ಡಬ್ಬಿಂಗ್ ವಿರೋಧಿ ಚಳುವಳಿಗೆ ಇವರೆಲ್ಲರ ಬೆಂಬಲ ಇದ್ಯಾ?
ಡಬ್ಬಿಂಗ್ ಬೇಕು-ಬೇಡ ಅನ್ನುವ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಚರ್ಚೆ ಕಾವೇರಿದೆ. ಯಾರು ಏನೇ ಅಂದರೂ ಡಬ್ಬಿಂಗ್ ಮಾಡೇ ತೀರುತ್ತೇವೆ ಅಂತ ಕೆಲ ನಿರ್ಮಾಪಕರು ಪಣ ತೊಟ್ಟು ನಿಂತಿದ್ದಾರೆ. ಡಬ್ಬಿಂಗ್ ವಿರೋಧಿಸಿ ಇಂದು ವಾಟಾಳ್ ನಾಗರಾಜ್ ಮತ್ತು ಸಾರಾ ಗೋವಿಂದು ನೇತೃತ್ವದಲ್ಲಿ ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೊಟೇಲ್ ನಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ನಟಿಯರಾದ ಶೃತಿ, ಭಾವನ, ಹಿರಿಯ ನಟರಾದ ಶಿವರಾಂ, ಶ್ರೀನಿವಾಸ್ ಮೂರ್ತಿ, ನಟರಾದ ಪ್ರೇಮ್, ವಿಜಯ್ ರಾಘವೇಂದ್ರ, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ದೇಶಕ ಎಂ.ಎಸ್.ರಮೇಶ್, ರಾಘವೇಂದ್ರ ರಾಜ್ ಕುಮಾರ್ ಪಾಲ್ಗೊಂಡಿದ್ದರು. [ಕನ್ನಡದಲ್ಲಿ 'ಡಬ್ಬಿಂಗ್' ಮಾಡುವವರಿಗೆ ವಾಟಾಳ್ ನಾಗರಾಜ್ ಎಚ್ಚರ!]

ಅಷ್ಟು ಬಿಟ್ರೆ, ಇದೀಗ ಗಾಂಧಿನಗರದ ಗೆಲ್ಲುವ ಕುದುರೆಗಳಾದ ಹ್ಯಾಟ್ರಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ದುನಿಯಾ ವಿಜಿ, ಗಣೇಶ್, ರವಿಚಂದ್ರನ್, ಅಂಬರೀಶ್ ಗೈರು ಹಾಜರಾಗಿದ್ದರು.
'ಕನ್ನಡ ಪರ ಹೋರಾಟ' ಅಂತಲೇ ಗುರುತಿಸಿಕೊಂಡಿರುವ ಈ ಡಬ್ಬಿಂಗ್ ವಿರೋಧಿ ಚಳುವಳಿಯ ಎಲ್ಲಾ ಹಂತದಲ್ಲೂ ಸ್ಟಾರ್ ನಟರು ಭಾಗವಹಿಸಿದರೆ ಹೋರಾಟಕ್ಕೊಂದು ಶಕ್ತಿ ಬರುತ್ತಿತ್ತು. ಅಷ್ಟೆ ಮೆರಗು ನೀಡುತ್ತಿತ್ತು. ಚಿತ್ರರಂಗದ ಒಗ್ಗಟ್ಟಿನ ಸಾಮರ್ಥ್ಯ ಪ್ರದರ್ಶನವಾಗುತ್ತಿತ್ತು.[ಕನ್ನಡ ನಟರ ಅಸಲಿ 'ಮನಿ'ಸ್ಥಿತಿ ಬಿಚ್ಚಿಟ್ಟ ರಾಕ್ ಲೈನ್]
ಆದರೆ, ಡಬ್ಬಿಂಗ್ ಗಲಾಟೆ ಮತ್ತೆ ಶುರುವಾಗಿ ವಾರಗಳೇ ಕಳೆದರೂ, ಯಾವೊಬ್ಬ ಸ್ಟಾರ್ ಕಲಾವಿದರೂ ತುಟಿ ಬಿಚ್ಚಿಲ್ಲ. ಎಲ್ಲಾ ಕಲಾವಿದರ ಬೆಂಬಲ ನಮಗಿದೆ ಅಂತ ವಾಟಾಳ್ ನಾಗರಾಜ್ ಹೇಳ್ತಾರೆ. ಆದರೆ ಅದೆಷ್ಟು ಮಂದಿ 'ಸ್ಟಾರ್ಸ್' ಆಗಸ್ಟ್ 26 ರಂದು ನಡೆಯುವ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ತಾರೆ ಅಂತ ನೀವುಗಳೇ ಸಾಕ್ಷಿಯಾಗಿರುತ್ತೀರಾ.!


Click it and Unblock the Notifications











