ಹುಬ್ಬಳ್ಳಿಯಲ್ಲಿ 'ಚೌಕ' ಚಿತ್ರದ ವಿಜಯೋತ್ಸವ
ಯಾವುದೇ ರೀತಿಯಲ್ಲಿ ಹೆಚ್ಚು ಪಬ್ಲಿಸಿಟಿ ಕೊಡದೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ 'ಚೌಕ' ಚಿತ್ರ. ಇದೇ ಖುಷಿಯಲ್ಲಿರುವ 'ಚೌಕ' ಚಿತ್ರತಂಡ ಈಗ ಕರ್ನಾಟಕದ ಹಲವು ಸ್ಥಳಗಳಲ್ಲಿ ವಿಜಯ ಯಾತ್ರೆ ಮಾಡುತ್ತಿದೆ.
'ಚೌಕ' ಚಿತ್ರತಂಡ ಯಶಸ್ಸಿನ ಸಂತೋಷದಲ್ಲಿ ಹುಬ್ಬಳಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ವೇಳೆ ಚಿತ್ರದ ನಿರ್ದೇಶಕ ತರುಣ್ ಸುಧೀರ್ ಮಾತನಾಡಿ,'ಸಿನಿಮಾ ಬಿಡುಗಡೆಗೆ ಮೊದಲು ಎಲ್ಲರೂ ಪ್ರಚಾರ ಮಾಡುತ್ತಾರೆ. ಆದರೆ ನಾವು ಚಿತ್ರ ನೋಡುವ ಪ್ರೇಕ್ಷಕರ ಅಭಿಪ್ರಾಯವನ್ನು ನೇರವಾಗಿ ತಿಳಿದುಕೊಳ್ಳುತ್ತಿದ್ದೇವೆ. ಪ್ರೇಕ್ಷಕರೊಂದಿಗೆ ಕುಳಿತು ಸಿನಿಮಾ ನೋಡುವುದು ಒಂದು ಒಳ್ಳೆಯ ಅನುಭವ' ಎಂದು ಒನ್ ಇಂಡಿಯಾ ದೊಂದಿಗೆ ಹೇಳಿಕೊಂಡಿದ್ದಾರೆ.

'ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಚೌಕ' ಚಿತ್ರದ ಕಥೆಯನ್ನು ಹೆಣೆಯಲು ನಾಲ್ಕು ವರ್ಷ ಬೇಕಾಯಿತು. ಈಗ ಜನರಿಂದ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿರುವುದು ನೆಮ್ಮದಿ ನೀಡಿದೆ', ಎಂದು ನಿರ್ಮಾಪಕ ಯೋಗೀಶ್ ದ್ವಾರಕೀಶ್ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಸಿನಿ ಪ್ರಿಯರ ಅಭಿಪ್ರಾಯ ತಿಳಿಯುವ ವಿಜಯ ಯಾತ್ರೆಯಲ್ಲಿ ಚಿತ್ರದ ನಾಯಕ ನಟರಾದ ಪ್ರಜ್ವಲ್ ದೇವರಾಜ್, ಪ್ರೇಮ್ ಮತ್ತು ದಿಗಂತ್ ಅವರು ಸಹ ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಪತ್ರಿಕಾ ಗೋಷ್ಠಿಯಲ್ಲಿ ಪ್ರಜ್ವಲ್ ದೇವರಾಜ್ ಮಾತನಾಡಿ, ' 'ಚೌಕ' ಸಿನಿಮಾ ಇಡೀ ರಾಜ್ಯದಾದ್ಯಂತ ಮನೆಮಾತಾಗಿದೆ. ಕೇವಲ ಎರಡು ವಾರಗಳಲ್ಲಿಯೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ' ಎಂದು ಸಂತೋಷ ಹಂಚಿಕೊಂಡಿದ್ದಾರೆ.


Click it and Unblock the Notifications











