ಅಗಲಿದ 'ಸಂಗೀತ ಮಾಂತ್ರಿಕನಿಗೆ' ಕಂಬನಿ ಮಿಡಿದ ಕನ್ನಡ ಸಿನಿಪ್ರಮುಖರು
ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ನಿಧನರಾಗಿದ್ದಾರೆ. ಕೊರೊನಾಕ್ಕೆ ತುತ್ತಾಗಿ ಆಗಸ್ಟ್ 05 ರಂದು ಆಸ್ಪತ್ರೆ ಸೇರಿದ್ದ ಅವರು, ಬಹುಸಮಯ ಅನಾರೋಗ್ಯದೊಂದಿಗೆ ಹೋರಾಡಿ ಇಂದು ಮಧ್ಯಾಹ್ನ ದೇಹ ತ್ಯಜಿಸಿದ್ದಾರೆ.
ಕಳೆದ ಐವತ್ತು ವರ್ಷದಿಂದ ಹಾಡುಗಾರಿಕೆಯನ್ನು ಉಸಿರಾಗಿಸಿಕೊಂಡಿದ್ದ ಎಸ್ಪಿಬಿ ಬಾಲಸುಬ್ರಹ್ಮಣ್ಯಂ ಅವರಿಗೆ ಕರ್ನಾಟಕ, ಕನ್ನಡದ ಮೇಲೆ ವಿಪರೀತ ಗೌರವ, ದೇವ ಭಾವ. ಕನ್ನಡದಲ್ಲಿ ಮೂರು ತಲೆಮಾರಿನ ನಾಯಕ ನಟರಿಗೆ ಕಂಠದಾನ ಮಾಡಿದ್ದಾರೆ ಎಸ್ಪಿಬಿ.
ಗಾನ ಗಂಧರ್ವ ಅಗಲಿದ ಈ ಹೊತ್ತಿನಲ್ಲಿ, ಕನ್ನಡದ ಹಲವಾರು ಸಿನಿಪ್ರಮುಖರು ಎಸ್ಪಿಬಿ ಗಾಗಿ ಕಂಬನಿ ಮಿಡಿದಿದ್ದಾರೆ. ನಟ-ನಟಿಯರು, ಸಂಗೀತ ನಿರ್ದೇಶಕರು, ಹಾಡುಗಾರರು, ಬರಹಗಾರರು, ನಿರ್ದೇಶಕ, ನಿರ್ಮಾಪಕರುಗಳು ಎಸ್ಪಿಬಿ ಅವರನ್ನು ನೆನೆದು ಕಂಬನಿ ಮಿಡಿದಿದ್ದಾರೆ.

ದೇಶಕ್ಕೆ ದುಃಖಕರ ಸಂಗತಿ: ದರ್ಶನ್ ಕಂಬನಿ
ತಮ್ಮ ಸುಮಧುರ ಕಂಠದಿಂದ 50ಕ್ಕೂ ಹೆಚ್ಚು ವರ್ಷಗಳಿಂದಲೂ ಎಲ್ಲರ ಮನ ತಣಿಸಿದ ಅದ್ಭುತ ಸಹೃದಯಿ ಗಾಯಕ, ಲೆಜೆಂಡ್ ಎಸ್.ಪಿ. ಬಾಲಸುಬ್ರಮಣ್ಯಂ ರವರು ಇಂದು ವಿಧಿವಶರಾಗಿರುವುದು ನಮ್ಮ ದೇಶಕ್ಕೆ ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ದೇವರಲ್ಲಿ ಮನವಿ ಮಾಡುತ್ತೇನೆ ನಿಮ್ಮ ದಾಸ ದರ್ಶನ್.

ಅವರನ್ನು ಖುಷಿಯಾಗಿ ನೋಡಿದ್ದೇನೆ, ಶವವನ್ನು ನೋಡಲಾರೆ: ಶಿವಣ್ಣ
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಖುಷಿಯಾಗಿ ನೋಡಿದ್ದೇನೆ, ಅವರು ನನ್ನ ಮನಸಿನಲ್ಲಿ ಭದ್ರವಾಗಿದ್ದಾರೆ. ಚೆನ್ನೈಗೆ ಹೋಗಿಬಿಡುವ ಎನಿಸುತ್ತಿದೆ ಆದರೆ ಹೋಗುವುದಿಲ್ಲ, ಅವರ ಚಿತ್ರ ಮನಸಲ್ಲಿ ಹಾಗೆಯೇ ಇರಲಿ. ಅವರ ಮುಖ ನೋಡಿ ನಾನು ಅವರನ್ನು ಕಳಿಸಿಕೊಡಲಾರೆ, ಅವರು ನನ್ನೊಂದಿಗೆ ಇದ್ದಾರೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ನಟ ರಮೇಶ್ ಅರವಿಂದ್ ಸಂತಾಪ
ನಟ ರಮೇಶ್ ಅರವಿಂದ್ ಸಹ ಎಸ್ಪಿಬಿ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದು, 'ಅವರೊಬ್ಬ ಸರಳ ವ್ಯಕ್ತಿಯಾಗಿದ್ದರು, ಆದರೆ ಅಸಾಮಾನ್ಯ ಸಂಗೀತ ಪ್ರತಿಭೆಯಾಗಿದ್ದರು. ಅವರ ಅಗಲಿಕೆ ತುಂಬಲಾರದ ನಷ್ಟ, ಆದರೆ ಅವರ ಹಾಡುಗಳ ಮೂಲಕ ಅವರು ಜೀವಂತವಾಗಿರಲಿದ್ದಾರೆ' ಎಂದಿದ್ದಾರೆ.

ಎಸ್ಪಿಬಿಗೆ ಯೋಗರಾಜ್ ಭಟ್ ನುಡಿನಮನ
ನಿರ್ದೇಶಕ ಯೋಗರಾಜ್ ಭಟ್ ಎಸ್ಪಿಬಿ ಅವರಿಗೆ ನುಡಿನಮನ ಸಲ್ಲಿಸಿದ್ದಾರೆ. 'ವಿಷಾದ ಮರೆಸುವಷ್ಟು ಹಾಡುಗಳನ್ನು ಹಾಡುಗಳನ್ನು ಕರುಣಿಸಿ ನೆನಪುಗಳಲ್ಲೇ ಸದಾಕಾಲ ಜೀವಂತ ಉಳಿಯುವುದು ಎಲ್ಲರಿಗೂ ಸಾಧ್ಯವಿಲ್ಲ, ಎಂದಿಗೂ ಬದುಕುಳಿಯುವ ತಾಕತ್ತು ಕಲಾವಿದನಿಗೆ ಮಾತ್ರ, ಹೋಗಿ ಬನ್ನಿ' ಎಂದಿದ್ದಾರೆ ಯೋಗರಾಜ್ ಭಟ್.

ಎಸ್ಪಿಬಿ ಗೆ ನೀನಾಸಂ ಸತೀಶ್ ವಂದನೆ
ಕಲಾವಿದರಾಗಿ ಅಷ್ಟೇ ಅಲ್ಲ, ಮನುಷ್ಯರಾಗಿ ಬದುಕಿದ ಅದ್ಬುತ ಜೀವವೊಂದು,ಉಸಿರು ನಿಲ್ಲಿಸಿದೆ.ನಿಮ್ಮ ಪ್ರೀತಿ ಜಗತ್ತಿನ ತುಂಬ ಹರಡಿ, ನಮ್ಮೊಳಗೆ ಜೀವಂತವಾಗಿದೆ. ಅಂತಿಮ ನಮನಗಳು ಎಂದು ನಟ ನೀನಾಸಂ ಸತೀಶ್ ಹೇಳಿದ್ದಾರೆ.
Recommended Video

ಗಾಯನ ನಿಂತಿದೆ ಹಾಡುಗಳಲ್ಲ: ಸಂತೋಶ್ ಆನಂದ್ರಾಮ್
ಗಾಯನ ನಿಂತಿದೆ ಹಾಡುಗಳಲ್ಲ... ಉಸಿರು ನಿಂತಿದೆ ಹೆಸರಲ್ಲ.... ಪ್ರತಿ ಸಾರಿ ನಿಮ್ಮ ಧ್ವನಿ ಕೇಳಿದಾಗಲೂ ನೀವು ಜೀವಿಸುತ್ತೀರಿ ನಮ್ಮಲ್ಲಿ, ಈ ನಾಡಲ್ಲಿ. ಓಂ ಶಾಂತಿ ಎಂದು ನಿರ್ದೇಶಕ ಸಂತೋಶ್ ಆನಂದ್ರಾಮ್ ಟ್ವೀಟ್ ಮಾಡಿದ್ದಾರೆ.


Click it and Unblock the Notifications











