ಪತ್ರಕರ್ತ, ನಿರ್ಮಾಪಕ ಸನತ್ಕುಮಾರ್ ನಿಧನ
ಬೆಂಗಳೂರು, ಮಾ 19 : ಪತ್ರಕರ್ತ, ಸಾಕ್ಷ್ಯಚಿತ್ರಗಳ ನಿರ್ದೇಶಕ, ಕನ್ನಡ ಸಿನಿಮಾ ನಿರ್ಮಾಪಕ ವಿ.ಸನತ್ ಕುಮಾರ್ ಅವರು ಬುಧವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾದರು. ಕೆಲಕಾಲದಿಂದ ಜಾಂಡೀಸ್, ಮಧುಮೇಹ ಕಾಯಿಲೆಯಿಂದ ಸನತ್ ಬಳಲುತ್ತಿದ್ದರು. ಅವರಿಗೆ 43 ವರ್ಷ ವಯಸ್ಸಾಗಿತ್ತು. ವಿಧುರರಾಗಿದ್ದ ಸನತ್ ತಾಯಿ ಮತ್ತು ಓರ್ವ ಸೋದರನನ್ನು ಅಗಲಿದ್ದಾರೆ. ಮೃತರ ಇಚ್ಛೆಯಂತೆ ದೇಹವನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ನೀಡಲಾಗುವುದು.
ಎರಡು ವರ್ಷಗಳ ಹಿಂದೆ ಮಧುಮೇಹದಿಂದ ಬಳಲುತ್ತಿದ್ದ ಸನತ್ ಅವರ ಒಂದು ಕಾಲನ್ನು ತೆಗೆಯಬೇಕಾಗಿ ಬಂದಿತ್ತು. ಅದರೆ, ವಿಶ್ರಾಂತಿ ನಂತರ ಮತ್ತೆ ಚಿತ್ರ ನಿರ್ಮಾಣ, ನಿರ್ದೇಶನದತ್ತ ಸನತ್ ಆಸಕ್ತಿ ತೋರಿದ್ದರು. ಆದರೆ, ಕೆಲ ತಿಂಗಳ ಹಿಂದೆ ಕರುಳುಬೇನೆಗೆ ತುತ್ತಾದ ಸನತ್ ಅವರು ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ, ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ. ಮಂಗಳವಾರ ಮಲ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದರು.

"ಪ್ರಜಾವಾಣಿ" ಹಾಗೂ "ವಾರಪತ್ರಿಕೆ" ಖ್ಯಾತಿಯ ಚಿತ್ರದುರ್ಗ ಮೂಲದವರಾದ ಬಿ ವಿ ವೈಕುಂಠರಾಜು ಅವರ ಹಿರಿಯ ಪುತ್ರರಾದ ಸನತ್ ಅವರು ತಂದೆ ನಂತರ "ರಾಜು ಪತ್ರಿಕೆ" ಸಾರಥ್ಯ ವಹಿಸಿಕೊಂಡು ಕನ್ನಡ ಪತ್ರಿಕೋದ್ಯಮದಲ್ಲಿ ಕ್ರಿಕೆಟ್ ಕುರಿತಾದ ಮ್ಯಾಗಜೀನ್ ನಡೆಸಿದರು. ನಂತರ ಡಾಕ್ಯುಮೆಂಟರಿ ಲೋಕದತ್ತ ಅಕರ್ಷಣೆ ಪಡೆದುಕೊಂಡ ಸನತ್, ಚಿತ್ರ ನಿರ್ಮಾಣ, ನಿರ್ದೇಶನ, ರೇಡಿಯೋ ಜರ್ನಲಿಸ್ಟ್ ಆಗಿ ವೃತ್ತಿ ಜೀವನ ಸಾಗಿಸಿದರು. ಜಗ್ಗೇಶ್ ಅಭಿನಯದ ಗುರುಪ್ರಸಾದ್ ನಿರ್ದೇಶನದ ಎದ್ದೇಳು ಮಂಜುನಾಥ ಚಿತ್ರವನ್ನು ಸನತ್ ಕುಮಾರ್ ನಿರ್ಮಿಸಿ ಯಶಸ್ವಿ ನಿರ್ಮಾಪಕ ಎನಿಸಿದರು.
ಮೈಸೂರು ದಸರಾ ಕುರಿತು ಡಾಕ್ಯುಮೆಂಟರಿ ಮಾಡಿದ್ದ ಸನತ್ ಅವರು ಸಿಐಐಎಲ್ ಗಾಗಿ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದರು. ಆಸ್ಟ್ರೇಲಿಯಾದ SBS (ವಿಶೇಷ ಬಾನುಲಿ ಸೇವೆ) ರೇಡಿಯೊಗೆ ಭಾರತದ ಕನ್ನಡ ಬಾತ್ಮಿದಾರರಾಗಿಯೂ ಕಾರ್ಯನಿರ್ವಹಿಸಿದ್ದರು. (ತಿದ್ದುಪಡಿ ಹೇಳಿದ ವಾಸುದೇವ ಮೂರ್ತಿ ಅವರಿಗೆ ಧನ್ಯವಾದಗಳು) ಅವರು ನಿರ್ಮಾಣ ಮಾಡಿದ ಮೈಸೂರು ಹಾಗೂ ಮೈಸೂರು ದಸರಾದ ಸಾಕ್ಷ್ಯಚಿತ್ರವನ್ನು ಅವರ ನೆನಪಿಗಾಗಿ ಇಲ್ಲಿ ನೀಡಲಾಗಿದೆ.
ನಟ ಜಗ್ಗೇಶ್ ಅವರಿಂದ ಅಂತಿಮ ನಮನ
ಸಂತಾಪ: ಯುವ ಮತ್ತು ಪ್ರತಿಭಾವಂತ ಪತ್ರಕರ್ತ ವಿ.ಸನತ್ ಕುಮಾರ್ ನಿಧನಕ್ಕೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಸಂತಾಪ ಸೂಚಿಸಿದೆ. ಭಗವಂತ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರೆಸ್ ಕ್ಲಬ್ ನ ಕಾರ್ಯದರ್ಶಿ ಸದಾಶಿವ ಶೆಣೈ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Click it and Unblock the Notifications











