ಅಯೋಧ್ಯೆಪುರಂ ಶೀರ್ಷಿಕೆಗೆ ಮುಸ್ಲಿಂರ ವಿರೋಧ
ಸಂಪೂರ್ಣ ಹೊಸಬರೇ ತಯಾರಿಸುತ್ತಿರುವ ಚಿತ್ರ 'ಅಯೋಧ್ಯೆಪುರಂ'. ಈಗ ಚಿತ್ರಕ್ಕೆ ಶೀರ್ಷಿಕೆ ವಿವಾದ ಸುತ್ತಿಕೊಂಡಿದೆ. ಚಿತ್ರದ ಶೀರ್ಷೆಕೆಯನ್ನು ಬದಲಿಸುವಂತೆ ಮುಸ್ಲಿಂ ಸಂಘಟನೆಯೊಂದು ಕರ್ನಾಟಕ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ನೀಡಿದೆ.
ಚಿತ್ರದ ಶೀರ್ಷಿಕೆ ಹಿಂದು-ಮುಸ್ಲಿಂರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ. ಕೋಮು ಭಾವನೆಗಳನ್ನು ಕೆರಳಿಸುವಂತಿದೆ. ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಿ ಎಂದು 'ಬಜೀಮ್ ಇ ಕಾಫೀಮ್ ಮುಸ್ಲಿಂ ಯೂತ್ ಫಾರ್ಮ್' ಸಂಘಟನೆ ದೂರು ನೀಡಿತ್ತು.

ವರ್ಷದ ಹಿಂದೆಯೇ ಶೀರ್ಷಿಕೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿಕೊಂಡಿದ್ದೇವೆ. ಈಗ ಬದಲಾಯಿಸಿ ಎಂದರೆ ಹೇಗೆ? ನಮಗೆ ನಷ್ಟ ಉಂಟಾಗುತ್ತದೆ. ನ್ಯಾಯಕ್ಕಾಗಿ ನಾವು ಕೋರ್ಟ್ ಮೆಟ್ಟಿಲೇರುತ್ತೇವೆ ಎಂದಿದ್ದಾರೆ ಚಿತ್ರದ ನಿರ್ದೇಶಕರು.
ನಮ್ಮ ಚಿತ್ರದಲ್ಲಿ ಕೋಮು ಭಾವನೆಗಳನ್ನು ಕೆರಳಿಸುವಂತಹ ಯಾವುದೇ ದೃಶ್ಯ, ಸಂಭಾಷಣೆಗಳಿಲ್ಲ. 'ಅಯೋಧ್ಯೆಪುರಂ' ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆ ಇದು. ಚಿತ್ರಕ್ಕೆ ಸೆನ್ಸಾರ್ ಆದ ಮೇಲೆ ಮುಸ್ಲಿಂ ಸಂಘಟನೆಗೂ ತಮ್ಮ ಚಿತ್ರವನ್ನು ತೋರಿಸುತ್ತೇವೆ ಎಂದಿದ್ದಾರೆ.
ಅಯೋಧ್ಯೆ ಹಾಗೂ ಅಯೋಧ್ಯೆಪುರಂ ಶೀರ್ಷಿಕೆಗೂ ಅವಕಾಶ ಮಾಡಿಕೊಟ್ಟಿರಲಿಲ್ಲ. ಕಡೆಗೆ 'ಕರ್ನಾಟಕ ಅಯೋಧ್ಯೆಪುರಂ' ಎಂದು ಶೀರ್ಷಿಕೆ ಇಟ್ಟುಕೊಂಡೆವು. ಈಗ ಏಕಾಏಕಿ ಶೀರ್ಷಿಕೆ ಬದಲಾಯಿಸಿ ಎಂದರೆ ನಮಗೆ ಭಾರಿ ಹೊಡೆತ ಬೀಳುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು. ರಾಕೇಶ್ ಅಡಿಗ ಮತ್ತು ನಯನಾ ಚಿತ್ರದ ಪ್ರಮುಖ ಪಾತ್ರಧಾರಿಗಳು. (ಏಜೆನ್ಸೀಸ್)


Click it and Unblock the Notifications