ಮುತ್ತಪ್ಪ ರೈ ಚಾಲನೆ ನೀಡಿದ 'ಮಂಡ್ಯ ಸ್ಟಾರ್'
ಸಾಮಾನ್ಯವಾಗಿ ಮಂಡ್ಯ ಸ್ಟಾರ್ ಎಂದರೆ ಥಟ್ಟನೆ ನೆನಪಿಗೆ ಬರುವುದು ರೆಬೆಲ್ ಸ್ಟಾರ್ ಅಂಬರೀಶ್. ಇಂಡಿಯಾದ ಮಂಡ್ಯಗೆ ಅವರು ಬಿಟ್ಟರೆ ಇನ್ಯಾರು ಸ್ಟಾರ್ ಆಗಲು ಸಾಧ್ಯ. ಇದೀಗ ಅದೇ ಹೆಸರಿನಲ್ಲಿ ಚಿತ್ರವೊಂದು ಸೆಟ್ಟೇರಿದೆ. ಚಿತ್ರದ ಹೆಸರೇ 'ಮಂಡ್ಯ ಸ್ಟಾರ್'.
ಅರಮನೆಗಳ ನಗರ ಮೈಸೂರಿನಲ್ಲಿ ಆಗಸ್ಟ್ 20ರಂದು ನಾಯ್ಡು ನಗರ ಬಸ್ ನಿಲ್ದಾಣದ ಹತ್ತಿರ 'ಮಂಡ್ಯ ಸ್ಟಾರ್' ಸಿನಿಮಾ ಮುಹೂರ್ತ ಸಮಾರಂಭ ಹಾಗೂ ಹಿಡನ್ ಫ್ರೇಮ್ ಮೀಡಿಯಾ ಪ್ರೊಡಕ್ಷನ್ ಸಂಸ್ಥೆಯ ಉದ್ಘಾಟನೆ ನೆರವವೇರಿತು.
ಶಾಸಕರಾದ ಚೆಲುವನರಾಯಣಸ್ವಾಮಿ ಅವರು 'ಮಂಡ್ಯ ಸ್ಟಾರ್' ಸಿನಿಮಾದ ಮೊದಲ ದೃಷ್ಯಕ್ಕೆ ಕ್ಯಾಮೆರಾ ಚಾಲನೆ ಮಾಡಿದರು, ಜಯ ಕರ್ನಾಟಕ ಅಧ್ಯಕ್ಷ ಮುತ್ತಪ್ಪ ರೈ ಅವರು ಕ್ಲಾಪ್ ಮಾಡಿದರು. ಆನಂತರ ಸುಸ್ಸಜ್ಜಿತವಾದ ಹಿಡನ್ ಫ್ರೇಮ್ ಡಿಜಿಟಲ್ ಸ್ಟುಡಿಯೋ ಸಿನಿಮಾ ಹಾಗೂ ಟಿ ವಿ ತಾಂತ್ರಿಕ ಉಪಯೋಗಿ ಸಂಸ್ಥೆಯನ್ನು ಉದ್ಘಾಟನೆ ಮಾಡಲಾಯಿತು.

"ಮಂಡ್ಯ, ಹಾಸನ, ಮೈಸೂರು... ಎಲ್ಲ ಅಣ್ಣ ತಮ್ಮಂದಿರು ಇದ್ದ ಹಾಗೆ, ತಂಟೆಗೆ ಬಂದ್ರೆ ಹುಷಾರ್...." ಎಂಬ ಸಂಭಾಷಣೆಯನ್ನು ನಾಯಕ ಲೋಕೇಶ್ ಮಂಡ್ಯ ಹೇಳಿದಾಗ ಮೊದಲ ದೃಶ್ಯವಾಗಿ ಚಿತ್ರೀಕರಿಸಿಕೊಂಡರು ನಿರ್ದೇಶಕ ಪರ್ವ ಎಂ ಆರ್ ಕೆ. ಈ ಚಿತ್ರದ ನಿರ್ಮಾಪಕರು ಮೈಸೂರಿನ ನಿವಾಸಿ ಶಂಕರ್ ಶಿವ.
ಸಾಹಸದೊಂದಿಗೆ ಪ್ರೇಮ ಕಥೆಯೂ ಈ ಚಿತ್ರದಲ್ಲಿ ಅಡಕವಾಗಿದ್ದು ಒಂದೇ ಹಂತದಲ್ಲಿ ಚಿತ್ರೀಕರಣ ಪೂರೈಸುವ ಯೋಜನೆ ತಂಡ ಹಾಕಿಕೊಂಡಿದೆ. ಅರ್ಚನಾ, ಜೈ ಜಗದೀಶ್, ಪದ್ಮ ವಾಸಂತಿ, ಪುಟ್ಟಣ್ಣಯ್ಯ, ಕಡ್ಡಿ ವಿಶ್ವ ಹಾಗೂ ಇತರರು ತಾರಾಗಣದಲ್ಲಿ ಇರುವ 'ಮಂಡ್ಯ ಸ್ಟಾರ್' ಚಿತ್ರಕ್ಕೆ ಕ್ರಿಯೆಟಿವ್ ಹೆಡ್ ಆಗಿ ರಾಜರತ್ನ ಬಿ ಆರ್ ಇದ್ದಾರೆ.
ಶಂಕರ್ ಶಿವ ಅವರು ಛಾಯಾಗ್ರಾಹಕರು, ಮನೋಜ್ ಎಸ್ ಸಂಗೀತ ನಿರ್ದೇಶಕರು. ಹರೀಶ್ ಜಿ ಸಂಕಲನ, ರಘು ಅವರ ನೃತ್ಯ ನಿರ್ದೇಶನ, ವಿನೋದ್ ಕುಮಾರ್ ಮಯೂರ್, ಲೋಕೇಶ್ ಮಂಡ್ಯ, ರಾಮಕೃಷ್ಣ ರಣಗತ್ತಿ ಗೀತಾ ಸಾಹಿತ್ಯ, ಆರ್ ವಿ ವಿ ಸಂಭಾಷಣೆ ಈ ಚಿತ್ರಕ್ಕೆ ಒದಗಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











