ತೆರೆಮರೆಯಾಗಿದ್ದ ನಟಿ ಮಹಾಲಕ್ಷ್ಮಿ ರೀ-ಎಂಟ್ರಿ: ಈ ಬಗ್ಗೆ 'ಮುದ್ದಿನ ರಾಣಿ' ಹೇಳಿದ್ದೇನು?
ಕನ್ನಡ ಚಿತ್ರರಂಗದ ಹಿರಿಯ ನಟಿ ಮಹಾಲಕ್ಷ್ಮಿ ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಎನ್ನುವ ಕುತೂಹಲ ಅನೇಕರಲ್ಲಿ ಇತ್ತು. 1980-90ರ ದಶಕದಲ್ಲಿ ಚಿತ್ರರಂಗವನ್ನಾಳಿದ ನಟಿ ಮಹಾಲಕ್ಷ್ಮಿ ದಿಢೀರನೆ ಬಣ್ಣದ ಲೋಕದಿಂದ ಮಾಯವಾಗಿದ್ದರು. ಅದ್ಭುತ ಅಭಿನಯದ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರನ್ನು ರಂಜಿಸಿ, ಹೇಳದೆ ಕೇಳದೆ ಮಾಯವಾಗಿದ್ದ ಮಹಾಲಕ್ಷ್ಮಿ ಈಗ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗುತ್ತಿದ್ದಾರೆ.
ನಿರ್ದೇಶಕ ರವಿ ಶ್ರೀವತ್ಸ ಅವರು ಹಿರಿಯ ನಟಿ ಮಹಾಲಕ್ಷ್ಮಿಯನ್ನು ಹುಡುಕಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅನೇಕ ವರ್ಷಗಳ ಬಳಿಕ ಮಹಾಲಕ್ಷ್ಮಿ ಈಗ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಾಲಕ್ಷ್ಮಿಯನ್ನು ಹುಡುಕಿದವರು ಅದೆಷ್ಟೋ ಮಂದಿ ಇದ್ದಾರೆ. ಆದರೆ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಎನ್ನುವ ಮಾಹಿತಿ ಯಾರಿಗೂ ಸಿಕ್ಕಿರಲಿಲ್ಲ. ಈಗ ರವಿ ಶ್ರೀವತ್ಸ ಅವರಿಗೆ ಸಿಕ್ಕಿರುವ ಮಹಾಲಕ್ಷ್ಮಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ರವಿ ಶ್ರೀವತ್ಸ ಹೇಳಿದ್ದೇನು?
"ಹುಡುಕುತ್ತಿದ್ದವರಿಗೆ ಸಿಕ್ಕ ಮಹಾಲಷ್ಮಿ. ಬೆಳ್ಳಿತೆರೆಯನ್ನ ತುಂಬಿ ತುಳುಕಿಸುತಿದ್ದ ಅದ್ಭುತ ನಟಿ ಮಹಾಲಕ್ಷ್ಮಿ #Mahalakshmi ಧಿಡೀರನೆ ಒಂದು ದಿನ ಸಿನಿಮಾ ಜಗ್ಗತ್ತಿನಿಂದ ಕಣ್ಮರೆಯಾದಾಗಿನಿಂದ ಅವರ ಅಡ್ರೆಸ್ ಕೇಳಿ ಹುಡುಕಿ ಬಂದವರ ಸಂಖ್ಯೆ ಬಹಳ. ಕಳೆದುಹೋಗಿದ್ದ ನಮ್ಮ 'ಚಿನ್ನದ ಮೂಗುತಿ' ಅದು ಈಗ ಸಿಕ್ಕಿದೆ. ಬೆಳ್ಳಿತೆರೆಯ ನಾಸಿಕಕ್ಕೇರಲು ಮತ್ತೆ ಸಜ್ಜಾಗಿದೆ. ನಿರ್ದೇಶಕ ಮಿತ್ರರೇ, ಅದ್ಭುತ ಕಲಾವಿದೆ ಸದುಪಯೋಗಿಸಿಕೊಳ್ಳಿ. ಇದೋ ಇವರೇ ನಮ್ಮ, ನಿಮ್ಮ ಮಹಾಲಕ್ಷ್ಮಿ" ಎಂದು ಬರೆದುಕೊಂಡಿದ್ದಾರೆ.

ಬೇಡಿಕೆ ಇರುವಾಗಲೆ ಚಿತ್ರರಂಗ ತೊರೆದ ನಟಿ?
ಮಹಾಲಕ್ಷ್ಮಿ ಚಿತ್ರರಂಗದಿಂದ ದೂರವಾದ ಮೇಲೆ ಅವರ ಬಗ್ಗೆ ತರಹೇವಾರಿ ಕಥೆಗಳು ಹರಿದಾಡುತ್ತಿದ್ದವು. 1991ರಲ್ಲೆ ಅಭಿನಯಕ್ಕೆ ಗುಡ್ ಬೈ ಹೇಳಿ ಹೋದವರು ಮತ್ತೆ ಕಾಣಿಸಿಕೊಂಡಿಲ್ಲ. ಬಹು ಬೇಡಿಕೆಯಲ್ಲಿರುವಾಗಲೇ ಚಿತ್ರ ಜೀವನ ತೊರೆದ ಬಗ್ಗೆ ನಿಖರ ಕಾರಣ ಯಾರಿಗೂ ಗೊತ್ತಿಲ್ಲ. ಆದರೆ ಗಾಂಧಿನಗರದಲ್ಲಿ ತರಹೇವಾರಿ ಗಾಸಿಪ್ ಗಳು ಹರಿದಾಡುತ್ತಿದ್ದವು. ಆದರೆ ಮಹಾಲಕ್ಷ್ಮಿ ಯಾವುದಕ್ಕು ಪ್ರತಿಕ್ರಿಯೆ ನೀಡಲಿಲ್ಲ.

ಮಾನಸಿಕ ಖಿನ್ನತೆಗೆ ಒಳಗಾಗಿದ್ದರಾ?
ಇತ್ತೀಚಿಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ, ಹಿಂದು ಧರ್ಮವನ್ನು ಬಿಟ್ಟು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಮಹಾಲಕ್ಷ್ಮಿ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇದ್ಯಾವುದಕ್ಕು ಪುರಾವೆ ಇರಲಿಲ್ಲ. ಆದರೀಗ ಮಹಾಲಕ್ಷ್ಮಿ ಸಿಕ್ಕಿದ್ದಾರೆ. ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗುತ್ತಿದ್ದಾರೆ.

ನಟಿ ಮಹಾಲಕ್ಷ್ಮಿ ಹೇಳಿದ್ದೇನು?
ಈ ಸುದ್ದಿ ಕೇಳಿ ಕುತೂಹಲ ತಾಳಲಾರದೆ 'ಫಿಲ್ಮಿ ಬೀಟ್ ಕನ್ನಡ' ತಂಡ ಮಹಾಲಕ್ಷ್ಮಿ ಅವರನ್ನು ಸಂಪರ್ಕ ಮಾಡಿ ಮಾತನಾಡಿಸುವ ಪ್ರಯತ್ನ ಮಾಡಲಾಯಿತು. ಸಿನಿಮಾ ಲೋಕಕ್ಕೆ ವಾಪಸ್ ಆಗುತ್ತಿರುವ ಬಗ್ಗೆ ಕೇಳಿದ್ದಕ್ಕೆ "ಈ ಬಗ್ಗೆ ಈಗಲೆ ಯಾವುದೆ ಮಾಹಿತಿ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇನೆ. ಸದ್ಯ ಚೆನ್ನೈನಲ್ಲಿ ಇದ್ದೀನಿ" ಎಂದು ಮಾತನಾಡಿ ಫೋನ್ ಇಟ್ಟರು. ಆದರೆ ಅವರ ಬಗ್ಗೆ ಇದ್ದ ಕುತೂಹಲ ಹಾಗೆ ಉಳಿದುಕೊಂಡಿದೆ. ಅವರು ಏನ್ಮಾಡುತ್ತಿದ್ದರು? ಇಲ್ಲಿದ್ದರು? ಎನ್ನುವ ಹಲವಾರು ಪ್ರಶ್ನೆಗಳಿಗೆ ಅವರೆ ಉತ್ತರಿಸಬೇಕಿದೆ.


Click it and Unblock the Notifications











