ಹಿರಿಯ ನಿರ್ಮಾಪಕ ಎ ಆರ್ ರಾಜುಗೆ ಹೃದಯಾಘಾತ
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ, ವಿತರಕ ಎ ಆರ್ ರಾಜು ಎಂದೇ ಖ್ಯಾತರಾಗಿರುವ ಅಲ್ಲೂರಿ ರೆಡ್ಡಪ್ಪ ರಾಜು ಅವರಿಗೆ ತೀವ್ರ ಹೃದಯಾಘಾತವಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಐದು ದಶಕಗಳ ಕಾಲ ಚಿತ್ರ ವಿತರಕರಾಗಿ, ನಿರ್ಮಾಪರಾಗಿ ರಾಜು ಅವರು ಚಿತ್ರರಂಗದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ರಾಜು ಅವರು ಇದುವರೆಗೂ 35ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಮೊದಲ ಕಲರ್ ಚಿತ್ರ 'ಸಹೋದರ ಸವಾಲ್' ನಿರ್ಮಿಸಿದ್ದೂ ಇದೇ ರಾಜು ಅವರು. ಆ ಚಿತ್ರದಲ್ಲಿ ರಜನಿಕಾಂತ್ ಅವರಿಗೆ ವಿಷ್ಣು ತಮ್ಮನಾಗಿ ಅಭಿನಯಿಸಿರುವುದು ಎಲ್ಲರಿಗೂ ಗೊತ್ತೇ ಇದೆ.
ಸದಾ ಕನ್ನಡ ಚಿತ್ರರಂಗ ಒಗ್ಗಟಾಗಿರಬೇಕೆಂದು ಬಯಸುತ್ತಿದ್ದ ರಾಜು ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಫಿಲ್ಮಿಬೀಟ್ ಆಶಿಸುತ್ತದೆ. ವಿಜಯ್ ವಿಕ್ರಮ್, ಬೆಳ್ಳಿನಾಗ, ಭದ್ರಕಾಳಿ, ಸತಿ ಸಕ್ಕುಬಾಯಿ, ಸ್ನೇಹಿತರ ಸವಾಲ್, ಸಹೋದರರ ಸವಾಲ್, ಸಾಹಸ ಸಿಂಹ ಹೀಗೆ ಅವರು ನಿರ್ಮಿಸಿದ ಚಿತ್ರಗಳ ಪಟ್ಟಿ ಸಾಕಷ್ಟಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











