ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿ ಮಾಡಿದ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು

ಸದ್ಯ ವಿಶ್ವದಾದ್ಯಂತ ಕಾಂತಾರ ಚಿತ್ರ ಅಬ್ಬರಿಸುತ್ತಿದ್ದು, ಎಲ್ಲೆಡೆ ದೊಡ್ಡ ಮಟ್ಟದ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಬುಕ್ ಮೈ ಶೋ ಹಾಗೂ ಐಎಂಡಿಬಿಯಲ್ಲಿ ದಾಖಲೆಯ ರೇಟಿಂಗ್ ಪಡೆದುಕೊಳ್ಳುತ್ತಿರುವ ಕಾಂತಾರ ಚಿತ್ರ ಕರ್ನಾಟಕದ ಕರಾವಳಿ ಭಾಗದ ಜನರ ಅತ್ಯಮೂಲ್ಯ ಆಚರಣೆಯಾದ ದೈವಾರಾಧನೆ ಹಾಗೂ ಭೂತ ಕೋಲದ ಮಹತ್ವವನ್ನು ಸಿನಿಪ್ರೇಕ್ಷಕರಿಗೆ ಬಿಚ್ಚಿಟ್ಟಿದೆ.
ಹೀಗೆ ಒಂದೊಳ್ಳೆ ಕಥಾಹಂದರವನ್ನು ಹೊಂದಿರುವ ಕಾಂತಾರ ಚಿತ್ರವನ್ನು ಸಿನಿಪ್ರೇಕ್ಷಕರು ಒಪ್ಪಿ ಅಪ್ಪಿಕೊಂಡಿದ್ದು, ಇದೀಗ ಕಾಂತಾರಾ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದ್ದಾರೆ.
ಅನುರಾಗ್ ಠಾಕೂರ್ ಅವರನ್ನು ಭೇಟಿಯಾದದ್ದು ಸಂತಸ ತಂದಿದೆ ಎಂದು ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಖಾತೆಗಳಲ್ಲಿ ಬರೆದುಕೊಂಡಿರುವ ವಿಜಯ್ ಕಿರಗಂದೂರು ಈ ಭೇಟಿಯ ವೇಳೆ ನಮ್ಮ ನೆಲದ ಸಂಸ್ಕೃತಿಯ ಕಥೆಯನ್ನೊಳಗೊಂಡ ಮತ್ತಷ್ಟು ಚಿತ್ರಗಳನ್ನು ನಿರ್ಮಿಸುವ ಸಾಧ್ಯತೆಯ ಕುರಿತಾಗಿ ಚರ್ಚೆ ನಡೆಸಲಾಯಿತು ಎಂಬುದನ್ನು ಉಲ್ಲೇಖಿಸಿದ್ದಾರೆ.
ಇನ್ನು ನಿನ್ನಿಂದಲೇ ಚಿತ್ರದ ಮೂಲಕ ಹೊಂಬಾಳೆ ಫಿಲ್ಮ್ಸ್ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ ವಿಜಯ್ ಕಿರಗಂದೂರು ನಂತರ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರಕ್ಕೂ ಬಂಡವಾಳ ಹೂಡಿದ್ದರು ಹಾಗೂ ತಮ್ಮ ನಿರ್ಮಾಣ ಸಂಸ್ಥೆಯ ಮೂರನೇ ಚಿತ್ರವಾದ ರಾಜಕುಮಾರ ಮೂಲಕ ಹೊಂಬಾಳೆ ಫಿಲ್ಮ್ಸ್ ಇಂಡಸ್ಟ್ರಿ ಹಿಟ್ ದಾಖಲಿಸಿತು. ನಂತರ ಕೆಜಿಎಫ್ ಚಾಪ್ಟರ್ 1 ಮೂಲಕ ಮತ್ತೊಂದು ಇಂಡಸ್ಟ್ರಿ ಹಿಟ್ ನೀಡಿದ ವಿಜಯ್ ಕಿರಗಂದೂರು ಯುವರತ್ನ ಮೂಲಕ ಮತ್ತೆ ಗೆದ್ದರು ಹಾಗೂ ಕೆಜಿಎಫ್ ಚಾಪ್ಟರ್ 2 ಮೂಲಕ ಇದೇ ವರ್ಷ ಭರ್ಜರಿ ಗಳಿಕೆ ಮಾಡಿದರು. ಸದ್ಯ ಕಾಂತಾರ ಚಿತ್ರದ ಮೂಲಕವೂ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಕೋಟಿ ಕೋಟಿ ಬಾಚುತ್ತಿದೆ.


Click it and Unblock the Notifications











