'ನಾನು ಅವನಲ್ಲ...ಅವಳು' ಚಿತ್ರಕ್ಕೆ ಥಿಯೇಟರ್ ಸಮಸ್ಯೆ
ಎರಡು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕನ್ನಡ ಚಿತ್ರ 'ನಾನು ಅವನಲ್ಲ...ಅವಳು' ಕಳೆದ ವಾರವಷ್ಟೆ ರಿಲೀಸ್ ಆಗಿತ್ತು. ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ 'ನಾನು ಅವನಲ್ಲ...ಅವಳು' ಚಿತ್ರಕ್ಕೆ ಇದೀಗ ಥಿಯೇಟರ್ ಸಮಸ್ಯೆ ಎದುರಾಗಿದೆ.
ನಾಳೆ 'ಅಕ್ಟೋಬರ್ 1' ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'Mr.ಐರಾವತ' ಸಿನಿಮಾ ರಿಲೀಸ್ ಆಗುತ್ತಿದೆ. ಕರ್ನಾಟಕ ರಾಜ್ಯವೊಂದರಲ್ಲೇ 300ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ 'Mr.ಐರಾವತ' ತೆರೆ ಕಾಣುತ್ತಿದೆ.
ಇದರೊಂದಿಗೆ ಕಾಲಿವುಡ್ ನ ಬಹುನಿರೀಕ್ಷಿತ ಸಿನಿಮಾ 'ಪುಲಿ' ಕೂಡ ಬಿಡುಗಡೆ ಆಗುತ್ತಿದೆ. ತಮಿಳು ನಟ ವಿಜಯ್, ಶ್ರೀದೇವಿ, ಸುದೀಪ್ ರಂತಹ ಮಲ್ಟಿ ಸ್ಟಾರರ್ ಸಿನಿಮಾ 'ಪುಲಿ' ಕೂಡ ಕರ್ನಾಟಕದ ಮೂಲೆ ಮೂಲೆಯಲ್ಲೂ ಘರ್ಜನೆ ಮಾಡಲಿದೆ.

ಈ ಎರಡು ಚಿತ್ರಗಳ ಅಬ್ಬರದಿಂದ ಇತರೆ ಚಿತ್ರಗಳೆಲ್ಲಾ ಎತ್ತಂಗಡಿ ಆಗುತ್ತಿದೆ. ಕಳೆದ ವಾರ ತೆರೆ ಕಂಡಿದ್ದ ಸಂಚಾರಿ ವಿಜಯ್ ಮಂಗಳಮುಖಿಯಾಗಿ ಅಭಿನಯಿಸಿದ 'ನಾನು ಅವನಲ್ಲ...ಅವಳು' ಚಿತ್ರಕ್ಕೀಗ ಥಿಯೇಟರ್ ಅಭಾವ ಎದುರಾಗಿದೆ. ಮಲ್ಟಿಪ್ಲೆಕ್ಸ್ ಗಳಲ್ಲೂ 'ನಾನು ಅವನಲ್ಲ...ಅವಳು' ಶೋಗಳು ಕಡಿಮೆ ಆಗಿದೆ. [ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು']

ಮಂಗಳಮುಖಿಯರ ವಾಸ್ತವ ಬದುಕಿನ ಚಿತ್ರಣ 'ನಾನು ಅವನಲ್ಲ...ಅವಳು' ಚಿತ್ರಕ್ಕೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಕ್ಕಿದೆ. ಹೀಗಿದ್ದರೂ, ಎರಡು ಬಿಗ್ ಸ್ಟಾರ್ ಗಳ ಚಿತ್ರಗಳಿಂದ 'ನಾನು ಅವನಲ್ಲ...ಅವಳು' ಪಕ್ಕಕ್ಕೆ ಸರಿಯುವಂತಾಗಿದೆ. ಈ ಬೆಳವಣಿಗೆಯಿಂದ ನಿರ್ಮಾಪಕ ರವಿ.ಆರ್.ಗರಣಿ ಮತ್ತು ನಿರ್ದೇಶಕ ಬಿ.ಎಸ್.ಲಿಂಗದೇವರು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











