ಗಣೇಶ್ ಶ್ರಾವಣಿ ಸುಬ್ರಹ್ಮಣ್ಯ ತೆಲುಗಿಗೆ ರೀಮೇಕ್
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಜೋಡಿಯ 'ಶ್ರಾವಣಿ ಸುಬ್ರಹ್ಮಣ್ಯ' ಚಿತ್ರಕ್ಕೆ ಎಲ್ಲೆಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ಈಗಾಗಲೆ ರಾಜ್ಯದಾದ್ಯಂತ 15 ದಿನಗಳನ್ನೂ ಪೂರೈಸಿದೆ. ಈ ನಡುವೆ ತೆಲುಗು ರೀಮೇಕ್ ಗೆ ಆಫರ್ ಕೂಡ ಬಂದಿದೆ.
ಮೂಲ ಚಿತ್ರವನ್ನು ನಿರ್ದೇಶಿರುವ ಮಂಜು ಸ್ವರಾಜ್ ಅವರೇ ತೆಲುಗು ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿರುವುದು ವಿಶೇಷ. ಈ ಮೂಲಕ ಮಂಜು ಸ್ವರಾಜ್ ತೆಲುಗು ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ. ತೆಲುಗು ಶ್ರಾವಣಿ ಸುಬ್ರಹ್ಮಣ್ಯ ಚಿತ್ರದ ರೀಮೇಕ್ ರೈಟ್ಸ್ ಶ್ರೀಧರ್ ಲಗಡಿಪಟಿ ಪಡೆದಿದ್ದಾರೆ. [ಶ್ರಾವಣಿ ಸುಬ್ರಹ್ಮಣ್ಯ ಚಿತ್ರವಿಮರ್ಶೆ]
ಈ ಹಿಂದೆ ಶ್ರೀಧರ್ ಅವರು ಗೋವಿಂದಾಯ ನಮಃ ಚಿತ್ರವನ್ನು ತೆಲುಗಿನಲ್ಲಿ 'ಪೋಟುಗಾಡು' ಹೆಸರಿನಲ್ಲಿ ರೀಮೇಕ್ ಮಾಡಿದ್ದರು. ಆರು ವರ್ಷಗಳ ಬಳಿಕ 'ಚೆಲುವಿನ ಚಿತ್ತಾರ' ಖ್ಯಾತಿಯ ಜೋಡಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ಅವರನ್ನು ಒಂದು ಮಾಡಿದ ಚಿತ್ರ 'ಶ್ರಾವಣಿ ಸುಬ್ರಮಣ್ಯ'.ಈ ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತವಿದ್ದು ಹಾಡುಗಳಿಗೂ ಗಣೇಶ್ ಅಭಿಮಾನಿಗಳು ಮನಸೋತಿದ್ದಾರೆ. ಈ ಹಿಂದೆ ತೆಲುಗಿನಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಎಂಬ ಹೆಸರಿನ ಚಿತ್ರ ಬಿಡುಗಡೆಯಾಗಿತ್ತು. ಈಗ ಚಿತ್ರಕ್ಕೆ ಇನ್ನೇನು ಹೆಸರಿಡುತ್ತಾರೋ ನೋಡಬೇಕು.
ಶ್ರಾವಣಿ ಸುಬ್ರಹ್ಮಣ್ಯ ಚಿತ್ರ ಸಾದಾಸೀದಾ ಲವ್ ಸ್ಟೋರಿಯಾದರೂ ಡಿಫರೆಂಟ್ ಆಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಬಹುಶಃ ಇದೇ ತೆಲುಗು ಚಿತ್ರೋದ್ಯಮವನ್ನು ಸೆಳೆದಿರಬೇಕು. ತೆಲುಗು ಶ್ರಾವಣಿ ಸುಬ್ರಹ್ಮಣ್ಯ ಚಿತ್ರದ ಉಳಿದ ವಿವರಳಿಗೆ ನಿರೀಕ್ಷಿಸಲಾಗಿದೆ. (ಏಜೆನ್ಸೀಸ್)


Click it and Unblock the Notifications












