ಹ್ಯಾಟ್ರಿಕ್ ಹೀರೋ ಶಿವಣ್ಣ 'ಲಕ್ಷ್ಮಿ' ಚಿತ್ರದ ಪ್ರೀವ್ಯೂ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳ ನಿರೀಕ್ಷೆ, ಕುತೂಹಲಕ್ಕೆ ಇದೇ ಶುಕ್ರವಾರ (ಜ.18) ತೆರೆಬೀಳುತ್ತಿದೆ. ಅವರ ಬಹುನಿರೀಕ್ಷಿತ ಲಕ್ಷ್ಮಿ ಚಿತ್ರ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ವಿಶೇಷಗಳು ಒಂದೆರಡಲ್ಲ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಮಕಾವು ಪ್ರದೇಶದಲ್ಲಿ ಅತ್ಯಧಿಕವಾಗಿ ಆಕ್ಷನ್ ಸೀನ್ ಗಳನ್ನು ಚಿತ್ರೀಕರಿಸಲಾಗಿದೆ. ರಾಘವ ಲೋಕಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮೂರನೇ ಚಿತ್ರ ಇದಾಗಿದೆ.

ಶಿವಣ್ಣ ಜೊತೆ ಮತ್ತೊಮ್ಮೆ ರಾಘವ ಲೋಕಿ
ಲೋಕಿ ನಿರ್ದೇಶನದ ಮೊದಲ ಚಿತ್ರ ಶಿವಣ್ಣ ಅಭಿನಯದ 'ಸತ್ಯ ಇನ್ ಲವ್'. ಈ ಚಿತ್ರ ಬಾಕ್ಸ್ ಆಫೀಸಲ್ಲಿ ನಿರೀಕ್ಷಿಸಿದಷ್ಟು ಸದ್ದು ಮಾಡಲಿಲ್ಲ. ಬಳಿಕ ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಅವರ ಗಿಲ್ಲಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದರು. ಈ ಚಿತ್ರವೂ ಹಾಗೆ ಬಂದು ಹೀಗೆ ಮರೆಯಾಯಿತು.

ಸಿಬಿಐ ಅಧಿಕಾರಿ ಲಕ್ಷ್ಮಿ ಪಾತ್ರದಲ್ಲಿ ಶಿವಣ್ಣ
ಭ್ರಷ್ಟಾಚಾರ ಹಾಗೂ ಭಯೋತ್ಪಾದಕ ಶಕ್ತಿಗಳ ವಿರುದ್ಧ ಹೋರಾಡುವ ಕಥಾ ಹಂದರ ಚಿತ್ರಕ್ಕಿದೆ. ಚಿತ್ರದಲ್ಲಿ ಶಿವಣ್ಣ ಅವರದು ಸಿಬಿಐ ಅಧಿಕಾರಿ ಪಾತ್ರ. ಅವರ ಹೆಸರು ಲಕ್ಷ್ಮಿ ನಾರಾಯಣ. ಶಾರ್ಟ್ ಅಂಡ್ ಸ್ವೀಟ್ ಆಗಿ ಎಲ್ಲರೂ ಲಕ್ಷ್ಮಿ ಎಂದು ಕರೆಯುತ್ತಾರೆ.

ಚಿತ್ರದ ಕಥೆಗೆ ಬೀಜಾಂಕುರ ಹಾಕಿದ್ದು ಶಿವಣ್ಣ
"ಈ ರೀತಿಯ ಚಿತ್ರವೊಂದನ್ನು ಮಾಡಬೇಕು ಎಂದು ಮೊದಲು ಐಡಿಯಾ ಕೊಟ್ಟವರೇ ಶಿವಣ್ಣ. ಬಳಿಕ ನಿರ್ದೇಶನದ ಜವಾಬ್ದಾರಿ ಕೂಡ ನನ್ನ ಹೆಗಲಿಗೆ ಹೊರಿಸಿದರು. ಆರಂಭದಿಂದ ಕೊನೆಯ ತನಕ ಚಿತ್ರ ಕುತೂಹಲಕರವಾಗಿ ಸಾಗುತ್ತದೆ" ಎನ್ನುತ್ತಾರೆ ಲೋಕಿ.

ರು.8 ಕೋಟಿ ಮೀರಿದ ಚಿತ್ರದ ಬಜೆಟ್
ಲಕ್ಷ್ಮಿ ಚಿತ್ರದ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ಕಂಪ್ಯೂಟರ್ ಗ್ರಾಫಿಕ್ಸ್. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಚಿತ್ರಕ್ಕೆ ಗ್ರಾಫಿಕ್ಸ್ ಅಳವಡಿಸಿದ್ದೇವೆ. ಚಿತ್ರದ ಬಜೆಟ್ ನಾವು ಊಹಿಸಿದ್ದಕ್ಕಿಂತಲೂ ಸ್ವಲ್ಪ ಹೆಚ್ಚೇ ಆಯಿತು. ರು.8 ಕೋಟಿಗೂ ಅತ್ಯಧಿಕ ಖರ್ಚಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು.

ಚಿತ್ರದ ಪ್ರಮುಖ ಆಕರ್ಷಣೆ ಆಕ್ಷನ್
ಚಿತ್ರದ ಮೊದಲಾರ್ಧ ಪಕ್ಕಾ ಭಾರತೀಯ ಶೈಲಿಯ ಆಕ್ಷನ್ ನಲ್ಲಿರುತ್ತದೆ. ದ್ವಿತೀಯಾರ್ಧಕ್ಕೆ ಬರುತ್ತಿದ್ದಂತೆ ವಿದೇಶಿ ಶೈಲಿಯ ಆಕ್ಷನ್ ಗೆ ಹೊರಳುತ್ತದೆ. ದ್ವಿತೀಯಾರ್ಧದ ಬಹುತೇಕ ಚಿತ್ರೀಕರಣ ನಡೆದಿರುವುದು ಹಾಂಕಾಂಗ್ ನಲ್ಲಿ ಆದ ಕಾರಣ ಅಲ್ಲಿನ ಸಾಹಸ ಕಲಾವಿದರನ್ನೇ ಬಳಸಿಕೊಂಡಿದ್ದೇವೆ ಎಂಬ ವಿವರಗಳನ್ನು ಲೋಕಿ ನೀಡಿದ್ದಾರೆ.

150ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಲಗ್ಗೆ
ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ಕಪಾಲಿ, ನವರಂಗ್, ಉಮಾ, ಈಶ್ವರಿ, ಸಿದ್ಧಲಿಂಗೇಶ್ವರ, ಗೋವರ್ಧನ್, ಕೃಷ್ಣ, ರಾಜಮುರಳಿ ಸೇರಿದಂತೆ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಾದ ಪಿವಿಆರ್, ಐನಾಕ್ಸ್ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾಜ್ಯದಾದ್ಯಂತ ತೆರೆಕಾಣುತ್ತಿದೆ.


Click it and Unblock the Notifications











