ಕಲಾವಿದರಿಗೆ ಡ್ರಗ್ ನಂಟು ಸಾಬೀತಾದರೆ ಕಠಿಣ ಕ್ರಮ: ಸಾ.ರಾ.ಗೋವಿಂದು
ಚಿತ್ರೋದ್ಯಮದ ಕೆಲವರಿಗೆ ಮಾದಕ ವಸ್ತು ವ್ಯಸನವಿದೆ ಮಾದಕ ಮಾಫಿಯಾದ ಜೊತೆಗೆ ನಂಟಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಪತ್ರಿಕಾಗೋಷ್ಠಿ ಏರ್ಪಡಿಸಿತ್ತು.
Recommended Video
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ಪ್ರಕರಣ ಇದಾಗಲೇ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಹಾಗಾಗಿ ಪ್ರಕರಣ ತನಿಖೆ ನಡೆಯಲಿ ಸಾಬೀತಾದರೆ ನ್ಯಾಯವ್ಯವಸ್ಥೆಯಲ್ಲಿ ಶಿಕ್ಷೆಯಾಗುತ್ತದೆ. ವಾಣಿಜ್ಯ ಮಂಡಳಿಯೂ ಸಹ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಿದೆ' ಎಂದರು.
ವಾಣಿಜ್ಯ ಮಂಡಳಿಗೆ 75 ವರ್ಷದ ಸುದೀರ್ಘ ಇತಿಹಾಸವಿದೆ. ಈವರೆಗೆ ಇಂಥಹಾ ಪ್ರಕರಣಗಳನ್ನು ನಾವು ಎದುರಿಸಿಲ್ಲ. ಹಿರಿಯರು ಶ್ರಮವಹಿಸಿ ಕಟ್ಟಿದ ಉದ್ಯಮವಿದು. ಸದಾ ಜನಪರವಾಗಿಯೇ ಇದೆ. ಈ ಆರೋಪ ನಮಗೆ ಅತೀವ ಬೇಸರ ತರಿಸಿದೆ ಎಂದರು ಸಾ.ರಾ.ಗೋವಿಂದು.

ಪೊಲೀಸ್ ತನಿಖೆ ಮುಗಿಯಲು ಕಾಯುತ್ತಿದ್ದೇವೆ: ಸಾ.ರಾ.ಗೋವಿಂದು
ಸಿಸಿಬಿ ಜಂಟಿ ಆಯುಕ್ತರು ನಿನ್ನೆ ನೀಡಿರುವ ಹೇಳಿಕೆಯಂತೆ, 'ಕಲಾವಿದರಿಗೆ ಡ್ರಗ್ಸ್ ಮಾಫಿಯಾ ನಂಟು ಇದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ' ಎಂದಿದ್ದಾರೆ. ಆದರೆ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ತನಿಖೆ ಮುಗಿಯಲೆಂದೇ ನಾವೂ ಸಹ ಆಶಿಸುತ್ತಿದ್ದೇವೆ ಎಂದರು ಸಾ.ರಾ.ಗೋವಿಂದು.

'ಯಾರೋ ಕೆಲವರು ಮಾಡಿದ್ದರೆ ಅವರನ್ನು ಚಿತ್ರರಂಗದವರು ಎನ್ನಲಾಗದು'
ಯಾರೋ ಕೆಲವರು ಮಾಡಿರಬಹುದಾದ ತಪ್ಪಿಗೆ ಇಡೀಯ ಚಿತ್ರರಂಗವನ್ನೇ ದೂರುವುದು ಅಕ್ಷಮ್ಯ. 'ತೆವಲಿಗಾಗಿ ಒಂದೆರಡು ಸಿನಿಮಾ ಮಾಡಿದವರನ್ನು, ಸಿನಿಮಾಉದ್ಯಮದವರು ಎಂದು ಒಪ್ಪಿಕೊಳ್ಳಲಾಗದು. ಒಂದಿಬ್ಬರ ತಪ್ಪನ್ನು ಇಡೀಯ ಚಿತ್ರರಂಗದ ತಪ್ಪು ಎಂದು ಹೇಳಲೂ ಆಗದು' ಎಂದು ಆಕ್ರೋಶ ವ್ಯಕ್ತಪಡಿಸಿದರು ಸಾ.ರಾ.ಗೋವಿಂದು.

ಸುಳ್ಳು ಆರೋಪ ಮಾಡಿದವರ ಮೇಲೂ ಕ್ರಮ: ಸಾ.ರಾ.ಗೋವಿಂದು
ಒಂದು ವೇಳೆ ಸಿಸಿಬಿ ತನಿಖೆಯಲ್ಲಿ ಆರೋಪ ಸಾಬೀತಾಗದೇ ಇದ್ದಲ್ಲಿ, ಚಿತ್ರರಂಗದವರ ಮೇಲೆ ಸುಳ್ಳು ಆರೋಪ ಮಾಡಿದವರ ಮೇಲೂ ಸಹ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು ಸಾ.ರಾ.ಗೋವಿಂದು. ಈಗಾಗಲೇ ಅವರು (ಇಂದ್ರಜಿತ್ ಲಂಕೇಶ್) ಪೊಲೀಸ್ ಠಾಣೆ ಮೆಟ್ಟಿಲೇರಿಯಾಗಿದೆ ಹಾಗಾಗಿ ನಾವು ಈ ಸಂದರ್ಭದಲ್ಲಿ ಅವರಿಂದ ಸ್ಪಷ್ಟನೆ ಕೇಳುವುದಿಲ್ಲ ಎಂದೂ ಸಹ ಸಾ.ರಾ.ಗೋವಿಂದು ಹೇಳಿದರು.

ಯಾರಾದರೂ ದೂರು ಕೊಟ್ಟರೆ ಕ್ರಮ: ಸಾ.ರಾ.ಗೋವಿಂದು
ಡ್ರಗ್ಸ್ ಪ್ರಕರಣದಲ್ಲಿ ಅನವಶ್ಯಕವಾಗಿ ಅಥವಾ ಉದ್ದೇಶಪೂರ್ವಕವಾಗಿ ನಮ್ಮ ಹೆಸರು ಹೇಳಿ ಮಾನಸಿಕ ಕಿರುಕುಳ ನೀಡಿದ್ದಾರೆಂದು ಯಾರಾದರೂ ದೂರು ನೀಡಿದರೆ ಅದರ ಬಗ್ಗೆಯೂ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದರು ಸಾ.ರಾ.ಗೋವಿಂದು. ಪತ್ರಿಕಾಗೋಷ್ಠಿಯಲ್ಲಿ ವಾಣಿಜ್ಯ ಮಂಡಳಿ ಅಧ್ಯಕ್ಷ, ಹಿರಿಯ ನಟ ದೊಡ್ಡಣ್ಣ, ಇತರೆ ಕೆಲವು ಸದಸ್ಯರು ಹಾಜರಿದ್ದರು.


Click it and Unblock the Notifications











