'ಹೀಗೊಂದು ದಿನ' ಸಿನಿಮಾ ನೋಡಿ ಖುಷಿಯಾದ ಸ್ಯಾಂಡಲ್ ವುಡ್ ನಟ, ನಟಿಯರು
ನಟಿ ಸಿಂಧು ಲೋಕನಾಥ್ ಅಭಿನಯದ 'ಹೀಗೊಂದು ದಿನ' ಸಿನಿಮಾ ಕಳೆದ ಶುಕ್ರವಾರ ರಿಲೀಸ್ ಆಗಿದೆ. ವಿಭಿನ್ನ ಶೈಲಿಯ ಈ ಸಿನಿಮಾವನ್ನು ಜನ ಕೂಡ ಸ್ವೀಕರಿಸಿದ್ದಾರೆ ಇದರ ಜೊತೆಗೆ ಸ್ಯಾಂಡಲ್ ವುಡ್ ನಟ, ನಟಿಯರು ಕೂಡ ಈಗ 'ಹೀಗೊಂದು ದಿನ' ಚಿತ್ರ ನೋಡಿ ಖುಷಿ ಪಟ್ಟಿದ್ದಾರೆ.
ನಿರ್ದೇಶಕ ನಂದಕಿಶೋರ್, ನಟ ಸುನೀಲ್ ರಾವ್, ಸತೀಶ್ ನೀನಾಸಂ, ಅನೀಶ್ ತೇಜೆಶ್ವರ್, ಭಾವನ ರಾವ್, 'ಚಮಕ್' ಚಿತ್ರದ ನಿರ್ಮಾಪಕ ಚಂದ್ರಶೇಖರ್, ನಿರ್ಮಾಪಕ ಉದಯ್ ಮೆಹ್ತಾ, ನಟಿ ಗಿರಿಜಾ ಲೋಕೇಶ್ ಸೇರಿದಂತೆ ಪ್ರಮುಖರು 'ಹೀಗೊಂದು ದಿನ' ಸಿನಿಮಾವನ್ನು ವೀಕ್ಷಿಸಿದ್ದಾರೆ. ಓರಯನ್ ಮಾಲ್ ನಲ್ಲಿ ನಿನ್ನೆ ಚಿತ್ರದ ವಿಶೇಷ ಪ್ರದರ್ಶನವನ್ನು ಈ ನಟ, ನಟಿಯರಿಗಾಗಿ ಏರ್ಪಡಿಸಲಾಗಿತ್ತು. ಇದೇ ವೇಳೆ ಸಿಂಧು ಲೋಕನಾಥ್ ಸೇರಿದಂತೆ ಇಡೀ ಚಿತ್ರತಂಡ ಕೂಡ ಭಾಗಿಯಾಗಿತ್ತು.
ಅಂದಹಾಗೆ, ಹೀಗೊಂದು ದಿನ' ಹೆಸರಿಗೆ ತಕ್ಕಂತೆ ಒಂದು ದಿನದಲ್ಲಿ ಅದರಲ್ಲಿ ಬೆಳ್ಳಗೆ 6 ಗಂಟೆಯಿಂದ 8 ಗಂಟೆಯವರೆಗೆ ನಡೆಯುವ ಕಥೆ. ಜಾನವಿ (ಸಿಂಧು ಲೋಕನಾಥ್) ಎಂಬ ಒಬ್ಬ ಹುಡುಗಿ ಅಮ್ಮನ ಚಕ್ರವ್ಯೂಹ ಬೇದಿಸಿಕೊಂಡು ಬೆಳ್ಳಗೆ ಮನೆಯಿಂದ ಹೊರಗೆ ಹೋಗುತ್ತಾಳೆ. ಹೀಗೆ ಮನೆಯಿಂದ ಹೊರಟ ಹುಡುಗಿ ತಾನು ತಲುಪುವ ಜಾಗದ ನಡುವಿನ ಜರ್ನಿಯ ಕಥೆಯೇ 'ಹೀಗೊಂದು ದಿನ' ಸಿನಿಮಾ.

'ಹೀಗೊಂದು ದಿನ' ಹೇಗಿದೆ ?
'ಹೀಗೊಂದು ದಿನ' ಸಿನಿಮಾವನ್ನು ಜಾಸ್ತಿ ತಲೆ ಕೆಡೆಸಿಕೊಂಡು ನೋಡುವ ಹಾಗೆ ಇಲ್ಲ. ಇಲ್ಲಿ ದೊಡ್ಡ ಲವ್ ಸ್ಟೋರಿ ಇಲ್ಲ, ಆಕ್ಷನ್ ಇಲ್ಲ, ಥ್ರಿಲ್ಲಿಂಗ್ ಅಂಶಗಳು ಇಲ್ಲ, ಎಲ್ಲದಕ್ಕಿಂತ ಹೆಚ್ಚಾಗಿ ಕಥೆಗೆ ಬೇಡದ ಯಾವುದು ವಿಷಯವನ್ನು ಇಲ್ಲಿ ಹೇಳಿಲ್ಲ. ಇದೊಂದು ಸಿಂಪಲ್ ಕಥೆಯ ಸಿಂಪಲ್ ಸಿನಿಮಾ. ಸರಳ ಕಥೆ ಹೊಂದಿರುವ ಈ ಚಿತ್ರದ ಒಳಗೆ ಒಂದು ಒಳ್ಳೆಯ ವಿಷಯ ಇದೆ. ಜರ್ನಿಯಲ್ಲಿ ನಡೆಯುವ ಸಣ್ಣ ಪುಟ್ಟ ಘಟನೆಗಳು ನೋಡುಗರನ್ನು ತಟ್ಟುತ್ತದೆ. ಎಲ್ಲಿಯೂ ಇದ್ದಕ್ಕಿದ್ದ ಹಾಗೆ ಕಾಮಿಡಿ ದೃಶ್ಯಗಳು, ಹಾಡುಗಳು ಬರುವುದಿಲ್ಲ. ಎಲ್ಲ ಅಂಶಗಳು ಸಿನಿಮಾದ ಕಥೆಯ ಜೊತೆಗೆ ಪ್ರಯಾಣ ಮಾಡಿದೆ.


Click it and Unblock the Notifications











