'ಹಗ್ಗದ ಕೊನೆ' ಹಿಡಿದು ಬರುತ್ತಿದ್ದಾರೆ ನವೀನ್ ಕೃಷ್ಣ
ಈ ವರ್ಷದ ಕೊನೆಗೆ ಬರುತ್ತಿರುವ ಬಹುನಿರೀಕ್ಷಿತ ಚಿತ್ರ 'ಹಗ್ಗದ ಕೊನೆ'. ಈ ಚಿತ್ರ ಈಗಾಗಲೆ ಎರಡು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಈ ಸಿನಿಮಾ ಆಸ್ಕರ್ ಪ್ರಶಸ್ತಿಗೂ ಹೋಗಬಹುದು ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುತ್ತಾ ಹೇಳಿದ್ದರು ನವೀನ್ ಕೃಷ್ಣ.
'ಹಗ್ಗದ ಕೊನೆ' - 1962 ರಲ್ಲಿ ನಾಟಕಕಾರ ಪರ್ವತವಾಣಿ ಅವರು ರಚಿಸಿದ ಕಿರು ನಾಟಕದ ಆಧಾರಿತ ಚಿತ್ರ. ದಯಾಳ್ ಪದ್ಮನಾಭನ್ ಅವರು ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ನಾಯಕ ನವೀನ್ ಕೃಷ್ಣ ಅವರು ಸಂಭಾಷಣೆ ಬರೆದಿದ್ದಾರೆ. [ನವೀನ್ ಕೃಷ್ಣ ಸಂದರ್ಶನ]

ಈ ಚಿತ್ರದ ಬಗ್ಗೆ ಫಿಲ್ಮಿಬೀಟ್ ಸಂದರ್ಶನದಲ್ಲಿ ಮಾತನಾಡಿರುವ ನವೀನ್ ಕೃಷ್ಣ ಅವರು, "ಹಗ್ಗದ ಕೊನೆ ಸಂಪೂರ್ಣ ಕಲಾತ್ಮಕ ಚಿತ್ರ ಅಂತ ಹೇಳುವುದು ಕಷ್ಟ. ಆದ್ರೆ, ಸಿನಿಮಾದಲ್ಲಿ ಕಮರ್ಶಿಯಲ್ ಅಂಶಗಳೂ ಇಲ್ಲ. ಇದು ಒಂದು ರೀತಿಯ ಬ್ರಿಡ್ಜ್ ಸಿನಿಮಾ. ಇದರಲ್ಲಿ ಮರಣದಂಡನೆಗೆ ಒಳಗಾಗಿರುವ ಅಪರಾಧಿ. ಅವನ ಮನಸ್ಸಲ್ಲಿ ಮೂಡುವ ಪ್ರಶ್ನೆಗಳನ್ನ ಇಟ್ಟುಕೊಂಡು ಚಿತ್ರಕಥೆ ರಚಿಸಲಾಗಿದೆ. ಮರಣದಂಡನೆ ಅಂದ್ರೆ ಹ್ಯಾಂಗ್ ಟಿಲ್ ಡೆತ್. ಅದು ಒಂಥರಾ Organized Killing. ''ನಾನು ಮಾಡಿರುವ ಕೊಲೆಗೂ ನೀವು ಮಾಡುತ್ತಿರುವುದಕ್ಕೂ ವ್ಯತ್ಯಾಸವೇನು'', ಅಂತ ಪ್ರಶ್ನೆಗಳನ್ನು ಮಾಡುವ ಅಪರಾಧಿ 'ಚೆನ್ನ'. ಜೈಲಿನ ಅಧಿಕಾರಿ ಮತ್ತು ಅಪರಾಧಿ ನಡುವೆ ನಡೆಯುವ ವಾಗ್ವಾದವೇ ಚಿತ್ರದ ಕಥೆ" ಎಂದಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]
ಉಮೇಶ್ ಬಣಕರ್ ಮತ್ತು ದಯಾಳ್ ಪದ್ಮನಾಭನ್ ಅವರು ನಿರ್ಮಾಪಕರು. ಛಾಯಾಗ್ರಹಣ ಪಾಂಡಿಕುಮಾರ್ ಎಸ್, ಸಂಗೀತ ಗೌತಮ್ ಶ್ರೀವತ್ಸವ್, ಸಂಕಲನ ರಘುನಾಥ್, ಕಲೆ ಮೋಹನ್ ಬಿ ಕೆರೆ ಅವರದು. ಸುಚೇಂದ್ರ ಪ್ರಸಾದ್, ಮೋಹನ್, ಶ್ರೀನಿವಾಸಮೂರ್ತಿ, ದತ್ತಣ್ಣ, ಸಿಹಿಕಹಿ ಗೀತಾ, ವಿ ಮನೋಹರ್ ಹಾಗೂ ಇತರರು ತಾರಗಣದಲ್ಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











