ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ಗೆ ಅನಾರೋಗ್ಯ: ಜಯದೇವ ಆಸ್ಪತ್ರೆಗೆ ದಾಖಲು!
ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರೊ ದೊರೈ-ಭಗವಾನ್ ಖ್ಯಾತಿಯ ಭಗವಾನ್ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಸಂಬಂಧ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಕಾಣಿಸಿಕೊಂಡಿತ್ತು. ಎರಡು ದಿನಗಳ ಹಿಂದೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಭಗವಾನ್ ಅವರನ್ನು ತಕ್ಷಣವೇ ಜಯದೇವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿದೆ. 89 ವರ್ಷದ ಹಿರಿಯರ ನಿರ್ದೇಶಕರಿಗೆ ಡಾ. ಮಂಜುನಾಥ್ ಚಿಕಿತ್ಸೆ ನೀಡುತ್ತಿದ್ದಾರೆ ಎನ್ನಲಾಗಿದೆ.

ಕನ್ನಡ ಸಿನಿಮಾಗಳಲ್ಲಿ ಭಗವಾನ್ ಎಂದೇ ಚಿರಪರಿಚಿತರು. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಹೆಗ್ಗಳಿಕೆ ಇವರದ್ದು. ಅಂದ್ಹಾಗೆ ಇವರ ಅಸಲಿ ಹೆಸರು ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್. ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಭಗವಾನ್ ಬಳಿಕ ನಿರ್ದೇಶನಕ್ಕೆ ಇಳಿದಿದ್ದರು.
ಮೊದಲ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರಿಗೆ ಸಹಾಯಕರಾಗಿದ್ದರು. ಇಲ್ಲಿಂದ ಚಿತ್ರರಂಗದ ಪಯಣ ಶುರುವಾಗಿತ್ತು. 'ಸಂಧ್ಯಾರಾಗ' ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಆ ಬಳಿಕ ನಿರ್ದೇಶಕ ದೊರೈರಾಜ್ ಹಾಗೂ ಭಗವಾನ್ ಇಬ್ಬರೂ ಸೇರಿ ಸಿನಿಮಾವನ್ನು ನಿರ್ದೇಶನ ಮಾಡಲು ಆರಂಭಿಸಿದ್ದರು.
ಈ ಜೋಡಿ ಸುಮಾರು 55ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿದೆ. ದೊರೈರಾಜ್ ನಿಧನದ ಬಳಿಕ ಭಗವಾನ್ ಕೂಡ ಸಿನಿಮಾ ನಿರ್ದೇಶಿಸುವುದನ್ನು ಕಡಿಮೆ ಮಾಡಿದ್ದರು. 'ಜೇಡರಬಲೆ', 'ಗೋವಾದಲ್ಲಿ ಸಿಐಡಿ 999', 'ಕಸ್ತೂರಿ ನಿವಾಸ', 'ಎರಡು ಕನಸು', 'ಬಯಲುದಾರಿ', ವಸಂತಗೀತಾ, ಹೊಸ ಬೆಳಕು ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ದೊರೈ ಹಾಗೂ ಭಗವಾನ್ ಇಬ್ಬರೂ ಡಾ. ರಾಜ್ಕುಮಾರ್ ಅವರಿಗೆ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರೋದು ವಿಶೇಷ. ಇವರು ನಿರ್ದೇಶಿಸಿದ 55 ಸಿನಿಮಾಗಳಲ್ಲಿ ಸುಮಾರು 30ರಲ್ಲಿ ಅಣ್ಣಾವ್ರು ನಟಿಸಿದ್ದಾರೆ. ಭಗವಾನ್ ನಿರ್ದೇಶಕರಾಗಿ, ನಿರ್ಮಾಪಕರಾಗಿ ಹಾಗೂ ನಟರಾಗಿಯೂ ಜನಪ್ರಿಯಾಗಿದ್ದಾರೆ. 80ನೇ ವಯಸ್ಸಿನಲ್ಲಿಯೂ ಭಗವಾನ್ ಆಕ್ಟಿವ್ ಆಗಿ ಓಡಾಡಿಕೊಂಡಿದ್ದರು.


Click it and Unblock the Notifications











