'ದಂಡುಪಾಳ್ಯ-2' ಚಿತ್ರೀಕರಣ ನಿಂತಿಲ್ಲ, ಮುಗಿಯಿತು!
ಬರೀ ಪೋಸ್ಟರ್ ಗಳ ಮೂಲಕ ಬೆಚ್ಚಿಬೀಳಿಸಿರುವ 'ದಂಡುಪಾಳ್ಯ-2' ಚಿತ್ರದ ಶೂಟಿಂಗ್ ನಿಂತುಹೋಗಿದೆ, ಬಿಡುಗಡೆಯಾಗಿವುದು ಅನುಮಾನ? ಎಂಬ ಮಾತುಗಳು ಕೇಳಿ ಬರುತ್ತಿತ್ತು.
ಆದ್ರೆ, ಇದೆಲ್ಲಾ ಬರಿ ಸುಳ್ಳು ಎಂದಿರುವ ಚಿತ್ರತಂಡ ಆದಷ್ಟೂ ಬೇಗ ಚಿತ್ರೀಕರಣ ಮುಗಿಸಿ ಚಿತ್ರಮಂದಿರಕ್ಕೆ ಬರಲಿದ್ದೇವೆ ಎಂದಿದ್ದಾರೆ. ಎಲ್ಲ ಅಂದುಕೊಂಡತೆ ಆಗಿದ್ರೆ, ಇಷ್ಟೋತ್ತಿಗಾಗಲೇ 'ದಂಡುಪಾಳ್ಯ-2', ದೊಡ್ಡ ಪರದೆ ಮೇಲೆ ಬರಬೇಕಿತ್ತು. ಆದ್ರೆ, ಚಿತ್ರದ ಪೂರ್ವ ತಯಾರಿ ಹಾಗೂ ಕಲಾವಿದರ ಬ್ಯುಸಿ ಶೆಡ್ಯೂಲ್ ನಿಂದ ಚಿತ್ರೀಕರಣ ವಿಳಂಬವಾಗಿತ್ತು ಎನ್ನಲಾಗುತ್ತಿದೆ.[ಅಸಹ್ಯ ಹುಟ್ಟಿಸುವ 'ದಂಡುಪಾಳ್ಯ 2'ರ ಚಿತ್ರಗಳು, ಛೀ!]
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ 'ರಾ' ಸ್ಟೈಲ್ ಪೋಸ್ಟರ್ ಗಳು ಸಿನಿರಸಿಕರ ಕುತೂಹಲವನ್ನ ಹೆಚ್ಚಾಗಿಸಿದ್ದು, ಕೆಲವೇ ದಿನಗಳಲ್ಲಿ 'ದಂಡುಪಾಳ್ಯ' ಹಂತಕರ ಅಟ್ಟಹಾಸವನ್ನ ಮತ್ತೆ ತೆರೆಮೇಲೆ ನೋಡಬಹುದಾಗಿದೆ.

'ದಂಡುಪಾಳ್ಯ-2' ಕಂಪ್ಲೀಟ್ !
ಬಹುತೇಕ ಚಿತ್ರೀಕರಣ ಮುಗಿಸಿದ್ದ 'ದಂಡುಪಾಳ್ಯ-2' ಈಗ ಕೊನೆಯ ಹಂತದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದೆ. ಹಲವು ತಿಂಗಳಿಂದ ಚಿತ್ರೀಕರಣ ನಿಲ್ಲಿಸಿದ್ದ 'ದಂಡುಪಾಳ್ಯ' ಈಗ ಮತ್ತೆ ಶೂಟಿಂಗ್ ಶುರು ಮಾಡಿದ್ದು, ಕೊನೆಯ ಮೂರ್ನಾಲ್ಕು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆಯಂತೆ.

ತಡವಾಗಲು ಕಾರಣವೇನು?
ಇಷ್ಟಕ್ಕೂ ಚಿತ್ರ ನಿಧಾನವಾಗುವುದಕ್ಕೆ ಕಾರಣವೇನು ಎಂದರೆ, ಡೇಟ್ ಕ್ಲಾಶ್ ಎಂಬ ಉತ್ತರ ಚಿತ್ರತಂಡದಿಂದ ಬರುತ್ತದೆ. ಚಿತ್ರದಲ್ಲಿ ದೊಡ್ಡ ದೊಡ್ಡ ಕಲಾವಿದರು ಇರುವ ಕಾರಣ ಮತ್ತು ಅವರೆಲ್ಲಾ ಬಿಝಿಯಾಗಿದ್ದ ಕಾರಣ, ಅವರೆಲ್ಲರ ಡೇಟ್ಸ್ ಹೊಂದಿಸುವುದು ಕಷ್ಟವಾಗಿತ್ತಂತೆ. ಹಾಗಾಗಿ ಚಿತ್ರದ ಚಿತ್ರೀಕರಣ ವಿಳಂಬವಾಗಿತ್ತಂತೆ.

ಶ್ರೀನಿವಾಸ್ ರಾಜು, ವೆಂಕಟ್ ಜುಗಲ್ ಬಂದಿ!
"ದಂಡುಪಾಳ್ಯ 2' ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವುದು ಶ್ರೀನಿವಾಸರಾಜು. ಇನ್ನೂ ಚಿತ್ರವನ್ನು ವೆಂಕಟ್ ನಿರ್ಮಾಣ ಮಾಡುತ್ತಿದ್ದಾರೆ.

'ರಾ' ಲುಕ್ ನಲ್ಲಿ ಪೂಜಾಗಾಂಧಿ!
'ದಂಡುಪಾಳ್ಯ' ಮೊದಲ ಭಾಗದಲ್ಲಿ ತಮ್ಮ ದಿಟ್ಟೆದೆಯ ಅಭಿನಯದ ಮೂಲಕ ಎಲ್ಲರನ್ನ ಬೆಚ್ಚಿಬೀಳಿಸಿದ್ದ ಪೂಜಾ ಗಾಂಧಿ, 'ದಂಡುಪಾಳ್ಯ-2' ಚಿತ್ರದಲ್ಲೂ ಕಮಾಲ್ ಮಾಡುತ್ತಿದ್ದಾರೆ. ತಮ್ಮ 'ರಾ' ಸ್ಟೈಲ್ ನ ಪೋಸ್ಟರ್ ಗಳು ಈಗಾಗಲೇ ರಿವಿಲ್ ಆಗಿದ್ದು, ಪೂಜಾ ಗಾಂಧಿ ಬಾಯಲ್ಲಿ ಪೊಲೀಸರ ಬೂಟು ನೋಡುತ್ತಿದ್ದರೆ, 'ದಂಡುಪಾಳ್ಯ ಭಾಗ 2' ರಲ್ಲೂ ಪೂಜಾ ಅವರು ಹಠಮಾರಿ ಹೆಂಗಸಾಗಿ, ಸಖತ್ ರಗಡ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ ಎನ್ನುವುದರಲ್ಲಿ ಕುತೂಹಲ ಹೆಚ್ಚಾಗುತ್ತಿದೆ.

ಖತರನಕ್ ಕಲಾವಿದರು!
ಅದ್ಹಾಗೆ 'ದಂಡುಪಾಳ್ಯ' ಚಿತ್ರದಲ್ಲಿ ಅದ್ಭುತ ಕಲಾವಿದರು ಕಾಣಿಸಿಕೊಂಡಿದ್ದಾರೆ. ರವಿ ಕಾಳೆ, ಮಕರಂದ್ ದೇಶ್, ಪಾಂಡೆ, ಕರಿ ಸುಬ್ಬು, ಮುನಿ, ಡ್ಯಾನಿ, ಪೆಟ್ರೋಲ್ ಪ್ರಸನ್ನ, ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಒಟ್ನಲ್ಲಿ 'ಭಾಗ 1'ರ ತಾರಾಗಣವೇ ಇಲ್ಲೂ ಮುಂದುವರಿದಿದೆ.

'ದಂಡುಪಾಳ್ಯ' ಗ್ಯಾಂಗ್ ನಲ್ಲಿ ಸರ್ಪ್ರೈಸ್ ಎಂಟ್ರಿ!
'ದಂಡುಪಾಳ್ಯ-2' ಚಿತ್ರದ ಸರ್ಪ್ರೈಸ್ ಅಂದ್ರೆ ಸಂಜನಾ, ಶೃತಿ ಹಾಗೂ ಆದಿ ಲೋಕೇಶ್. ಮೊದಲ ಭಾಗದಲ್ಲಿ ಅಭಿನಯಿಸದ ಈ ಮೂವರು ಮುಂದುವರೆದ ಭಾಗದಲ್ಲಿ ಬಣ್ಣ ಹಚ್ಚಿದ್ದಾರಂತೆ. ಸಂಜನಾ ಹಾಗೂ ಆಧಿ ಲೋಕೇಶ್ ದಂಡುಪಾಳ್ಯ ಗ್ಯಾಂಗ್ ನಲ್ಲಿ ಕಾಣಿಸಿಕೊಂಡ್ರೆ, ಶೃತಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ.[ಏನು 'ದಂಡುಪಾಳ್ಯ 2' ನಲ್ಲಿ ಬಿಗ್ ಬಾಸ್ ಶ್ರುತಿನಾ? ]

ಕೋರ್ಟ್ ನಿಂದ ಕ್ಲೀನ್ ಚೀಟ್!
ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿರುವ ದಂಡುಪಾಳ್ಯಖೈದಿಗಳು, ತಮ್ಮ ಪರ ವಕೀಲರ ಮೂಲಕ ಬೆಂಗಳೂರು ಸಿವಿಲ್ ನ್ಯಾಯಾಲಯಕ್ಕೆ "ದಂಡುಪಾಳ್ಯ' ಚಿತ್ರ ನಮ್ಮ ಜೀವನದ ಕಥನವಾಗಿದ್ದು, ಆ ಚಿತ್ರದಲ್ಲಿ ತಮ್ಮ ಪಾತ್ರಗಳನ್ನು ತೀರ ಕ್ರೂರವಾಗಿ ಮತ್ತು ಅವಮಾನಕರವಾಗಿ ತೋರಿಸಿದ್ದಾರೆಂದು ದೂರಿ, "ದಂಡುಪಾಳ್ಯ-2' ಚಿತ್ರದ ನಿರ್ಮಾಣ ಹಾಗೂ ಪ್ರದರ್ಶನಕ್ಕೆ ಮಧ್ಯಂತರ ತಡೆಯಾಜ್ಞೆ ಕೋರಿದ್ದರು. ಆದ್ರೆ, ನ್ಯಾಯಾಲಯ ಅರ್ಜಿಯನ್ನ ತಿರಸ್ಕರಿಸಿ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡಿತ್ತು.

ಬೆಳ್ಳಿತೆರೆಯಲ್ಲಿ ಮತ್ತೊಂದು ಕ್ರೌರ್ಯ ಕಥೆ ಗ್ಯಾರೆಂಟಿ!
ಈ ಚಿತ್ರಕ್ಕೆಂದೇ ಬೆಂಗಳೂರಿನ ಅರಮನೆ ಮೈದಾನದ ಹಿಂಭಾಗದಲ್ಲಿ ಬಳ್ಳಾರಿ ಜೈಲಿನ ಸೆಟ್ ಹಾಕಿಸಿ, ಅಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಜೊತೆಗೆ ಪರಪ್ಪನ ಅಗ್ರಹಾರದ ಜೈಲಿನಲ್ಲೂ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ ಮತ್ತು ವೆಂಕಟ್ ಪ್ರಸಾದ್ ಅವರ ಛಾಯಾಗ್ರಹಣವಿದೆ. ಒಟ್ನಲ್ಲಿ ಚಿತ್ರದ ಫಸ್ಟ್ ಲುಕ್ ಗಳನ್ನು ನೋಡುತ್ತಿದ್ದರೆ, ಎಲ್ಲಾ ಕಡೆ ಕ್ರೌರ್ಯಗಳೇ ಎರ್ರಾಬಿರ್ರಿಯಾಗಿ ಎದ್ದು ಕಾಣುತ್ತಿದೆ. ಈ ಬಾರಿ ಕೂಡ ಈ ಸಿನಿಮಾ ಜನರ ಕೆಂಗಣ್ಣಿಗೆ ಗುರಿಯಾಗೋದು ಗ್ಯಾರಂಟಿ ಎನ್ನುವಂತಿದೆ.


Click it and Unblock the Notifications











