ಎಕ್ಸ್ ಕ್ಯೂಸ್ ಮಿ ಅಜಯ್ ರಾವ್ ಗೆ ಹೀಗಾಗಬಾರದಿತ್ತು

ಎಕ್ಸ್ ಕ್ಯೂಸ್ ಮಿ ಚಿತ್ರದ ಮೂಲಕ ಆಫರ್ಗಳ ಮೇಲೆ ಆಫರ್ ಪಡೆದುಕೊಂಡು, ಆನಂತರ ಸಕ್ಸಸ್ ಕೊಡದೇ ಒಂದಷ್ಟು ದಿನ ಮನೆಯಲ್ಲೇ ಕಾಲ ಕಳೆದು ನಂತರ ಕೃಷ್ಣನ್ ಲವ್ ಸ್ಟೋರಿ ಮೂಲಕ ಮತ್ತೆ ಫಾರ್ಮ್ಗೆ ಬಂದಿದ್ದನ್ನು ಅಜಯ್ ಇನ್ನೂ ಮರೆತಿಲ್ಲ.
ನಂತರ ಬಂದ ಕೃಷ್ಣನ್ ಮ್ಯಾರೇಜ್ ಸ್ಟೋರಿ ಒಂದು ಮಟ್ಟಕ್ಕೆ ಹಿಟ್ ಎನಿಸಿಕೊಂಡಿತು. ಅಷ್ಟಕ್ಕೆ ಅಜಯ್ ಮತ್ತೆ ತನ್ನ ಹಳೆ ಚಾಳಿ ಶುರು ಮಾಡಿಕೊಂಡು ಕಾಲ್ಶೀಟ್ ಕೇಳಿಕೊಂಡು ಬಂದ ನಿರ್ದೇಶಕ, ನಿರ್ಮಾಪಕರ ಬಳಿ ವರಾತ ಶುರುವಿಟ್ಟು ಕೊಂಡಿದ್ದಾರಂತೆ.
ಪರಿಣಾಮ ಈಗ ಕೈಯಲ್ಲಿ ಚಿತ್ರವಿಲ್ಲದೇ, ನಟಿಸಿದ ಚಿತ್ರವೂ ಡಬ್ಬಾದಿಂದ ಹೊರಬರದೇ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಾಗಿದೆ ಅಜಯ್ ಪರಿಸ್ಥಿತಿ.
ಸದ್ಯಕ್ಕೆ ಅಜಯ್ ನಟಿಸಿರುವ ಅದ್ವೈತ ಹಾಗೂ ಕೃಷ್ಣ ಸನ್ ಆಫ್ ಸಿಎಂ ಬಿಡುಗಡೆಯಾಗಬೇಕಿರುವ ಚಿತ್ರಗಳು. ನಿಮ್ಮ ಪ್ರಕಾರ ಅವೆರಡೂ ಸಿನಿಮಾಗಳು ಯಾವಾಗ ಬಿಡುಗಡೆಯಾಗಬಹುದು ಎಂದು ಕೇಳಿದರೆ, ಅದ್ವೈತ ಸಿನಿಮಾದ ಬಗ್ಗೆ ಸಾಕಷ್ಟು ಹೋಪ್ ಇದೆ.
ಗಿರಿರಾಜ್ ಒಳ್ಳೆ ನಿರ್ದೇಶಕ ಹಾಗೂ ತಂತ್ರಜ್ಞ. ಅವರಿಗೂ ಚಿತ್ರದ ಮೇಲೆ ಸಾಕಷ್ಟು ಭರವಸೆಯಿದೆ. ಆದರೆ ನಮ್ಮ ನಿರ್ಮಾಪಕ ಸುರೇಶ್ಗೆ ಈ ವಿಷಯವಾಗಿ ಫೋನ್ ಮಾಡಿದ್ರೆ ಸ್ವಿಚಾಫ್ ಮಾಡಿಟ್ಟುಕೊಂಡಿದ್ದಾರೆ.
ನಾನೇನು ಮಾಡೋಕಾಗುತ್ತೆ ಹೇಳಿ. ಇನ್ನು ಕೃಷ್ಣ ಸನ್ ಆಫ್ ಸಿಎಂ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನೇನು ಮುಂದಿನ ತಿಂಗಳು ಕೃಷ್ಣ ತೆರೆಗೆ ಬರಬಹುದು ಎಂದು ಅಜಯ್ ರಾವ್ ನಿಟ್ಟುಸಿರು ಬಿಡುತ್ತಾರೆ.
ಅದಾದ ಮೇಲೆ ಮುಂದಿನ ಸಿನಿಮಾ ಯಾವುದು ಎಂದು ಅಜಯ್ ರಾವ್ ಅವರ ಬಳಿ ಕೇಳಿದರೆ ಎಲ್ಲಾ ಹೀರೋ/ಹೀರೋಯಿನ್ಗಳಂತೆಯೇ ಸ್ಟೋರಿ ಕೇಳ್ತಾ ಇದ್ದೀನಿ, ಇಷ್ಟ ಆದ್ರೆ ಆಫರ್ ಒಪ್ಕೋತೀನಿ ಇಲ್ಲಾಂದ್ರೆ ಡ್ರಾಪ್ ಮಾಡ್ತೀನಿ ಎನ್ನುತ್ತಾರೆ.


Click it and Unblock the Notifications











