ಡಾ.ರಾಜ್ ಕುಟುಂಬ ಆಪ್ತನ ಸಾವಿಗೆ ಕಾರಣವಾಯ್ತಾ ಆ ಒಂದು ಟೆಂಡರ್
ನಿರ್ಮಾಪಕ, ವಿತರಕ, ಹೋಟೆಲ್ ಉದ್ಯಮಿ, ಡಾ.ರಾಜ್ಕುಮಾರ್ ಕುಟುಂಬದ ಆಪ್ತ ಕಪಾಲಿ ಮೋಹನ್ ಇಂದು ಸಾವನ್ನಪ್ಪಿದ್ದಾರೆ. ಅವರು ತಮ್ಮದೇ ಒಡೆತನದ ಹೋಟೆಲ್ನಲ್ಲಿ ನೇಣುಹಾಕಿಕೊಂಡಿದ್ದಾರೆ.
Recommended Video
ಪುನೀತ್ ರಾಜ್ಕುಮಾರ್, ಶಿವರಾಜ್ ಕುಮಾರ್ ಅವರಿಗೆ ಬಹುವಾಗಿ ಆಪ್ತರಾಗಿದ್ದರು ಈ ಕಪಾಲಿ ಮೋಹನ್, ವಜ್ರೇಶ್ವರಿ ಕಂಬೈನ್ಸ್ನ ಸಿನಿಮಾಗಳ ಕೆಲವು ಸಿನಿಮಾಗಳಿಗೆ ಪಾಲುದಾರರೂ ಆಗಿದ್ದರು ಎನ್ನಲಾಗಿದೆ. ರಾಜ್ ಕುಟುಂಬದ ಕೆಲವು ವ್ಯವಹಾರಗಳಲ್ಲಿಯೂ ಕುಮಾರ್ ಅವರು ಪಾಲುದಾರರಾಗಿದ್ದರು ಎನ್ನಲಾಗಿದೆ.
ಕೆಲವು ಹೋಟೆಲ್ಗಳನ್ನು ಹೊಂದಿದ್ದ, ಸಿನಿಮಾ ನಿರ್ಮಾಣ ಮತ್ತು ವಿತರಣೆ ಮಾಡುತ್ತಿದ್ದ ಕಪಾಲಿ ಮೋಹನ್ ಅವರು ಏಕಾ-ಏಕಿ ನೇಣು ಹಾಕಿಕೊಳ್ಳುವಂತಹದ್ದು ಏನಾಗಿತ್ತು? ಎಂಬ ಕುತೂಹಲ ಎದ್ದಿದ್ದು, ಕೆಲ ವರ್ಷಗಳ ಹಿಂದೆ ಕಪಾಲಿ ಮೋಹನ್ ಗೆ ದೊರೆತಿದ್ದ ಆ ಒಂದು ಟೆಂಡರ್ನಿಂದಲೇ ಅವರು ಜೀವ ತೆಗೆದುಕೊಳ್ಳುವಂತಾಯಿತಾ? ಎಂಬ ಅನುಮಾನ ಉಂಟಾಗಿದೆ.

2014 ರಲ್ಲಿ ಸಿಕ್ಕಿದ್ದ ಟೆಂಡರ್
2014 ರಲ್ಲಿ ಕೆಎಸ್ಆರ್ಟಿಸಿಯು ಪೀಣ್ಯ ಎರಡನೇ ಹಂತದ ಬಳಿ ಬಸವೇಶ್ವರ ಬಸ್ ನಿಲ್ದಾಣ ನಿರ್ಮಿಸಿತ್ತು. ಶಿವಮೊಗ್ಗ ಸೇರಿ ಉತ್ತರ ಕರ್ನಾಕದ ಕಡೆಗೆ ಹೋಗುವ ಬಸ್ಗಳು ಇಲ್ಲಿಂದ ಹೋಗಲೆಂದು ಈ ನಿಲ್ದಾಣ ನಿರ್ಮಿಸಲಾಗಿತ್ತು. ವಾಣಿಜ್ಯ ಚಟುವಟಿಕೆಗಳಿಗಾಗಿ ಮಳಿಗೆಗಳನ್ನು ನಿರ್ಮಿಸಲಾಗಿತ್ತು.

3.10 ಕೋಟಿ ಭದ್ರತಾ ಠೇವಣಿ ಇಟ್ಟು ಟೆಂಡರ್ ಪಡೆದಿದ್ದರು
ಈ ಮಳಿಗೆಗಳನ್ನು ಕಪಾಲಿ ಮೋಹನ್ ಒಬ್ಬರೇ 3.10 ಕೋಟಿ ರೂಪಾಯಿ ಹಣವನ್ನು ಭದ್ರತಾ ಠೇವಣಿಯಾಗಿಟ್ಟು, ಚದರ ಮೀಟರ್ಗೆ 26 ರೂಪಾಯಿಯಂತೆ ಬಾಡಿಗೆಗೆ ಪಡೆದಿದ್ದರು. ಅದನ್ನು ಇತರರಿಗೆ ದಿನದ ಲೆಕ್ಕದಲ್ಲಿ ಬಾಡಿಗೆ ನೀಡಿದ್ದರು.

ಆದೇಶ ಬದಲಿಸಿದ ಕೆ.ಎಸ್.ಆರ್.ಟಿ.ಸಿ
ಮೊದಲಿಗೆ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು, ಆದರೆ ಕೆಎಸ್ಆರ್ಟಿಸಿ ಗೆ ನಷ್ಟವಾಗಲು ಪ್ರಾರಂಭವಾದಾಗ, ಬಸ್ಸುಗಳನ್ನು ಮೆಜೆಸ್ಟಿಕ್ ನಿಂದಲೇ ಹೊರಡುವಂತೆ ಆದೇಶ ಮಾಡಲಾಯಿತು. ಈ ಆದೇಶದಿಂದಾಗಿ ಕಪಾಲಿ ಮೋಹನ್ಗೆ ಭಾರಿ ನಷ್ಟವುಂಟಾಯಿತು.

ಸುಪ್ರೀಂ ಹೋಟೆಲ್ ನಿರ್ಮಿಸಿದ್ದ ಕಪಾಲಿ ಮೋಹನ್
ಈ ಬಸ್ ನಿಲ್ದಾಣಕ್ಕೆ ಬರುವ ಜನರನ್ನು ಗುರಿಯಾಗಿಸಿಕೊಂಡು ನಿರ್ಮಿಸಿದ್ದ ಸುಪ್ರೀಂ ಹೆಸರಿನ ಐಶಾರಾಮಿ ಹೋಟೆಲ್ ಗೂ ಭಾರಿ ಬಂಡವಾಳವನ್ನೇ ಕಪಾಲಿ ಮೋಹನ್ ಸುರಿದಿದ್ದರು. ಆದರೆ ಬಸ್ ನಿಲ್ದಾಣ ತನ್ನ ಚಟುವಟಿಕೆಯನ್ನೇ ನಿಲ್ಲಿಸಿದಾಗ ಕಪಾಲಿ ಮೋಹನ್ ಕುಸಿತ ಆರಂಭವಾಯಿತು.

ಹೋಟೆಲ್ ಮೇಲೆ ಸಿಸಿಬಿ ರೇಡ್
ನಂತರ ಕಪಾಲಿ ಮೋಹನ್ ಒಡೆತನದ ಆರ್.ಜಿ.ಹೋಟೆಲ್ ಮೇಲೆ ಸಿಸಿಬಿ ರೇಡ್ ನಡೆದು ಜೂಜು ನಡೆಸುತ್ತಿದ್ದ ಆರೋಪದಲ್ಲಿ ಕಪಾಲಿ ಮೋಹನ್ ಅವರನ್ನು ಬಂಧಿಸಲಾಯಿತು. ಇದು ಸಹ ಅವರಿಗೆ ಭಾರಿ ನಷ್ಟವನ್ನೇ ಉಂಟುಮಾಡಿತು, ಜೊತೆಗೆ ಸಾಮಾಜಿಕ ಮುಜುಗರಕ್ಕೂ ಕಾರಣವಾಯಿತು.

ಕುಟುಂಬ ಕಾರ್ಯಕ್ರಮಗಳಲ್ಲಿ ಕಪಾಲಿ ಮೋಹನ್ ಭಾಗಿ
ಕಪಾಲಿ ಮೋಹನ್ ಡಾ.ರಾಜ್ ಅವರ ಕುಟುಂಬಕ್ಕೆ ಬಹುವಾಗಿ ಆಪ್ತರಾಗಿದ್ದರು. ಅವರ ಕುಟುಂಬದ ಕಾರ್ಯಕ್ರಮಗಳಲ್ಲಿಯೂ ಅವರು ಪಾಲ್ಗೊಳ್ಳುತ್ತಿದ್ದರು. ಕೆಲವು ದಿನಗಳ ಹಿಂದಷ್ಟೆ ಶಿವಣ್ಣ ಅವರು ಮಾಲೆ ಹಾಕಿ ಧಾರ್ಮಿಕ ಕಾರ್ಯ ನೆರವೇರಿಸಿದಾಗಲೂ ಸಹ ಕಪಾಲಿ ಮೋಹನ್ ಅಲ್ಲಿ ಹಾಜರಿದ್ದರು.


Click it and Unblock the Notifications











