ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚಿಟ್ ಪಡೆದ ಸೂರಿ 'ಕೆಂಡಸಂಪಿಗೆ'
ಇತ್ತೀಚೆಗೆ ಗಾಂಧಿನಗರದಲ್ಲಿ ಒಂದರ ನಂತರ ಮತ್ತೊಂದು ಚಿತ್ರಗಳು ತೆರೆ ಮೇಲೆ ಬರುತ್ತಲೇ ಇದೆ. ಇದೀಗ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.
'ದುನಿಯಾ' ಸೂರಿ ಆಕ್ಷನ್-ಕಟ್ ಹೇಳಿರುವ 'ಕೆಂಡಸಂಪಿಗೆ' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕ್ಲೀನ್ ಬೌಲ್ಡ್ ಆಗಿ ಯಾವುದೇ ಸೀನ್ ಗೂ ಕತ್ತರಿ ಹಾಕದೇ ಯು/ಎ ಪ್ರಮಾಣಪತ್ರ ನೀಡಿ ಅಭಿನಂದಿಸಿದೆ. ಆಗಸ್ಟ್ 21 ರಂದು ತೆರೆಯ ಮೇಲೆ 'ಕೆಂಡಸಂಪಿಗೆ' ತನ್ನ ಪರಿಮಳ ಸೂಸಲಿದೆ.

ಪೂರ್ಣ ಸ್ಕ್ರೀನ್ ಪ್ಲೇ ಆಗಿರುವ 'ಕೆಂಡಸಂಪಿಗೆ' ಎಲ್ಲಾ ಥರದ ಸಿನಿಮಾದ ಥರ ಅಲ್ಲವೇ ಅಲ್ಲ ಬದಲಾಗಿ ವಿಭಿನ್ನ ಮಾದರಿಯಲ್ಲಿ ಚಿತ್ರ ಮಾಡಲಾಗಿದೆ. ಎಲ್ಲಾ ತಂತ್ರಜ್ಞರು ಒಟ್ಟಾಗಿ ಮಾಡಿರುವ ಈ ವರ್ಷದ ಬಹುನಿರೀಕ್ಷಿತ ಚಿತ್ರ ಅಂದರೂ ತಪ್ಪಾಗ್ಲಿಕ್ಕಿಲ್ಲಾ.
ಒಂಥರಾ ರೋಮ್ಯಾಂಟಿಕ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ 'ಕೆಂಡಸಂಪಿಗೆ' ಗಿಣಿಮರಿ ಕೇಸ್ ಎನ್ನುವ ಅಡಿಬರಹ ಇಟ್ಟುಕೊಂಡು ಒಂದು ಕೇಸಿನ ಸುತ್ತ ಇಡೀ ಚಿತ್ರದ ಕಥೆ ಸುತ್ತುವ ಹಾಗೆ ಮಾಡಿದ್ದಾರೆ ನಿರ್ದೇಶಕ 'ದುನಿಯಾ' ಸೂರಿ.

ಚಿತ್ರದ ನಾಯಕ, ನಾಯಕಿ ಪಾತ್ರದಲ್ಲಿ ವಿಕ್ಕಿ ಹಾಗೂ ಮಾನ್ವಿತ ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಗೆ ಇಬ್ಬರದೂ ಪ್ರೇಕ್ಷಕರಿಗೆ ಹೊಸ ಮುಖಗಳೇ ಆದರೂ ಅಭಿನಯದಲ್ಲಿ ಹಳೆಯವರಾಗಿ ಕಂಡುಬರುತ್ತಾರೆ.
ಪ್ರಮೀಳಾ ಫಿಲ್ಮ ಫ್ಯಾಕ್ಟರಿ ಪ್ರೊಡಕ್ಷನ್ ನಲ್ಲಿ ಮೂಡಿಬರುತ್ತಿರುವ 'ಕೆಂಡಸಂಪಿಗೆ' ಚಿತ್ರಕ್ಕೆ ವಿ.ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಮೂಲಕ 'ಕೆಂಡಸಂಪಿಗೆ' ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಒಟ್ನಲ್ಲಿ ಕೇವಲ ಏಳು ದಿನಗಳಲ್ಲಿ ನಡೆಯುವ ಕಥೆಯನ್ನು ಹೊಂದಿರುವ 'ಕೆಂಡಸಂಪಿಗೆ' ಪ್ರೇಕ್ಷಕರಿಗೆ ಥ್ರಿಲ್ಲ್ ನೀಡೋದಂತು ಗ್ಯಾರಂಟಿ. ಇನ್ನುಳಿದಂತೆ ಶೀತಲ್ ಶೆಟ್ಟಿ, ರಾಜೇಶ್, ಚಂದ್ರಶೇಖರ್ ಎಸ್, ನಾರಾಯಣ ಸ್ವಾಮಿ, ಪ್ರಕಾಶ್ ಬೆಳವಾಡಿ, ಚಂದ್ರಿಕಾ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.


Click it and Unblock the Notifications











