ರಣಯ, ದ್ವೇಷ, ಮದುವೆ ಅಂಶಗಳೂ ಚಿತ್ರದಲ್ಲಿವೆ. ಇಷ್ಟೆಲ್ಲಾ ವಿಶೇಷಗಳ 'ಕಡ್ಡಿಪುಡಿ' ಚಿತ್ರದ ಕತೆಯನ್ನು ಯುವ ಮತ್ತು ಮಧ್ಯ ವಯಸ್ಕರನ್ನು ಗಮನದಲ್ಲಿಟ್ಟುಕೊಂಡು ಹೆಣೆಯಲಾಗಿದೆ ಎನ್ನುತ್ತಾರೆ ಸೂರಿ. (ಒನ್ಇಂಡಿಯಾ ಕನ್ನಡ)


Click it and Unblock the Notifications












