ರಾಜೇಶ್ವರಿ ಜೊತೆ ಗೀತಸಾಹಿತಿ ಕವಿರಾಜ್ ಸಪ್ತಪದಿ
ಕನ್ನಡ ಚಿತ್ರರಂಗದ ಜನಪ್ರಿಯ ಗೀತರಚನೆಕಾರ ಕವಿರಾಜ್ ಅವರಿಗೆ ಕಂಕಣ ಕೂಡಿಬಂದಿದ್ದು ಇದೀಗ ಅವರು ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಇದೇ ಮೇ.11ಕ್ಕೆ ಕವಿರಾಜ್ ಅವರು ರಾಜೇಶ್ವರಿ ಅವರ ಕೈಹಿಡಿಯುತ್ತಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಹುಟ್ಟೂರು ಕುಪ್ಪಳಿಯಲ್ಲಿ ಕವಿರಾಜ್ ಅವರು ಸಪ್ತಪದಿ ತುಳಿಯುತ್ತಿದ್ದಾರೆ. ಇದೊಂದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನೂ ಕವಿರಾಜ್ ತಮ್ಮದೇ ಶೈಲಿಯಲ್ಲಿ ಕಾವ್ಯಾತ್ಮಕವಾಗಿ ಅಚ್ಚು ಹಾಕಿಸಿದ್ದಾರೆ. [ಚಿತ್ರಗೀತೆಗಳ ಮಹಾರಾಜ ಕವಿರಾಜ್ ಸಂದರ್ಶನ]

ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿರುವ ಕವಿರಾಜ್ ಅವರಿಂದ ಇನ್ನು ಮುಂದೆ ಕನ್ನಡ ಚಿತ್ರರಸಿಕರು ಇನ್ನಷ್ಟು ವೈವಿಧ್ಯಮಯ ಹಾಡುಗಳನ್ನು ನಿರೀಕ್ಷಿಸಬಹುದು. ಕವಿರಾಜ್ ಮದುವೆಗೆ ಚಿತ್ರರಂಗದ ಸಾಕಷ್ಟು ಗಣ್ಯರು ಸಾಕ್ಷಿಯಾಗಲಿದ್ದು ಒನ್ಇಂಡಿಯಾ ಕಡೆಯಿಂದಲೂ ಅವರ ಮದುವೆಗೆ ಪ್ರೀತಿಯ ಹಾರೈಕೆಗಳು.
ಪ್ರೇಮ್ ನಿರ್ದೇಶನದ 'ಕರಿಯ' (2003) ಚಿತ್ರದ "ನನ್ನಲಿ ನಾನಿಲ್ಲ, ಮನದಲಿ ಏನಿಲ್ಲ.." ಎಂಬ ಗೀತೆಯ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟ ಕವಿರಾಜ್ ಅನತಿಕಾಲದಲ್ಲೇ ಖ್ಯಾತಿಯ ಉತ್ತುಂಗಕ್ಕೆ ತಲುಪಿದರು. ಅವರ ಲೇಖನಿಯಿಂದ ಪದೇಪದೇ ಗುನುಗುವಂತಹ ಹಲವಾರು ಗೀತೆಗಳು ಹೊರಹೊಮ್ಮಿವೆ.
ಕಣಕಣದೇ ಶಾರದೆ (ಆಪ್ತಮಿತ್ರ), ಜಿನುಜಿನುಗೋ ಜೇನಾ ಹನಿ (ಕಂಠಿ), ಸೂರ್ಯ ತಂಪು ಸೂಸು, ಗಾಳಿ ಮೆಲ್ಲ ಬೀಸು (ಸಿದ್ದು), ಗಗನವೆ ಬಾಗಿ (ಸಂಜು ವೆಡ್ಸ್ ಗೀತ), ನೀ ಓಡಿ ಬಂದಾಗ (ಶಿವ), ಪತ್ರ ಬರೆಯಲಾ ಚಿತ್ರ ಬಿಡಿಸಲಾ...(ಅರಮನೆ), ಮೊದಮೊದಲು ಭುವಿಗಿಳಿದಾ ಮಳೆ ಹನಿಯು...(ಯಶವಂತ್)...
ಜಿನುಜಿನುಗೋ ಜೇನಾಹನಿ...(ಯಶವಂತ್), ಬಂಗಾರಿ ಯಾರೇ ನೀ ಬುಲ್ ಬುಲ್...(ಗಜ), ಹೊಸದೊಂದು ಹೆಸರಿಡು ನನಗೆ...(ಗಾನಾ ಬಜಾನಾ), ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ...(ಬಿಂದಾಸ್), ತಂಗಾಳಿ ತಂದೆಯಾ ನನ್ನ ಬಾಳಲಿ...(ಲವ್ ಗುರು), ಸುಮ್ಮನೆ ಯಾಕೆ ಬಂದೆ...(ಜೀವ) ಮುಂತಾದವು ಅವರ ಹಿಟ್ ಗೀತೆಗಳ ಸಾಲಿನಲ್ಲಿ ನಿಲ್ಲುತ್ತವೆ. (ಏಜೆನ್ಸೀಸ್)


Click it and Unblock the Notifications











