twitter
    For Quick Alerts
    ALLOW NOTIFICATIONS  
    For Daily Alerts

    ಇದು ಶಂಕರ್‌ ನಾಗ್ ಸಮಾಧಿನಾ? ಈ ವೈರಲ್ ಫೋಟೊದ ಅಸಲಿಯತ್ತೇನು?

    |

    ಪ್ರತಿವರ್ಷ ಕನ್ನಡಿಗರು ಶಂಕರ್ ನಾಗ್‌ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆಯಂದು ಅವರನ್ನು ನೆನಪಿಸಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಶಂಕ್ರಣ್ಣನ ಸಾಧನೆಯನ್ನು ಮೆಲುಕು ಹಾಕುತ್ತಾರೆ. ಆದರೆ ಕೆಲವರು ಮಾತ್ರ ಶಂಕರ್‌ ನಾಗ್ ಸ್ಮಾರಕದ ಬಗ್ಗೆ ಚರ್ಚಿಸುತ್ತಲೇ ಇದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಶಂಕ್ರಣ್ಣನ ಸಮಾಧಿಗೆ ಎಂತಹ ಸ್ಥಿತಿ ಬಂತು ಎಂದು ಫೋಟೊವೊಂದು ವೈರಲ್ ಆಗಿದೆ.

    ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್‌ಕುಮಾರ್ ಭವ್ಯ ಸ್ಮಾರಕ ಎದ್ದು ನಿಂತಿದೆ. ಮೈಸೂರಿನಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕೆಲಸ ನಡೀತಿದೆ. 8 ತಿಂಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಶೀಘ್ರದಲ್ಲೇ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಸ್ಮಾರಕವೂ ತಲೆ ಎತ್ತಲಿದೆ. ಆದರೆ ಕರಾಟೆ ಕಿಂಗ್ ಶಂಕರ್‌ ನಾಗ್ ಸ್ಮಾರಕ ಎಲ್ಲಿ ? ಕನ್ನಡ ಚಿತ್ರರಂಗಕ್ಕೆ ಶಂಕ್ರಣ್ಣ ನೀಡಿದ ಕೊಡುಗೆಯನ್ನು ಪುರಸ್ಕರಿಸಿ ಅವರಿಗೆ ಯಾಕೆ ಸ್ಮಾರಕ ನಿರ್ಮಾಣ ಮಾಡಿಲ್ಲ ಎಂದು ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ. ಶಂಕ್ರಣ್ಣನನ್ನು ಆಟೋ ನಿಲ್ದಾಣಕ್ಕೆ ಮಾತ್ರ ಸೀಮಿತಗೊಳಿಸದೇ ಅವರಿಗೆ ಸ್ಮಾರಕ ಕಟ್ಟಿ ಗೌರವಿಸಬೇಕು ಎನ್ನುತ್ತಿದ್ದಾರೆ.

    ಶಂಕ್ರಣ್ಣ ಜನ್ಮದಿನ: ಶಂಕರ್‌ನಾಗ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬಲ್ಲಿರಾ?ಶಂಕ್ರಣ್ಣ ಜನ್ಮದಿನ: ಶಂಕರ್‌ನಾಗ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಬಲ್ಲಿರಾ?

    ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫೋಟೊವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಫೋಟೊದಲ್ಲಿ ಎರಡು ಬಂಡೆ ಕಲ್ಲುಗಳು ಇವೆ. ಅದಕ್ಕೆ ಹೂ ಹಾಕಿ ಪೂಜೆ ಮಾಡಲಾಗಿದೆ. ಅಲ್ಲಿ ಅಭಿಮಾನಿಗಳು ಶಂಕ್ರಣ್ಣನ ಬ್ಯಾನರ್, ಕನ್ನಡ ಬಾವುಟ ಕಟ್ಟಿದ್ದಾರೆ. ಇದೇ ಶಂಕರ್‌ ನಾಗ್ ಸಮಾಧಿ. ಈ ಸ್ಥಿತಿಯಲ್ಲಿ ಶಂಕರ್‌ ನಾಗ್‌ ಸಮಾಧಿ ನೋಡಿ ನೋವಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಯಾಕೆ ಎಂದು ಕೇಳುತ್ತಿದ್ದಾರೆ. ಆದರೆ ಈ ಫೋಟೊ ಬಗ್ಗೆ ಶಂಕರ್‌ ನಾಗ್‌ ಅವರಿಗೆ ಆಪ್ತರಾಗಿದ್ದ ನಟ ರಮೇಶ್‌ ಭಟ್ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ.

    ಇದು ಶಂಕ್ರಣ್ಣನ ಸಮಾಧಿ ಅಲ್ಲ?

    ಇದು ಶಂಕ್ರಣ್ಣನ ಸಮಾಧಿ ಅಲ್ಲ?

    ಅಂದಹಾಗೆ ಶಂಕರ್ ನಾಗ್‌ ಸ್ಮಾರಕ ಎಲ್ಲೂ ಇಲ್ಲ. ಶಂಕ್ರಣ್ಣ ಅಗಲಿಕೆಯ ಸಮಯದಲ್ಲಿ ಸಮಾಧಿ, ಸ್ಮಾರಕಗಳ ಬಗ್ಗೆ ಹೆಚ್ಚಿನ ಕಾಳಜಿ ಯಾರಿಗೂ ಇರಲಿಲ್ಲ. ಈ ಬಗ್ಗೆ ರಮೇಶ್‌ ಭಟ್ ಮಾತನಾಡುತತಾ "ಶಂಕರ್‌ ನಾಗ್‌ ಅವರಿಗೆ ಯಾವುದೇ ಸ್ಮಾರಕ ನಿರ್ಮಾಣ ಆಗಿರಲಿಲ್ಲ. ಸದ್ಯ ಗಣ್ಯರ ಸ್ಮಾರಕಗಳ ನಿರ್ಮಾಣದ ಬಗ್ಗೆ ಎಲ್ಲಾ ಚರ್ಚೆ ಆಗುತ್ತಿರುವುದರಿಂದ ಯಾರೋ ಅಭಿಮಾನಿಗಳು ಈ ರೀತಿ ಫೋಟೊ ವೈರಲ್ ಮಾಡಿರಬಹುದು. ರಂಗಶಂಕರ ಒಂದೇ ಶಂಕರ್‌ ನಾಗ್‌ ನೆನೆಪು" ಎಂದು ಮಾಹಿತಿ ನೀಡಿದ್ದಾರೆ.

    ಶಂಕರ್‌ ನಾಗ್ ಸಮಾಧಿ ಕೂಡ ಇಲ್ಲ!

    ಶಂಕರ್‌ ನಾಗ್ ಸಮಾಧಿ ಕೂಡ ಇಲ್ಲ!

    ಸೆಪ್ಟೆಂಬರ್ 30, 1990 ರಂದು ಶಂಕರ್‌ ನಾಗ್ ಕಾರು ಅಪಘಾತದಲ್ಲಿ ನಿಧನರಾಗಿದ್ದ ಸುದ್ದಿ ರಾಜ್ಯಕ್ಕೆ ಬರಸಿಡಿಲಿನಂತೆ ಬಂದೆರಗಿತ್ತು. ದಾವಣಗೆರೆಯ ಆನಗೋಡು ಎಂಬಲ್ಲಿ 'ಜೋಕುರಸ್ವಾಮಿ' ಚಿತ್ರದ ಮುಹೂರ್ತ ಇತ್ತು. ರಾತ್ರಿಯೇ ಬೆಂಗಳೂರಿನಿಂದ ಹೊರಟು ಬೆಳಗ್ಗೆ ಮುಹೂರ್ತದಲ್ಲಿ ಭಾಗಿಯಾಗಬೇಕು ಎಂದು ಶಂಕರ್ ನಾಗ್‌ ಹೊರಟಿದ್ದರು. ಅನಂತ್‌ ನಾಗ್ ಈ ಸಮಯದಲ್ಲಿ ಬೇಡ ಎಂದರೂ ಕೇಳದೇ ತಮ್ಮ ಹೆಂಡತಿ, ಮಗಳು ಹಾಗೂ ಕಾರ್‌ ಡ್ರೈವರ್ ಜೊತೆ ಕಾರು ಏರಿದ್ದರು. ಆನಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಸುಮಾರು 3 ಗಂಟೆಗೆ ಸುಮಾರಿಗೆ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಕಾರು ಗುದ್ದಿದ್ದ ಪರಿಣಾಮ ಸ್ಥಳದಲ್ಲೇ ಶಂಕರ್‌ ನಾಗ್ ಹಾಗೂ ಡ್ರೈವರ್ ಕೊನೆಯುಸಿರೆಳೆದಿದ್ದರು. ಅಲ್ಲಿಂದ ಶಂಕ್ರಣ್ಣನ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲಾಗಿತ್ತು. ಅಂತಿಮ ದರ್ಶನದ ನಂತರ "ವಿಲ್ಸನ್‌ ಗಾರ್ಡನ್‌ನಲ್ಲಿರುವ ಚಿತಾಗಾರದಲ್ಲಿ ಪಾರ್ಥೀವ ಶರೀರಕ್ಕೆ ಅಗ್ನಿಸ್ವರ್ಶ ಮಾಡಲಾಗಿತ್ತು. ಹಾಗಾಗಿ ಶಂಕ್ರಣ್ಣನ ಸಮಾಧಿ ಕೂಡ ಇಲ್ಲ" ಎಂದು ರಮೇಶ್ ಭಟ್ ಹೇಳಿದ್ದಾರೆ.

    ಸ್ಮಾರಕದ ಚರ್ಚೆ ಯಾಕೆ?

    ಸ್ಮಾರಕದ ಚರ್ಚೆ ಯಾಕೆ?

    ಪದೇ ಪದೇ ಸಮಾಧಿ, ಸ್ಮಾರಕಗಳ ಬಗ್ಗೆ ಚರ್ಚೆ ಆಗಲು ಕಾರಣ, ನಮಗೆ ಆಪ್ತರಾದವರು ನಮ್ಮನ್ನು ಅಗಲಿ ಹೋದರೆ ಭಾವನಾತ್ಮಕವಾಗಿ ಅವರೊಟ್ಟಿಗೆ ಸಂಬಂಧ ಹೊಂದಲು ಇರುವ ಸ್ಥಳ ಸಮಾಧಿ ಅಥವಾ ಸ್ಮಾರಕ. ಆದರೆ ಅಸಂಖ್ಯಾತ ಅಭಿಮಾನಿಗಳು ಕರಾಟೆ ಕಿಂಗ್ ಶಂಕರ್‌ ನಾಗ್ ಜೊತೆ ಭಾವನಾತ್ಮಕವಾಗಿ ಸಂಬಂಧ ಇರಿಸಿಕೊಳ್ಳುವುದಕ್ಕೆ ಹಾಗೂ ಅವರಿಗೆ ನಮಿಸೋಕೆ ಸ್ಮಾರಕ, ಸಮಾಧಿ ಇಲ್ಲ ಎನ್ನುವುದು ಬೇಸರದ ಸಂಗತಿ. ಇದೇ ಕಾರಣಕ್ಕೆ ಅಭಿಮಾನಿಗಳು ಪದೇ ಪದೇ ಈ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ.

    ಚಿತ್ರರಂಗಕ್ಕೆ ಶಂಕ್ರಣ್ಣನ ಕೊಡುಗೆ ಅಪಾರ

    ಚಿತ್ರರಂಗಕ್ಕೆ ಶಂಕ್ರಣ್ಣನ ಕೊಡುಗೆ ಅಪಾರ

    36 ವರ್ಷಗಳಲ್ಲಿ 100 ವರ್ಷಕ್ಕಾಗುವಷ್ಟು ಸಾಧಿಸಿ ಹೋದವರು ಶಂಕರ್‌ ನಾಗ್. ಬರೀ ಸಿನಿಮಾಗಳಲ್ಲಿ ನಟಿಸಿದ್ದು ಮಾತ್ರವಲ್ಲ, ನಿರ್ದೇಶಕರಾಗಿಯೂ ಅದ್ಭುತ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದರು. 12 ವರ್ಷಗಳ ಸಿನಿಬದುಕಿನಲ್ಲಿ 80ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. 'ಮಾಲ್ಗುಡಿ ಡೇಸ್' ಧಾರಾವಾಹಿ ನಿರ್ದೇಶನ ಮಾಡಿದ್ದರು. ನಾಟಕಗಳಲ್ಲಿ ತೊಡಗಿಸಿಕೊಂಡಿದ್ದರು. ಚಿತ್ರರಂಗ ಮಾತ್ರವಲ್ಲ, ಬೆಂಗಳೂರು ನಗರ ಹಾಗೂ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಸಿದ್ಧಪಡಿಸಿದ್ದರು. ಅದನ್ನು ಸರ್ಕಾರದ ಮುಂದಿಟ್ಟು ಕಾರ್ಯ ರೂಪಕ್ಕೆ ತರಲು ಮುಂದಾಗಿದ್ದರು. ಆದರೆ ಅದೆಲ್ಲ ಈಡೇರುವ ಮುನ್ನವೇ ಶಂಕರ್‌ ನಾಗ್‌ ಅರ್ಧದಲ್ಲೇ ಎದ್ದು ಹೊರಟುಬಿಟ್ಟರು.

    English summary
    Kannada Legend Shankar Nag Graveyard Viral Photo Fact check. Shankar nag was an actor, director known for his work in kannada films, stage and television. know more.
    Wednesday, November 16, 2022, 16:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X