ರಿಮ್ಯಾಂಡ್ ಹೋಮ್ ಗೆ ಹೋಗ್ತಾರಂತೆ ಪುನೀತ್
ಗಾಂಧಿನಗರದ ಮೂಲೆ ಮೂಲೆಯಲ್ಲೂ ಸದ್ಯ ಕೇಳಿ ಬರುತ್ತಿರುವ ಕೂಗು ಒಂದೇ. ಅದೇ 'ಮೈತ್ರಿ'. ಸೂಪರ್ ಸ್ಟಾರ್ ಗಳ ಮೈತ್ರಿಯಾಗಿರುವುದಕ್ಕೋ, ಅಪರೂಪಕ್ಕೆ ಚೆಂದದ ಸಿನಿಮಾವೊಂದು ತೆರೆಗೆ ಬಂದಿರುವುದಕ್ಕೋ, ಇಡೀ ಕುಟುಂಬ ಕೂತು ನೋಡಬಹುದಾದ ಸಾಮಾಜಿಕ ಸಂದೇಶ ಸಾರುವ ಚಿತ್ರ ಅನ್ನುವ ಕಾರಣಕ್ಕೋ, ಚಿಕ್ಕ ಮಕ್ಕಳಿನಿಂದ ಹಿಡಿದು ಹಿರಿಯ ಜೀವಿಗಳ ವರೆಗೂ 'ಮೈತ್ರಿ' ಚಿತ್ರ ಪ್ರಶಂಸೆ ಪಡೆದಿದೆ.
ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸ್ ಗಳಲ್ಲಿ 'ಮೈತ್ರಿ' ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ನಿರೀಕ್ಷೆಗೂ ಮೀರಿ ಸಿಗುತ್ತಿರುವ ಇಂತಹ ಅಭೂತಪೂರ್ವ ಪ್ರತಿಕ್ರಿಯೆಗೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಇದೇ ಖುಷಿಯಲ್ಲಿ 'ಮೈತ್ರಿ' ಟೀಂ ಇಂದು ಬೆಂಗಳೂರಿನ ಸಿಟಾಡೆಲ್ ಹೋಟೆಲ್ ನಲ್ಲಿ ಸಂತೋಷ ಕೂಟ ಆಯೋಜಿಸಿತ್ತು. [ಪುನೀತ್ 'ಮೈತ್ರಿ' ಚಿತ್ರಕ್ಕೆ ವಿಮರ್ಶೆಗಳ ಮುಕ್ತ ಪ್ರಶಂಸೆ]

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ನಿರ್ದೇಶಕ ಗಿರಿರಾಜ್, ನಾಯಕಿ ಅರ್ಚನಾ, ನಿರ್ಮಾಪಕ ರಾಜ್ ಕುಮಾರ್ ಸೇರಿದಂತೆ ಚಿತ್ರತಂಡದ ಪ್ರಮುಖರು ಸಂತೋಷ ಕೂಟದಲ್ಲಿ ಭಾಗವಹಿಸಿದ್ದರು. ರೆಸ್ಪಾನ್ಸ್ ಬಗ್ಗೆ ಫುಲ್ ಖುಷ್ ಆಗಿರುವ ಗಿರಿರಾಜ್ ''ಪಟ್ಟ ಶ್ರಮಕ್ಕೆ ಸಾರ್ಥಕ'' ಅಂತ ಹರ್ಷ ವ್ಯಕ್ತಪಡಿಸಿದರು. ['ಮೈತ್ರಿ' ಚಿತ್ರದ ನಿರ್ದೇಶಕ ಗಿರಿರಾಜ್ ವಿಶೇಷ ಸಂದರ್ಶನ]
ಇನ್ನೂ ಇದೇ ವೇಳೆ ಮಾತನಾಡಿದ ಪುನೀತ್ ರಾಜ್ ಕುಮಾರ್, ''ಈ ತರಹದ ಪಾತ್ರಕ್ಕೋಸ್ಕರ ನಾನು ಬಹು ದಿನಗಳಿಂದ ಕಾಯುತ್ತಿದೆ. 'ಮೈತ್ರಿ' ಮೂಲಕ ಅದು ಈಡೇರಿದೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯವಾದರೆ ಒಮ್ಮೆ ರಿಮ್ಯಾಂಡ್ ಹೋಮ್ ಗೆ ಭೇಟಿ ನೀಡುವೆ'' ಅಂತ ಹೇಳಿದರು.
ಕಾಲಿವುಡ್ ಮತ್ತು ಮಾಲಿವುಡ್ ನಲ್ಲಿ ಬಿಜಿಯಾಗಿರುವ ಕಾರಣ ಔತಣಕೂಟದಲ್ಲಿ ಮೋಹನ್ ಲಾಲ್ ಮಿಸ್ ಆಗಿದ್ದರು. 'ಮೈನಾ' ಚಿತ್ರದಲ್ಲಿ ಕೊಂಚ ಕೈಸುಟ್ಟುಕೊಂಡಿದ್ದ ನಿರ್ಮಾಪಕ ರಾಜ್ ಕುಮಾರ್ ಈ ಬಾರಿ ಬಂಪರ್ ಹೊಡೆದಿದ್ದಾರೆ. ಆದ್ರೆ, ಕಲೆಕ್ಷನ್ ಲೆಕ್ಕಾಚಾರದ ಬಗ್ಗೆ ಮಾತ್ರ ತುಟಿ ಬಿಚ್ಲಿಲ್ಲ. ಅಂತೂ ಸದಭಿರುಚಿಯ ಚಿತ್ರಗಳನ್ನ ಕನ್ನಡ ಪ್ರೇಕ್ಷಕ ಮಹಾಪ್ರಭು ಕೈಬಿಡುವುದಿಲ್ಲ ಅನ್ನುವುದು ಇದಕ್ಕೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











