ಚಿತ್ರರಂಗವನ್ನ ತೊರೆಯುತ್ತಾರಂತೆ ಉಮೇಶ್ ಬಣಕಾರ್.!
ಕನ್ನಡ ಚಿತ್ರ ನಿರ್ಮಾಪಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿ ಉಮೇಶ್ ಬಣಕಾರ್ ಪರಿಚಯ ನಿಮಗೆ ಇದ್ದೇ ಇದೆ. ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಉಮೇಶ್ ಬಣಕಾರ್ ಈಗ ಚಿತ್ರರಂಗವನ್ನೇ ಬಿಡುವ ಬಗ್ಗೆ ಮಾತನಾಡಿದ್ದಾರೆ.!
ಹಾಗಂದ ಮಾತ್ರಕ್ಕೆ, ಉಮೇಶ್ ಬಣಕಾರ್ ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಬೇಸರವಾಗಿದೆ ಅಂತರ್ಥ ಅಲ್ಲ. ಬದಲಾಗಿ ಮತ್ತೋರ್ವ ನಿರ್ಮಾಪಕ ಕಮ್ ನಿರ್ದೇಶಕ ಟೇ.ಶಿ.ವೆಂಕಟೇಶ್ ಅವರಿಗೆ ಓಪನ್ ಚಾಲೆಂಜ್ ಮಾಡುವ ಭರದಲ್ಲಿ ''ಕನ್ನಡ ಚಿತ್ರರಂಗವನ್ನು ತೊರೆಯುತ್ತೇನೆ'' ಅಂತ ಹೇಳಿದ್ದಾರೆ.

ಅಸಲಿಗೆ ಆಗಿದ್ದು ಇಷ್ಟು...'ಡಬ್ಬಿಂಗ್' ವಿವಾದದ ಕುರಿತಾಗಿ ಈಟಿವಿ ಕನ್ನಡ ಸುದ್ದಿ ವಾಹಿನಿಯ ಚರ್ಚಾ ಕಾರ್ಯಕ್ರಮದಲ್ಲಿ ಉಮೇಶ್ ಬಣಕಾರ್ ಮತ್ತು ಟೇ.ಶಿ.ವೆಂಕಟೇಶ್ ಭಾಗವಹಿಸಿದ್ದರು. [ಡಬ್ಬಿಂಗ್ ಬೇಕೋ ಬೇಡವೋ : ಚರ್ಚೆ ಮುಂದುವರಿಯಲಿ]
ಮಾತಿನ ಭರಾಟೆಯಲ್ಲಿ ಇತ್ತೀಚೆಗಷ್ಟೆ ಬಿಡುಗಡೆಯಾದ 'ರೆಡ್ ಅಲರ್ಟ್' ಕೂಡ ''ಡಬ್ಬಿಂಗ್ ಚಿತ್ರ'' ಅಂತ ಟೇ.ಶಿ.ವೆಂಕಟೇಶ್ ಹೇಳಿದರು. ಸಾಲದಕ್ಕೆ, ''ರೆಡ್ ಅಲರ್ಟ್' ಅನ್ನುವ ಡಬ್ಬಿಂಗ್ ಚಿತ್ರದ ಆಡಿಯೋ ರಿಲೀಸ್ ಗೆ ಉಮೇಶ್ ಬಣಕಾರ್ ಹೋಗಿದ್ದರು. ಸಿನಿಮಾಗೆ ಬಣಕಾರ್ ಬೆಂಬಲ ಇದೆ'' ಅಂತ ಟೇ.ಶಿ.ವೆಂಕಟೇಶ್ ಆರೋಪ ಮಾಡಿದರು.

ಇದಕ್ಕೆ ಸಿಟ್ಟಾದ ಉಮೇಶ್ ಬಣಕಾರ್, ''ರೆಡ್ ಅಲರ್ಟ್' ಡಬ್ಬಿಂಗ್ ಸಿನಿಮಾ ಅಲ್ಲವೇ ಅಲ್ಲ. ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ರೆಡಿಯಾಗಿರುವ ಸಿನಿಮಾ. ಇದು ಡಬ್ಬಿಂಗ್ ಚಿತ್ರ ಅಂತ ಪ್ರೂವ್ ಆದರೆ ನಾನು ಕನ್ನಡ ಚಿತ್ರರಂಗವನ್ನೇ ತೊರೆಯುತ್ತೇನೆ. ಇದು ನನ್ನ ಓಪನ್ ಚಾಲೆಂಜ್'' ಅಂತ ಉಮೇಶ್ ಬಣಕಾರ್ ಸವಾಲು ಹಾಕಿದರು. [ಡಬ್ಬಿಂಗ್ ವಿರೋಧಿಗಳಿಗೆ ಸಾಮಾನ್ಯ ಪ್ರೇಕ್ಷಕನ ಪ್ರಶ್ನೆ]
ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಚಂದ್ರ ಮಹೇಶ್ ನಿರ್ದೇಶನದ 'ರೆಡ್ ಅಲರ್ಟ್' ಬಹುತೇಕ ಹೊಸ ಮುಖಗಳೇ ಇರುವ ಸಿನಿಮಾ. ಆಯಾ ಭಾಷೆಗಳ ಕಾಮಿಡಿ ಕಲಾವಿದರನ್ನ ಬಳಸಿಕೊಂಡು ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣವಾಗಿದೆ.
ಆದರೂ, ಟ್ರೈಲರ್ ನಲ್ಲಿನ ಕೆಲ ಸನ್ನಿವೇಶಗಳಲ್ಲಿ ಲಿಪ್ ಸಿಂಕ್ ಆಗಿಲ್ಲ. ಆದ್ದರಿಂದ ಕೆಲ ಶಾಟ್ ಗಳನ್ನ ಡಬ್ಬಿಂಗ್ ಮಾಡಲಾಗಿದೆ ಅನ್ನುವ ವಾದ ಕೆಲವರದ್ದು. ಇದನ್ನ ನಿರಾಕರಿಸಿರುವ ಉಮೇಶ್ ಬಣಕಾರ್ ಚಾಲೆಂಜ್ ಹಾಕಿದ್ದಾರೆ. ಸವಾಲಿನಲ್ಲಿ ಗೆಲುವಿನ ನಗೆ ಬೀರುವವರು ಯಾರೋ ಕಾದು ನೋಡೋದಷ್ಟೆ ಮುಂದಿನ ಕೆಲಸ.


Click it and Unblock the Notifications











