ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ ನೀಡಿ: ಸಿಎಂಗೆ ಮನವಿ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ಜೈರಾಜ್ ಹಾಗೂ ನಿಯೋಗವು ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ.
ರಾಜ್ಯದಾದ್ಯಂತ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿದೆಯಾದರೂ ಶೇ 50% ಸೀಟು ಸಾಮರ್ಥ್ಯವನ್ನು ಮಾತ್ರವೇ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಹೀಗಾಗಿ ಯಾವುದೇ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ.
ಸಿಎಂ ಅವರಿಗೆ ಮನವಿ ಪತ್ರ ನೀಡಿರುವ ನಿಯೋಗ, 'ಕೊರೊನಾ ಕಾರಣಕ್ಕೆ ಈಗಾಗಲೇ ಚಿತ್ರರಂಗ ಸಂಕಷ್ಟದಲ್ಲಿದೆ. ಚಿತ್ರಮಂದಿರಗಳು ಸಹ ಸಾಕಷ್ಟು ತೊಂದರೆಯಲ್ಲಿವೆ. ಶೇ 50 ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದೆಯಾದರೂ, ದೊಡ್ಡ ಬಜೆಟ್ನ ಸಿನಿಮಾ ನಿರ್ಮಾಪಕರುಗಳು ಸಿನಿಮಾ ಬಿಡುಗಡೆ ಮಾಡಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ಶೇ 100 ರಷ್ಟು ಆಸನ ಭರ್ತಿ ಮಾಡಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.
'ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ 100% ಆಸನ ಭರ್ತಿಗೆ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ. ನಮ್ಮ ರಾಜ್ಯದಲ್ಲಿ ನಿರ್ಮಾಪಕರು, ಚಿತ್ರಮಂದಿರ ಮಾಲೀಕರು, ಸಿಬ್ಬಂದಿಗಳು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಸಂಕಷ್ಟವನ್ನು ಗಮನಿಸಿ ಸರ್ಕಾರವು ಚಿತ್ರಮಂದಿರಗಳು ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಕೆಲಸ ಮಾಡುವಂತೆ ಶೀಘ್ರವಾಗಿ ಆದೇಶ ಮಾಡಬೇಕು' ಎಂದು ಕೋರಲಾಗಿದೆ.
ಕಳೆದ ವರ್ಷದ ಮೊದಲ ಲಾಕ್ಡೌನ್ ಅವಧಿಯಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ನಂತರ ಈ ವರ್ಷಾರಂಭದಲ್ಲಿ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವಂತೆ ಆದೇಶ ಹೊರಡಿಸಲಾಯಿತಾದರೂ. ಕೇವಲ ಮೂರೇ ತಿಂಗಳಲ್ಲಿ ಚಿತ್ರಮಂದಿರವನ್ನು ಮತ್ತೆ ಬಂದ್ ಮಾಡಲಾಯ್ತು.

ಕೊರೊನಾ ಎರಡನೇ ಅಲೆ ಹೆಚ್ಚಾದ ಕಾರಣ ಏಪ್ರಿಲ್ 20 ರಂದು ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಂತರ ಜುಲೈ 19 ರಂದು ಹೊಸ ಆದೇಶ ಹೊರಡಿಸಿ ಜುಲೈ 20 ರಿಂದ ರಾಜ್ಯದ ಎಲ್ಲ ಚಿತ್ರಮಂದಿರಗಳು ಶೇ 50 ಸೀಟು ಸಾಮರ್ಥ್ಯದೊಂದಿಗೆ ಕೆಲಸ ಮಾಡಬಹುದು ಎಂದು ಆದೇಶ ಹೊರಡಿಸಿತು.
ಶೇ 50 ಆಸನ ಭರ್ತಿ ಮಾಡಬಹುದಾದರೂ ಯಾವ ನಿರ್ಮಾಪಕರು ಸಹ ತಮ್ಮ ಹೊಸ ಸಿನಿಮಾಗಳ ಬಿಡುಗಡೆ ಮಾಡಲು ಧೈರ್ಯ ತೋರುತ್ತಿಲ್ಲ. ಹಾಗಾಗಿ ಚಿತ್ರಮಂದಿರ ತೆರೆದರೂ ಪ್ರಯೋಜನವಿಲ್ಲದಂತಾಗಿದೆ.
Recommended Video
ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಸಲಗ', ಸುದೀಪ್ ನಟನೆಯ 'ಕೋಟಿಗೊಬ್ಬ 3', ಕೆಜಿಎಫ್ 2, ಭಜರಂಗಿ 3, ಉಪೇಂದ್ರ ನಟನೆಯ 'ಕಬ್ಜ', ಧನಂಜಯ್ ನಟನೆಯ 'ರತ್ನನ್ ಪರ್ಪಂಚ', ಜಗ್ಗೇಶ್ ನಟನೆಯ 'ತೋತಾಪುರಿ' ಇನ್ನೂ ಹಲವಾರು ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.


Click it and Unblock the Notifications











