ಕನ್ನಡಿಗನ ಛಲದ ಕತೆ 'ವಿಜಯಾನಂದ'ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ
ಕರ್ನಾಟಕದ ಯಶಸ್ವಿ ಉದ್ಯಮಿ, ವಿಆರ್ಎಲ್ ಸಂಸ್ಥಾಪಕ ವಿಜಯ್ ಸಂಕೇಶ್ವರ್ ಅವರ ಜೀವನ ಆಧರಿಸಿದ ಸಿನಿಮಾ 'ವಿಜಯಾನಂದ' ಕಳೆದ ವಾರ ಬಿಡುಗಡೆ ಆಗಿದ್ದು ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ.
ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ 'ವಿಜಯಾನಂದ' ಸಿನಿಮಾ ಬಿಡುಗಡೆ ಆಗಿತ್ತು. ಎಲ್ಲ ಭಾಷೆಗಳಲ್ಲಿಯೂ ಸಿನಿಮಾವನ್ನು ಸಿನಿ ಪ್ರೇಮಿಗಳು ಸ್ವೀಕರಿಸಿದ್ದು ಕನ್ನಡಿಗನ ಸಾಧನೆಯ ಕತೆಗೆ ಉತ್ತಮ ಪ್ರತಿಕ್ರಿಯೆ ಎಲ್ಲೆಡೆ ವ್ಯಕ್ತವಾಗಿದೆ.
ಉತ್ತರ ಕರ್ನಾಟಕದ ಸಾಮಾನ್ಯ ಕುಟುಂಬದಿಂದ ಬಂದ ವಿಜಯ್ ಸಂಕೇಶ್ವರ್ ಗಡಿಗಳನ್ನು ಮೀರಿ, ಸೀಮಿತ ಸಂಪನ್ಮೂಲ, ತಂತ್ರಜ್ಞಾನ, ಸಂವಹನ ಸಾಧನಗಳಿರುವ ಸಮಯದಲ್ಲಿಯೇ ಬೆರಗಾಗುವ ರೀತಿ ಅತಿ ದೊಡ್ಡ ಲಾಜಿಸ್ಟಿಕ್ ಉದ್ಯಮ ಕಟ್ಟಿ ಬೆಳೆಸಿದ ಕತೆಯನ್ನು 'ವಿಜಯಾನಂದ' ಸಿನಿಮಾ ಒಳಗೊಂಡಿದೆ.

ವಾಣಿಜ್ಯ ವಿದ್ಯಾರ್ಥಿಗಳಿಗೆ ಪಾಠ
ಕೇವಲ ಒಂದು ಲಾರಿಯಿಂದ ಆರಂಭಿಸಿ ಸಾವಿರಾರು ಲಾರಿಗಳು, ಬಸ್ಗಳುಳ್ಳ ದೊಡ್ಡ ಉದ್ದಿಮೆಯನ್ನು ವಿಜಯ್ ಸಂಕೇಶ್ವರ್ ಕಟ್ಟಿದ ರೀತಿ ರೋಚಕ. ಆ ಕತೆಯನ್ನು ಬರಮಾತಲ್ಲೇ ಕೇಳುವುದೇ ರೋಮಾಂಚಕ ಅನುಭೂತಿ ಇನ್ನು ಅದೇ ಕತೆ ದೃಶ್ಯರೂಪಕ್ಕಿಳಿಸಲ್ಪಟ್ಟ 'ವಿಜಯಾನಂದ' ಸಿನಿಮಾ ಸಹಜವಾಗಿಯೇ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಉದ್ಯಮಾಸಕ್ತರಿಗೆ, ವಾಣಿಜ್ಯ ವಿದ್ಯಾರ್ಥಿಗಳಿಗೆ ಉತ್ತಮ ಪಾಠವೂ ಆಗಿದೆ ಈ ಸಿನಿಮಾ.

ಪತ್ರಿಕೆ ಆರಂಭಿಸಿದ ಸಾಹಸ ಕತೆ
ಲಾರಿ ಉದ್ದಿಮೆ ಕಟ್ಟಿದ ಸಾಹಸಗಾತೆ ಮಾತ್ರವೇ ಅಲ್ಲದೆ ವಿಜಯ್ ಸಂಕೇಶ್ವರ್ ಎರಡು ಕನ್ನಡ ದಿನಪತ್ರಿಕೆಯನ್ನು ಕಟ್ಟಿ ಎರಡನ್ನೂ ನಂಬರ್ ಒನ್ ಪತ್ರಿಕೆಯನ್ನಾಗಿಸಿದ ಕತೆಯನ್ನೂ ಸಹ ಸಿನಿಮಾ ಒಳಗೊಂಡಿದೆ. ಅಪ್ಪನ ಈ ಸಾಹಸದಲ್ಲಿ ಮಗ ಆನಂದ್ ಸಂಕೇಶ್ವರ್ ಹೇಗೆ ತೊಡಗಿಸಿಕೊಂಡರು ಎಂಬುದನ್ನು ಸಹ ಸಿನಿಮಾದಲ್ಲಿ ತೋರಿಸಲಾಗಿದೆ.

ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್ ರಜಪೂತ್ ನಟನೆ
'ವಿಜಯಾನಂದ' ಸಿನಿಮಾದಲ್ಲಿ ವಿಜಯ್ ಸಂಕೇಶ್ವರ್ ಪಾತ್ರದಲ್ಲಿ ನಿಹಾಲ್ ರಜಪೂತ್ ನಟಿಸಿದ್ದು, ಪಾತ್ರವೇ ಅವರಾದಂತೆ ತನ್ಮಯತೆಯಿಂದ ನಟಿಸಿದ್ದಾರೆ. ವಿಜಯ್ ಸಂಕೇಶ್ವರ್ರ ಪುತ್ರ ಆನಂದ್ ಸಂಕೇಶ್ವರ್ ಪಾತ್ರದಲ್ಲಿ ಭರತ್ ಭೂಪಣ್ಣ ನಟಿಸಿದ್ದಾರೆ. ವಿಜಯ್ ಸಂಕೇಶ್ವರ್ ತಂದೆಯ ಪಾತ್ರದಲ್ಲಿ ಅನಂತ್ನಾಗ್ ಅವರದ್ದು ಮಾಗಿದ ನಟನೆ. ಇನ್ನು ತುಸು ವಿಲನ್ ಶೇಡ್ನ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ಬೆಳವಾಡಿಯೂ ಗಮನ ಸೆಳೆಯುತ್ತಾರೆ. ರವಿಚಂದ್ರನ್ರ ಅತಿಥಿ ಪಾತ್ರ, ದಯಾಳ್ ಪದ್ಮನಾಭ್, ಶೈನ್ ಶೆಟ್ಟಿ, ವಿನಯಾ ಪ್ರಸಾದ್ ಇನ್ನಿತರ ಕೆಲವು ಪಾತ್ರಗಳೂ ನೆನಪಿನಲ್ಲಿ ಉಳಿಯುತ್ತವೆ ಹಲವು ನಿಜ ಜೀವನದ ಪಾತ್ರಗಳು 'ವಿಜಯಾನಂದ' ಸಿನಿಮಾದಲ್ಲಿವೆ.

ರಿಷಿಕಾ ಶರ್ಮಾ ನಿರ್ದೇಶಕ
ಸಿನಿಮಾವನ್ನು ರಿಷಿಕಾ ಶರ್ಮಾ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಆನಂದ್ ಸಂಕೇಶ್ವರ್ ಅವರದ್ದು. ಸಿನಿಮಾದಲ್ಲಿ ಉತ್ತರ ಕರ್ನಾಟಕದ ಪರಿಸರದ ಚಿತ್ರಣವನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ. ಕತೆ, ನಟನೆಯ ಹೊರತಾಗಿ ಸಿನಿಮಾದ ಪ್ರಧಾನ ಅಂಶ ಸಂಭಾಷಣೆ. ಸಿನಿಮಾದ ಹಲವು ಸಂಭಾಷಣೆ ಬಹುಸಮಯ ನೆನಪಿನಲ್ಲಿ ಉಳಿಯುವಂತಿವೆ. ಒಟ್ಟಾರೆ ಕನ್ನಡ ಚಿತ್ರರಂಗದಲ್ಲಿ ಸಾಧಕರ ಜೀವನ ಆಧರಿತ ಸಿನಿಮಾಗಳು ಬರುತ್ತಿಲ್ಲ ಎನ್ನಲಾಗುತ್ತಿದ್ದ ಸಮಯದಲ್ಲಿಯೇ ಆ ಕೊರತೆ ನೀಗಿಸಲು ಬಂದ ಸಿನಿಮಾ 'ವಿಜಯಾನಂದ' ಆಗಿದ್ದು, ಈ ಸಿನಿಮಾಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಒದಗಿಬರುತ್ತಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ಬಯೋಪಿಕ್ಗಳು ಬರಲು ಸ್ಪೂರ್ತಿಯಾಗಬಹುದಾಗಿದೆ.


Click it and Unblock the Notifications











