ಹೊರಬಿತ್ತು 'ವರಾಹ ರೂಪಂ' ಕೇಸ್ನ ತೀರ್ಪು; ಗೆದ್ದವರಾರು, ಮುಖಭಂಗ ಯಾರಿಗೆ?
ಇಡೀ ದೇಶವನ್ನೇ ಗೆದ್ದಿದ್ದ ಕಾಂತಾರ ಹಾಡೊಂದರ ವಿವಾದದಿಂದಾಗಿ ತೀವ್ರ ಹಿನ್ನಡೆಯನ್ನು ಅನುಭವಿಸಿತ್ತು. ಹೌದು, ಚಿತ್ರದ ಅಂತ್ಯದಲ್ಲಿ ಬರುವ ವರಾಹ ರೂಪಂ ಹಾಡಿನ ಟ್ಯೂನ್ ಅನ್ನು ಮಲಯಾಳಂನ ನವರಸಮ್ ಎಂಬ ಆಲ್ಬಂ ಹಾಡಿನಿಂದ ಕದಿಯಲಾಗಿದೆ ಎಂಬ ಟ್ರೋಲ್ ಶುರುವಾಗಿತ್ತು.
ದಿನ ಕಳೆದಂತೆ ನವರಸಮ್ ಹಾಡನ್ನು ಸಂಯೋಜಿಸಿದ್ದ ಥೈಕ್ಕುಡಂ ಬ್ರಿಡ್ಜ್ ಕೂಡ ವರಾಹ ರೂಪಂ ಹಾಡಿನ ರಾಗವನ್ನು ನಮ್ಮ ನವರಸಮ್ ಹಾಡಿನಿಂದ ಕದ್ದಿದ್ದಾರೆ ಎಂದು ಆರೋಪಿಸಲು ಆರಂಭಿಸಿದರು. ಅಷ್ಟಕ್ಕೆ ಸುಮ್ಮನಾಗದ ಥೈಕ್ಕುಡಂ ಬ್ರಿಡ್ಜ್ ಹಾಡಿನ ಮೇಲೆ ಕದ್ದ ಆರೋಪದಡಿ ಕೃತಿಚೌರ್ಯದ ದೂರನ್ನೂ ಸಹ ದಾಖಲಿಸಿತು. ಚಿತ್ರ ಒಳ್ಳೆ ಗಳಿಕೆ ಮಾಡಿದ ನಂತರ ಈ ರೀತಿ ಕೇಸ್ ಹಾಕುತ್ತಿರುವುದು ಹಣ ಪಡೆಯಲು ಎಂಬ ಆರೋಪವೂ ಸಹ ಥೈಕ್ಕುಡಂ ಬ್ರಿಡ್ಜ್ ವಿರುದ್ಧ ದೊಡ್ಡ ಮಟ್ಟದಲ್ಲಿ ಕೇಳಿಬಂದವು.
ಆದರೆ ಇದ್ಯಾವ ಟೀಕೆಗೂ ಮಣಿಯದ ಥೈಕ್ಕುಡಂ ಬ್ರಿಡ್ಜ್ ಕಾಂತಾರ ಚಿತ್ರತಂಡದ ವಿರುದ್ಧ ಕೋರ್ಟ್ ಸಮರ ಸಾರಿಯೇ ಬಿಟ್ಟಿತು. ಪಾಲಕ್ಕಾಡ್ ಹಾಗೂ ಕೋಯಿಕ್ಕೋಡ್ ಈ ಎರಡೂ ನಗರಗಳ ಸ್ಥಳೀಯ ನ್ಯಾಯಾಲಯಗಳಲ್ಲಿ ವರಾಹ ರೂಪಂ ಮೇಲೆ ದೂರು ದಾಖಲಾಗಿತ್ತು ಹಾಗೂ ಕೋಯಿಕೋಡ್ ನ್ಯಾಯಾಲಯವು ವರಾಹ ರೂಪಂ ಹಾಡನ್ನು ಬಳಸದಂತೆ ತಡೆಯಾಜ್ಞೆ ಹೊರಡಿಸಿತು. ಎಲ್ಲಿಯೂ ಸಹ ವರಾಹ ರೂಪಂ ಹಾಡನ್ನು ಬಳಸುವ ಹಾಗಿಲ್ಲ ಎಂದು ಆದೇಶ ನೀಡಿತ್ತು. ಆದರೆ ಈ ಆದೇಶವನ್ನು ಕೇರಳ ಹೈಕೋರ್ಟ್ ಮಾಡಿತ್ತು. ಹೀಗೆ ಕೊಯಿಕೊಡ್ ಸ್ಥಳೀಯ ನ್ಯಾಯಾಲಯದ ಆದೇಶ ಗೆದ್ದ ಕಾಂತಾರ ತಂಡಕ್ಕೆ ಪಾಲಕ್ಕಾಡ್ ನ್ಯಾಯಾಲಯ ನೀಡಿದ್ದ ಆದೇಶ ತಲೆ ನೋವಾಗಿತ್ತು. ಇದೀಗ ಈ ಆದೇಶದ ಪರಿಶೀಲನೆ ಕೂಡ ನಡೆದಿದ್ದು, ವರಾಹ ರೂಪಂ ಕೇಸ್ ಸಂಪೂರ್ಣವಾಗಿ ಅಂತ್ಯಗೊಂಡಿದೆ.

ಪಾಲಕ್ಕಾಡ್ ಆದೇಶ ಕೂಡ ವಜಾ
ಥೈಕ್ಕುಡಂ ಬ್ರಿಡ್ಜ್ ಕೋಯಿಕೋಡ್ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದರೆ, ನವರಸಮ್ ಹಾಡಿನ ಸ್ಟ್ರೀಮಿಂಗ್ ಹಕ್ಕು ಹೊಂದಿದ್ದ ಮಾತೃಭೂಮಿ ಕಪ್ಪಾ ಟಿವಿ ಯುಟ್ಯೂಬ್ ಚಾನಲ್ ಪಾಲಕ್ಕಾಡ್ ಸ್ಥಳೀಯ ನ್ಯಾಯಾಲಯದಲ್ಲಿ ದೂರನ್ನು ನೀಡಿತ್ತು. ಹೀಗೆ ಎರಡು ನ್ಯಾಯಾಲಯಗಳಲ್ಲಿ ಕೇಸ್ ಹಾಕಿದರೂ ಸಹ ನಿರೀಕ್ಷಿಸಿದ ಫಲಿತಾಂಶ ಲಭಿಸಿಲ್ಲ. ಮೊದಲಿಗೆ ಕೋಯಿಕ್ಕೋಡ್ ನ್ಯಾಯಾಲಯದ ಆದೇಶವನ್ನು ವಜಾ ಮಾಡಿದ್ದ ಕೇರಳ ಹೈಕೋರ್ಟ್ ಈಗ ಪಾಲಕ್ಕಾಡ್ ನ್ಯಾಯಾಲಯದ ಆದೇಶವನ್ನೂ ಸಹ ವಜಾ ಮಾಡಿದೆ.

ಕೇಸ್ ಗೆದ್ದೆವು ಎಂದ ರಿಷಬ್ ಶೆಟ್ಟಿ
ದೈವದ ಆಶೀರ್ವಾದದಿಂದ ಹಾಗೂ ಜನರ ಆಶೀರ್ವಾದದಿಂದ ವರಾಹ ರೂಪಂ ಮೇಲೆ ಹಾಕಲಾಗಿದ್ದ ಕೇಸನ್ನು ಗೆದ್ದಿದ್ದೇವೆ ಹಾಗೂ ಓಟಿಟಿಯಲ್ಲೂ ಸಹ ಹಾಡು ಬರಲಿದೆ ಎಂದೂ ಸಹ ರಿಷಬ್ ಶೆಟ್ಟಿ ಟ್ವೀಟ್ ಮಾಡಿ ಕೇಸ್ ಗೆದ್ದ ಮಾಹಿತಿ ಮತ್ತು ಖುಷಿಯನ್ನು ಹಂಚಿಕೊಂಡಿದ್ದಾರೆ.
ರಿಷಬ್ ಮಾಡಿದ ಟ್ವೀಟ್ ಹೀಗಿದೆ: "ದೈವಾನು ದೈವಗಳ ಆಶೀರ್ವಾದ ಹಾಗು ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ ಓಟಿಟಿಯಲ್ಲೂ ಹಾಡನ್ನು ಬದಲಾಯಿಸಲಿದ್ದೇವೆ"

ಮುಖಭಂಗಕ್ಕೊಳಗಾದ ಥೈಕ್ಕುಡಂ ಬ್ರಿಡ್ಜ್
ಇನ್ನು ಕೇಸ್ ದಾಖಲಿಸಿದ್ದ ಥೈಕ್ಕುಡಂ ಬ್ರಿಡ್ಜ್ ಹಾಗೂ ಮಾತೃಭೂಮಿ ಕಪ್ಪಾಗೆ ತೀವ್ರ ಮುಖಭಂಗ ಉಂಟಾಗಿದೆ. ನಾವೇನು ಹಣ ಕೇಳುತ್ತಿಲ್ಲ, ವರಾಹ ರೂಪಂ ಹಾಡಿನಲ್ಲಿ ನಮಗೆ ಕ್ರೆಡಿಟ್ ನೀಡಿದ್ದರೆ ಸಾಕಾಗಿತ್ತು ಎಂದೆಲ್ಲಾ ಹೇಳಿಕೆಯನ್ನು ನೀಡಿ ಈಗ ಸೋತು ಮುಖಭಂಗ ಅನುಭವಿಸಿದೆ. ಅಷ್ಟೇ ಅಲ್ಲದೇ ಹೊಂಬಾಳೆ ಫಿಲ್ಮ್ಸ್ ಬಳಿ ಎಷ್ಟೇ ಕೋಟಿ ಇದ್ದರೂ ಹಣಬಲದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ ಎಂದೂ ಸಹ ಥೈಕ್ಕುಡಂ ಬ್ರಿಡ್ಜ್ ಸವಾಲನ್ನು ಎಸೆದಿತ್ತು.


Click it and Unblock the Notifications











