ಹೊಟ್ಟೆಪಾಡಿಗಾಗಿ ಬೀದಿಗಿಳಿದ ಕನ್ನಡ ನಿರ್ಮಾಪಕರು
ಕನ್ನಡ ಚಿತ್ರರಂಗದಲ್ಲಿ ಸಮಸ್ಯೆಗಳು ಒಂದೆರಡಲ್ಲ. ಕಾರ್ಮಿಕರ ಒಕ್ಕೂಟದ ಕಿರಿಕ್, ಚಿತ್ರಮಂದಿರಗಳ ಕೊರತೆ, ದುಬಾರಿ ಕಲಾವಿದರು, ಡಬ್ಬಾದಲ್ಲೇ ಉಳಿದಿರುವ ಲೆಕ್ಕವಿಲ್ಲದಷ್ಟು ಸಿನಿಮಾಗಳು, ಕೊಂಡುಕೊಳ್ಳೋರೆ ಇಲ್ಲದ ಸ್ಯಾಟೆಲೈಟ್ ಹಕ್ಕುಗಳು, ಇವೆಲ್ಲದರ ಜೊತೆಗೆ ದಿನಕ್ಕೊಂದು ವಿವಾದ.
ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಗಾಂಧಿನಗರದಲ್ಲಿ ಇಂದು ಗದ್ದಲದ ವಾತಾವರಣ. ಫಿಲ್ಮ್ ಚೇಂಬರ್ ನಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಸಾರಾ ಗೋವಿಂದು, ಬಾಮಾ ಹರೀಶ್, ಬಾಮಾ ಗಿರೀಶ್, ಕೃಷ್ಣೇಗೌಡ ಸೇರಿದಂತೆ 100ಕ್ಕೂ ಹೆಚ್ಚು ನಿರ್ಮಾಪಕರು ಧರಣಿ ಕೂತಿದ್ದಾರೆ. ತಮ್ಮ ಹಿತಾಸಕ್ತಿಗೆ ಎಲ್ಲರೂ ಕೈಜೋಡಿಸುವವರೆಗೂ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. [ಕನ್ನಡ ಚಿತ್ರ ನಿರ್ಮಾಪಕರ ಮೇಲೆ ಬಿತ್ತು ಕ್ರಿಮಿನಲ್ ಕೇಸ್]

ನಿರ್ಮಾಪಕ ಜಯಸಿಂಹ ಮುಸುರಿ ನೇತೃತ್ವದಲ್ಲಿ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಯುತ್ತಿದ್ದು, ಇಂದಿನಿಂದ ಜುಲೈ 1 ರವರೆಗೂ ಎಲ್ಲಾ ಹೊಸ ಚಿತ್ರಗಳ ಚಿತ್ರೀಕರಣವನ್ನ ಬಂದ್ ಮಾಡಿದ್ದಾರೆ. ಹೀಗಾಗಿ, ಒಂದು ತಿಂಗಳ ಕಾಲ ಯಾವುದೇ ಹೊಸ ಚಿತ್ರಗಳ ಮುಹೂರ್ತ ನಡೆಯುವುದಿಲ್ಲ. [ಪ್ರಮುಖ ಕನ್ನಡದ ನಟರ ವಿರುದ್ದ ತಿರುಗಿಬಿದ್ದ ನಿರ್ಮಾಪಕರು]

ನಿರ್ಮಾಪಕರು ಇಂತಹ ನಿರ್ಧಾರ ಕೈಗೊಂಡಿದ್ದು ನಿನ್ನೆ ಬೆಂಗಳೂರಿನ ಬಸಂತ್ ರೆಸಿಡೆನ್ಸಿಯಲ್ಲಿ ನಡೆದ ನಿರ್ಮಾಪಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ. ನಿರ್ಮಾಪಕರ ಕಷ್ಟಕ್ಕೆ ಯಾರೂ ಬರುತ್ತಿಲ್ಲ ಅನ್ನುವ ಕಾರಣಕ್ಕೆ ಇಂದಿನಿಂದ 10 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡುವುದಕ್ಕೆ ಮುಂದಾಗಿದ್ದಾರೆ.
ನಿರ್ಮಾಪಕರ ಬೇಡಿಕೆ ಏನು?
- ಕನ್ನಡ ಟಿವಿ ವಾಹಿನಿಗಳು ಎಲ್ಲಾ ಕನ್ನಡ ಚಿತ್ರಗಳ ಸ್ಯಾಟೆಲೈಟ್ ರೈಟ್ಸ್ ಕೊಂಡುಕೊಳ್ಳಬೇಕು.
- ಸ್ಟಾರ್ ನಟರು ನಿರ್ಮಾಪಕರ ಸಂಕಷ್ಟಕ್ಕೆ ಸ್ಪಂದಿಸಬೇಕು.
- ಪ್ರಸಾರ ಹಕ್ಕುಗಳನ್ನ ಕೊಂಡುಕೊಳ್ಳದ ವಾಹಿನಿಗಳಲ್ಲಿ ನಟರು ರಿಯಾಲಿಟಿ ಶೋ ನಡೆಸಿಕೊಡಬಾರದು.
- ಚಿತ್ರಮಂದಿರಗಳಲ್ಲಿ ಪ್ರಸಾರವಾಗುವ ಆಡ್ ಗಳಿಂದ ನಿರ್ಮಾಪಕರಿಗೂ ಶೇರ್ ಸಿಗಬೇಕು.
- ಕನ್ನಡ ಚಿತ್ರರಂಗ ಒಗ್ಗಟ್ಟಾಗಿರಬೇಕು. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











