'ಸಹೋದರರ ಸವಾಲ್' ಖ್ಯಾತಿ ಅಜಂತ ರಾಜು ವಿಧಿವಶ
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಎ ಆರ್ ರಾಜು ಅವರು ಬುಧವಾರ (ನವೆಂಬರ್ 5) ಮುಂಜಾನೆ ವಿಧಿವಶರಾಗಿದ್ದಾರೆ. ಹೃದಯಾಘಾತಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಅಜಂತ ರಾಜು ಎಂದೇ ಖ್ಯಾತರಾಗಿದ್ದ ಎ ಆರ್ ರಾಜು ಅವರು ಸರಿಸುಮಾರು 35ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ತಮ್ಮ ಹದಿನೆಂಟನೇ ವರ್ಷಕ್ಕೆ ಚಿತ್ರರಂಗಕ್ಕೆ ಅಡಿಯಿಟ್ಟ ರಾಜು ಅವರು ಸತತ ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಕಾರ್ಯನಿರತರಾದವರು. [ಎ ಆರ್ ರಾಜು ಯಾರು?]

ಅಜಂತ ಮೂವೀಸ್' ಲಾಂಛನದಲ್ಲಿ ರಾಜು ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರೊಂದಿಗೆ 27 ಚಿತ್ರಗಳನ್ನು ನಿರ್ಮಿಸಿದ್ದಾರೆ. ವಿಷ್ಣುವರ್ಧನ್ ಅವರ ಮೊಟ್ಟ ಮೊದಲ ಡಬಲ್ ರೋಲ್ ಸಿನಿಮಾ 'ವಿಜಯ್ ವಿಕ್ರಮ್' ನಿರ್ಮಾಪಕರು ರಾಜು ಎಂಬುದು ವಿಶೇಷ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಮೊದಲ ಕಲರ್ ಚಿತ್ರ 'ಸಹೋದರ ಸವಾಲ್' ನಿರ್ಮಿಸಿದ್ದೂ ಇದೇ ರಾಜು ಅವರು. ಆ ಚಿತ್ರದಲ್ಲಿ ರಜನಿಕಾಂತ್ ಅವರಿಗೆ ವಿಷ್ಣು ತಮ್ಮನಾಗಿ ಅಭಿನಯಿಸಿರುವುದು ಎಲ್ಲರಿಗೂ ಗೊತ್ತೇ ಇದೆ.
ಸದಾ ಕನ್ನಡ ಚಿತ್ರರಂಗ ಒಗ್ಗಟಾಗಿರಬೇಕೆಂದು ಬಯಸುತ್ತಿದ್ದ ರಾಜು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರು ಹರಿಸೋಣ. ವಿಜಯ್ ವಿಕ್ರಮ್, ಬೆಳ್ಳಿನಾಗ, ಭದ್ರಕಾಳಿ, ಸತಿ ಸಕ್ಕುಬಾಯಿ, ಸ್ನೇಹಿತರ ಸವಾಲ್, ಸಹೋದರರ ಸವಾಲ್, ಸಾಹಸ ಸಿಂಹ ಹೀಗೆ ಅವರು ನಿರ್ಮಿಸಿದ ಚಿತ್ರಗಳ ಪಟ್ಟಿ ಸಾಕಷ್ಟಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











