ಸುದೀಪ್ ಪಡೆಗೆ 40 ರನ್ ಗಳ ಸೂಪರ್ ಜಯ
ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಬಲಿಷ್ಠ ತೆಲುಗು ವಾರಿಯರ್ಸ್ ತಂಡದ ವಿರುದ್ಧ ಕಿಚ್ಚ ಸುದೀಪ್ ಪಡೆ ಉತ್ತಮ ಜಯ ದಾಖಲಿಸಿದೆ. ಅತ್ತ ಚೆನ್ನೈನಲ್ಲಿ ರಾಂಚಿ rambo ಧೋನಿ ದ್ವಿಶತಕ ಬಾರಿಸುತ್ತಿದ್ದರೆ ಇತ್ತ ಕರ್ನಾಟಕದ ಕಲಿಗಳು ಭರ್ಜರಿ ಆಟ ಪ್ರದರ್ಶಿಸಿದರು.
ಕರ್ನಾಟಕ ಬುಲ್ಡೋಜರ್ಸ್ ತಂದ ಒಡ್ಡಿದ್ದ 172 ರನ್ ಗಳ ಸವಾಲು ಸ್ವೀಕರಿಸಿದ ತೆಲುಗು ವಾರಿಯರ್ಸ್ ತಂಡ ಆರಂಭ ಆಘಾತ ನಂತರ ಚೇತರಿಸಿಕೊಂಡರೂ 131/8 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿತು.
ಕರ್ನಾಟಕ ಪರ ಕಾರ್ತಿಕ್ 4 ಓವರ್ ಗಳಲ್ಲಿ 16 ರನ್ನಿತ್ತು 4 ವಿಕೆಟ್ ಕಿತ್ತು ಭಾರಿ ಹೊಡೆತ ಕೊಟ್ಟರು. ಕಾರ್ತಿಕ್ ಬೌಲಿಂಗ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ದೊರಕುವಂತೆ ಮಾಡಿತು. ಉಳಿದಂತೆ ಸ್ಪಿನ್ನರ್ ಹಿಮ್ಮತ್ 2, ಪ್ರದೀಪ್ 1 ವಿಕೆಟ್ ಕಿತ್ತರು. ದಿಗಂತ್ 2 ಓವರ್ ನಲ್ಲಿ 30 ರನ್ ಕೊಟ್ಟು ಕಳಪೆ ಬೌಲಿಂಗ್ ಮಾಡಿದರು.

ತೆಲುಗು ತಂಡದ ಮೊದಲ ಮೂವರು ಆಟಗಾರರು ಶೂನ್ಯಕ್ಕೆ ಔಟಾದರೆ ಉಳಿದವರಲ್ಲಿ ಇಬ್ಬರು ಮಾತ್ರ ಎರಡಂಕಿ ದಾಟಿದರು. ಗಿರಿ 12 ರನ್ ಹೊಡೆದರೆ, ಚರಣ್ ತೇಜ 145.65 ಸ್ಟ್ರೈಕ್ ರೇಟ್ ನಂತೆ 46 ಎಸೆತದಲ್ಲಿ 67 ರನ್ (3 ಬೌಂಡರಿ, 8 ಸಿಕ್ಸರ್) ಹೊಡೆದು ತೆಲುಗು ತಂಡಕ್ಕೆ ಜಯದ ಆಸೆ ಹುಟ್ಟಿಸಿದರು. ಆದರೆ, ಕೊನೆಗೆ ಪ್ರದೀಪ್ ಗೆ ಬೋಲ್ಡ್ ಆದರು. ಅಲ್ಲಿಗೆ ತೆಲುಗು ತಂಡದ ಕತೆ ಮುಗಿಯಿತು.
ಕರ್ನಾಟಕ ಇನ್ನಿಂಗ್ಸ್ : ಕಾಲು ನೋವಿನಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ಬದಲಿಗೆ ಮಂಜುನಾಥ್ ಅವರು ರಾಜೀವ್ ಜೊತೆ ಇನ್ನಿಂಗ್ಸ್ ಆರಂಭಿಸಿದರು. ಆರಂಭದಲ್ಲೇ 4 ರನ್ ಗಳಿಸಿದ್ದ ರಾಜೀವ್ ವಿಕೆಟ್ ಕಳೆದು ಕೊಂಡು ದುಃಸ್ಥಿತಿಯಲ್ಲಿದ್ದ ಕರ್ನಾಟಕ ತಂಡಕ್ಕೆ ಧ್ರುವ ಶರ್ಮ ಆಸರೆಯಾದರು.
ಮಂಜುನಾಥ್ 38 ಎಸೆತದಲ್ಲಿ 48 ರನ್ (4 ಬೌಂಡರಿ, 3 ಸಿಕ್ಸರ್) ಹಾಗೂ ಧ್ರುವ 50 ಎಸೆತದಲ್ಲಿ 64 ರನ್ (4 ಬೌಂಡರಿ, 3 ಸಿಕ್ಸರ್) ಬಾರಿಸಿ ತಂಡದ ಮೊತ್ತ ಹೆಚ್ಚಿಸಿದರು. ಆದರೆ, ಮಧ್ಯಮ ಕ್ರಮಾಂಕ ಹೆಚ್ಚಿನ ಬಲ ಸಿಕ್ಕಲಿಲ್ಲ. ಸುದೀಪ್ ಕಾಲಿಗೆ ಮತ್ತೊಮ್ಮೆ ಚೆಂಡು ತಗುಲಿ ನೋವು ಉಲ್ಬಣವಾಯಿತು.
ಹಿಮ್ಮತ್ 10, ಪ್ರದೀಪ್ 13, ಕಾರ್ತಿಕ್ 9 ರನ್ ಗಳಿಸಿ ತಂಡದ ಮೊತ್ತವನ್ನು 20 ಓವರ್ ಗಳಲ್ಲಿ 171/7ಕ್ಕೇರಿಸಿದರು. ತೆಲುಗು ತಂಡದ ಪರ ಆದಿತ್ಯ 21 ರನ್ನಿತ್ತು 2 ವಿಕೆಟ್ ಪಡೆದರೆ, ಚರಣ್ ತೇಜ, ಗಿರಿ, ನಂದ ಕಿಶೋರ್, ಅದರ್ಶ್ ತಲಾ 1 ವಿಕೆಟ್ ಪಡೆದರು.


Click it and Unblock the Notifications











