ಕಿರುತೆರೆ ನಟಿ ಹೇಮಶ್ರೀ ನಿಗೂಢ ಸಾವು
ಕಿರುತೆರೆ ನಟಿ ಹೇಮಶ್ರೀ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಪತಿಯ ಜೊತೆ ಪ್ರವಾಸಕ್ಕೆ ತೆರಳಿದ್ದ ಹೇಮಶ್ರೀ ಅವರು ಶವವಾಗಿ ಬೆಂಗಳೂರಿಗೆ ವಾಪಸಾಗಿದ್ದಾರೆ.
ನಗರ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಹೇಮಶ್ರೀ ಅವರ ಶವಪರೀಕ್ಷೆಯನ್ನು ನಡೆಸಲಾಗುತ್ತಿದೆ. ಹೇಮಶ್ರೀ ಅವರನ್ನು ಆಸ್ಪತ್ರೆಗೆ ಕರೆ ತರುವ ಹೊತ್ತಿಗೆ ಜೀವ ಹೋಗಿತ್ತು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಮುಖಂಡ ಸುಧೀಂದ್ರ ಅವರು ತಮ್ಮ ಮಗಳನ್ನು ಕೊಲೆಗೈದಿದ್ದಾರೆ ಎಂದು ಹೇಮಶ್ರೀ ಹೆತ್ತವರು ದೂರು ನೀಡಿದ್ದಾರ. ಸದ್ಯ ಸುಧೀಂದ್ರ ಅವರು ಹೆಬ್ಬಾಳ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆದಿದೆ. ಅನಂತಪುರಕ್ಕೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಗೆಳೆಯರ ಮನೆಯಲ್ಲಿ ತಂಗಿದ್ದೆವು. ಅಲ್ಲಿಂದ ಬರುವಾಗ ಆಕೆ ಅಸ್ವಸ್ಥಳಾದಳು ನಂತರ ಆಸ್ಪತ್ರೆಗೆ ಸೇರಿಸಿದೆ ಎಂದು ಸುಧೀಂದ್ರ ಹೇಳಿಕೆ ನೀಡಿದ್ದಾನೆ ಎಂದು ಖಾಸಗಿ ಸುದ್ದಿ ವಾಹಿನಿ ಹೇಳಿದೆ.
ಆದರೆ, ಸುಧೀಂದ್ರ ಅವರು ಹೇಮರನ್ನು ಆಸ್ಪತ್ರೆಗೆ ಸೇರಿಸಿದ ಮೇಲೆ ನಾಪತ್ತೆಯಾಗಿದ್ದಾರೆ ಎಂದು ಇನ್ನೊಂದು ಮೂಲಗಳು ಹೇಳುತ್ತಿದೆ. ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ನಡುವೆ ಹೇಮಶ್ರೀ ಹೆತ್ತವರು ತಾವು ವಾಸವಿರುವ ಚನ್ನಮ್ಮನ ಕೆರೆ ಅಚ್ಚುಕಟ್ಟೆ ಪ್ರದೇಶ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿದ್ದಾರೆ. ಅನಂತಪುರದಲ್ಲೂ ದೂರು ದಾಖಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ದಾಂಪತ್ಯ ಕಲಹ : ಹೇಮಶ್ರೀಗೆ ಸುಮಾರು 30 ವರ್ಷ ಹಾಗೂ ಆಕೆ ಪತಿ ಸುಧೀಂದ್ರಗೆ 48 ವರ್ಷ. ಮದುವೆಯಾದ ಮರುದಿನವೇ ತನ್ನ ಗಂಡನ ಮೇಲೆ ಹೇಮಶ್ರೀ ದೂರು ದಾಖಲಿಸಿದ್ದರು.
2011ರಲ್ಲಿ ಜೂನ್ 22ರಂದು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಹೇಮಶ್ರೀ ಮರುದಿನವೇ ಗಂಡನ ವಿರುದ್ಧ ದೂರು ನೀಡಿದ್ದರು. ನನ್ನ ಪತಿಗೆ ಈಗಾಗಲೇ ಮದುವೆಯಾಗಿದೆ. ನನ್ನನ್ನು ಬಲವಂತವಾಗಿ ಎರಡನೇ ಮದುವೆಯಾಗಿದ್ದಾರೆ. ಇದಕ್ಕೆ ನನ್ನ ಹೆತ್ತವರು ಒಪ್ಪಿಗೆ ನೀಡಿದ್ದಾರೆ. ಇದರಲ್ಲಿ ಅವರದ್ದು ತಪ್ಪಿದೆ ಎಂದು ಪೊಲೀಸರಿಗೆ ಹೇಮಶ್ರೀ ದೂರು ನೀಡಿದ್ದರು.
ಆದರೆ, ದೂರು ನೀಡಿದ ಮರುದಿನವೇ ದೂರು ವಾಪಸ್ ತೆಗೆದುಕೊಂಡಿದ್ದರು. ನಾನು ದುಡುಕಿ ದೂರನ್ನು ನೀಡಿದ್ದೇನೆ. ನನಗೆ ಸರಿಯಾದ ಮಾಹಿತಿ ಇರಲಿಲ್ಲ ಕ್ಷಮಿಸಿ ಎಂದು ಪೊಲೀಸರ ಬಳಿ ಹೇಮಶ್ರೀ ಕೇಳಿಕೊಂಡಿದ್ದರು.
2008ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಸೋಲುಂಡ ಹೇಮಶ್ರೀ ನಂತರ ಜೆಡಿಎಸ್ ಪಕ್ಷದ ಮುಖಂಡ ಸುರೇಂದ್ರ ಬಾಬು ಅವರನ್ನು ಮದುವೆಯಾಗಿದ್ದರು.
ಬಾಲಕಲಾವಿದೆಯಾಗಿ ಕನ್ನಡ ಚಿತ್ರೋದ್ಯಮಕ್ಕೆ ಕಾಲಿಟ್ಟು ಎರಡನೇ ನಾಯಕಿಯಾಗಿ, ಮಗಳಾಗಿ, ತಂಗಿಯಾಗಿ, ಸೊಸೆಯಾಗಿ ತೆರೆಮೇಲೆ ಹೇಮಶ್ರೀ ಕಾಣಿಸಿಕೊಂಡಿದ್ದರು.
ಸಿರಿವಂತ, ವರ್ಷ, ಮರ್ಮ, ಉಗ್ರಗಾಮಿ, ವೀರ ಪರಂಪರೆ, ಸಿನಿಮಾ ಅಲ್ಲ ರಿಯಲ್ ಸ್ಟೋರಿ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದರೆ, ಕಿರುತೆರೆಯಲ್ಲಿ ಸುಮಾರು 35ಕ್ಕೂ ಧಾರಾವಾಹಿಗಳಲ್ಲಿ ನಟಿಸಿದ್ದರು. 6 ವರ್ಷಗಳ ಕಾಲ ಸಿರೀಯಲ್ ಜಗತ್ತಿನಲ್ಲಿ ಮಿಂಚಿದ್ದ ಹೇಮಶ್ರೀ 'ಸೀರೆಗೊಂದು ಸವಾಲ್' ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿದ್ದರು.
ನೀ ಸುಖಂ ಕೋರುಕುಂಟಾನು ಎಂಬ ತೆಲುಗು ಚಿತ್ರದಲ್ಲಿ ಸ್ನೇಹ ಹಾಗೂ ರಾಜಾ ಅವರ ಜೊತೆ ನಟಿಸಿದ್ದರು. ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಹೇಮಶ್ರೀ ಬಣ್ಣದ ಲೋಕಕ್ಕೆ ಮರುಳಾಗಿ ಓದಿಗೆ ಗುಡ್ ಬೈ ಹೇಳಿದ್ದರು. ಪಟಪಟ ಮಾತನಾಡುವ ಹೇಮಶ್ರೀ ಪ್ರತಿಭಾವಂತೆಯಾಗಿದ್ದರು. [ಹೇಮಶ್ರೀ ಗ್ಯಾಲರಿ]


Click it and Unblock the Notifications











