ಕೊಡಗು ಜಿಲ್ಲೆಯ ಪ್ರವಾಹ ಪೀಡಿತರ ನೆರವಿಗೆ ಮುಂದಾದ ಚಂದನ್ ಶೆಟ್ಟಿ
ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಕೊಡಗು ಇದೀಗ ನಿಮ್ಮೆಲ್ಲರ ಸಹಾಯಕ್ಕೆ ಕೈಚಾಚಿದೆ. ಕುಂಬದ್ರೋಣ ಮಳೆಗೆ ಕೊಡಗು ಜಿಲ್ಲೆ ಅಕ್ಷರಶಃ ನಲುಗಿಹೋಗಿದೆ. ಅತ್ತ ವರುಣ ಅಬ್ಬರಿಸುತ್ತಿದ್ದರೆ, ಇತ್ತ ಕೊಡಗಿನ ಗುಡ್ಡಗಳು ಕುಸಿಯುತ್ತಿವೆ. ಮನೆಗಳು ನೆಲಸಮವಾಗುತ್ತಿವೆ. ರಸ್ತೆಗಳು ಬಾಯಿ ಬಿಡುತ್ತಿವೆ. ನೂರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ದೇಶಕ್ಕೆ ಅಪ್ರತಿಮ ಯೋಧರನ್ನು ಕೊಟ್ಟ ಕೊಡಗು ಜಿಲ್ಲೆಗೆ ವರುಣನ ವಕ್ರದೃಷ್ಟಿ ಬಿದ್ದಿದೆ. ಪರಿಣಾಮ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತವಾಗಿದೆ. ಪ್ರವಾಹ ಪೀಡಿತರಿಗೆ ಈಗಾಗಲೇ ಹಲವಾರು ಮಂದಿ ಸಹಾಯ ಹಸ್ತ ಚಾಚಿದ್ದಾರೆ.
ಪ್ರವಾಹದಿಂದ ತೊಂದರೆಗೀಡಾಗಿರುವ ಕೊಡಗು ಹಾಗೂ ಇನ್ನಿತರ ಜಿಲ್ಲೆಯ ನೆರವಿಗೆ ಧಾವಿಸುವಂತೆ ಕನ್ನಡಿಗರಲ್ಲಿ ಕನ್ನಡದ ಖ್ಯಾತ Rapper ಚಂದನ್ ಶೆಟ್ಟಿ ಮನವಿ ಮಾಡಿದ್ದಾರೆ.

ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿ: ಚಂದನ್ ಶೆಟ್ಟಿ ಮನವಿ
''ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಸಮಯದಲ್ಲಿ ಅವರ ನೆರವಿಗೆ ನಾವು ನಿಲ್ಲಬೇಕು. ನಿಮ್ಮ ಕೈಲಾದ ಸಹಾಯವನ್ನು ಮಾಡಬೇಕು'' ಎಂದು ಚಂದನ್ ಶೆಟ್ಟಿ ಕರೆ ನೀಡಿದರು.
ತಮ್ಮ ಕಡೆಯಿಂದ ಅಗತ್ಯ ವಸ್ತುಗಳನ್ನು ಪ್ರವಾಹ ಸಂತ್ರಸ್ಥರಿಗೆ ತಲುಪಿಸಲು ಚಂದನ್ ಶೆಟ್ಟಿ ಮುಂದಾಗಿದ್ದಾರೆ. ಇಂದು ಮಡಿಕೇರಿ ಹಾಗೂ ಕೊಡಗು ಜಿಲ್ಲೆಯ ಗಂಜಿ ಕೇಂದ್ರಗಳಿಗೆ ಚಂದನ್ ಶೆಟ್ಟಿ ಭೇಟಿ ನೀಡಲಿದ್ದಾರೆ.
ಇನ್ನೂ ಕಿರುತೆರೆ ತಾರೆಯರಾದ ಆಶಿತಾ ಚಂದ್ರಪ್ಪ, ಕಿರಿಕ್ ಕೀರ್ತಿ, ಸೃಜನ್ ಲೋಕೇಶ್ ಕೂಡ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











