ಎಲ್ಲರ ಜೀವನದಲ್ಲಿ ನಡೆಯುವ ಆಟವೇ 'ನವರಂಗಿ'
ಹಾಸ್ಯ ಚಿತ್ರಗಳು ಯಾವತ್ತೂ ಪ್ರೇಕ್ಷಕರನ್ನು ಗೆಲ್ಲುತ್ತವೆ ಎನ್ನುವಮಾತಿದೆ. ಅದಕ್ಕೆ ಇತ್ತೀಚಿನ 'ಗೋವಿಂದಾಯ ನಮಃ', 'ರ್ಯಾಂಬೋ', 'ವಿಕ್ಟರಿ' ಚಿತ್ರಗಳೇ ಸಾಕ್ಷಿ. ಕನ್ನಡದ ಹಾಸ್ಯ ನಟರ ದಂಡೇ ಅಭಿನಯಿಸಿರುವಂತಹ ಮತ್ತೊಂದು ಚಿತ್ರ ಈ ವಾರ ತೆರೆಕಾಣುತ್ತಿದೆ. ಜಿ.ಉಮೇಶ್ ನಿರ್ದೇಶನದ 'ನವರಂಗಿ' ನವರಸಗಳ ಸಮ್ಮಿಳನವಾಗಿದ್ದು ಇದೇ ಶುಕ್ರವಾರ (ಜ.24) ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಉತ್ತರ ಕರ್ನಾಟಕ ಮೂಲಕ ಸಂಗಮೇಶ ಬಿ. ಹಲಗತ್ತಿ, ಮಹದೇವಪ್ಪ ಬಿ. ಹಲಗತ್ತಿ ಈ ಚಿತ್ರದ ನಿರ್ಮಾಪಕರು. ಜೀವನದಲ್ಲಿ ನವರಂಗಿ ಆಟಗಳನ್ನೇ ಆಡಿಕೊಂಡಿದ್ದ ಯುವಕನೊಬ್ಬ ಚಿತ್ರರಂಗಕ್ಕೆ ಹೇಗೆ ಎಂಟ್ರಿಕೊಡುತ್ತಾನೆ. ಚಿತ್ರರಂಗ ಆತನನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಯಿತು ಎಂಬುದನ್ನು ಹೇಳುವ ಚಿತ್ರವೇ 'ನವರಂಗಿ'. [ರೂಪಿಕಾ ಪಂಚರಂಗಿ ಚಿತ್ರಗಳು]
ಆನಂದ ಪಿ.ರಾಜು ಬಳಿ ಕೆಲಸ ಕಲಿತ ಜಿ. ಉಮೇಶ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ಸಂಪೂರ್ಣ ಮನರಂಜನಾತ್ಮಕ ಚಿತ್ರ" ಎಂದು ಮೆಚ್ಚಿದ ಸೆನ್ಸಾರ್ ಮಂಡಳಿ 'ಯು' ಸರ್ಟಿಫಿಕೇಟ್ ನೀಡಿದೆ. ಇದು ಪ್ರತಿಯೊಬ್ಬರ ಜೀವನದಲ್ಲಿ ನಡೆಯುವಂಥ ಕಥೆ.
ಚಿತ್ರದ ಸುಮಾರು 75% ಚಿತ್ರೀಕರಣ ನಡೆದಿರುವುದು ನನ್ನ ಸ್ವಂತ ಊರಾದ ದೊಡ್ಡಮಲಗೂರು (ಮಂಡ್ಯ) ಗ್ರಾಮದಲ್ಲಿ, ಪಯಣ ರವಿಶಂಕರ್ ಅವರು ಗೌರವ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲೊಂದು ಸಿನಿಮಾ ಇದಾಗಿದ್ದು ಚಿತ್ರರಂಗದಲ್ಲಿ ನಡೆಯುವ ಸಾಕಷ್ಟು ಘಟನೆಗಳು ಈ ಚಿತ್ರದಲ್ಲಿವೆ ಎಂದು ಹೇಳಿದರು.
ಉಮೇಶ್ ಅವರ ಗುರುಗಳಾದ ನಿರ್ದೇಶಕ ಆನಂದ್ ಪಿ.ರಾಜು ತಮ್ಮ ಶಿಷ್ಯನ ಚಿತ್ರಕ್ಕೆ ಶುಭಹಾರೈಸಲು ಬಂದಿದ್ದರು. ನನ್ನ ಬಳಿ ಕಲಿತ ಮಾದೇಶ, ಮಹೇಶ್ ಬಾಬು, ಉದಯ್ ಪ್ರಕಾಶ್ ಅವರಂತೆ ಉಮೇಶ್ ಕೂಡ ದೊಡ್ಡ ಹೆಸರು ಗಳಿಸಲಿ. ನೈಜವಾದ ಘಟನೆಯೊಂದನ್ನು ಆಧಾರಮಾಡಿಕೊಂಡು ಈ ಚಿತ್ರವನ್ನು ಮಾಡಿದ್ದಾರೆ. ಚಿತ್ರರಂಗದ ಆಗುಹೋಗುಗಳನ್ನು ತೆರೆಯ ಮೇಲೆ ತೋರಿಸಿದ್ದಾರೆ.
ಹಾಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಎಂದು ಹೇಳಿದರು. ನಾಯಕ ಆಕಾಶ್ ಮಾತನಾಡಿ, "ಕನ್ನಡ ಚಿತ್ರರಂಗದ ಎಲ್ಲಾ ಹಿರಿಯ ಹಾಸ್ಯ ಕಲಾವಿದರೊಂದಿಗೆ ಅಭಿನಯಿಸುವಂಥ ಅವಕಾಶ ಈ ಚಿತ್ರದಲ್ಲಿ ನನಗೆ ದೊರೆಯಿತು ಎಂದು ಹೇಳಿದರು.
ಸಾಧು ಕೋಕಿಲ, ಲಯೇಂದ್ರ, ಎಸ್.ಉಮೇಶ್, ಮಿಮಿಕ್ರಿ ದಯಾನಂದ, ಕುರಿ ಪ್ರತಾಪ್, ಚಿಕ್ಕಣ್ಣ ಸೇರಿದಂತೆ ಕಾಮಿಡಿ ಕಲಾವಿದರ ದಂಡೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆಕಾಶ್, ರೂಪಿಕಾ, ಸೌಜನ್ಯ, ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












