ಆನ್ಲೈನ್ ಸಿನಿಮಾ ಟಿಕೆಟ್ ಮಾರಾಟ: ಕಡಿವಾಣಕ್ಕೆ ಸರ್ಕಾರ ಚಿಂತನೆ
ಸಿನಿಮಾಗಳಿಗೆ ಆನ್ಲೈನ್ನಲ್ಲಿ ಟಿಕೆಟ್ ಮಾಡುವ ಪರಿಪಾಟ ಕಳೆದೊಂದು ದಶಕದಿಂದ ಬಹಳ ಹೆಚ್ಚಾಗಿದೆ. ಇತ್ತೀಚೆಗಂತೂ ಸಿನಿಮಾದ ಟಿಕೆಟ್ಗಳನ್ನು ಟಿಕೆಟ್ ಕೌಂಟರ್ನಲ್ಲಿ ಖರೀದಿಸುವವರ ಸಂಖ್ಯೆ ಧಾರುಣವಾಗಿ ಕುಸಿದಿದೆ.
ಇದೇ ಕಾರಣಕ್ಕೆ ಬುಕ್ಮೈ ಶೋ, ಪೇಟಿಎಂ, ಟಿಕೆಟ್ ನೌ, ಮೂವಿಇಕಾರ್ಡ್ ಸೇರಿದಂತೆ, ಪಿವಿಆರ್, ಐನಾಕ್ಸ್, ಸಿನೆಪೊಲೀಸ್ ಮಲ್ಟಿಫ್ಲೆಕ್ಸ್ಗಳು ತಮ್ಮದೇ ಅಪ್ಲಿಕೇಶನ್ ಹೊರತಂದು ಅದರ ಮೂಲಕ ಆನ್ಲೈನ್ ಟಿಕೆಟ್ ಬುಕಿಂಗ್ ಮಾಡುತ್ತಿವೆ.
ಆದರೆ ಈ ಆನ್ಲೈನ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ಗಳಿಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ನಿನ್ನೆ (ಅಕ್ಟೋಬರ್ 12) ಚಿತ್ರರಂಗದ ಕೆಲವು ಪ್ರಮುಖರು ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ಆಡಿದ್ದು, ಗೃಹ ಮಂತ್ರಿಗಳು ಸಹ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಟಿಕೆಟ್ ಬುಕಿಂಗ್ ಅಪ್ಲಿಕೇಶನ್ಗಳಿಗೆ ಕಡಿವಾಣದ ಅಗತ್ಯವಿದೆ ಎಂದಿದ್ದಾರೆ.

ಬುಕಿಂಗ್ ಅಪ್ಲಿಕೇಶನ್ಗಳಿಗೆ ಕಡಿವಾಣದ ಅಗತ್ಯವಿದೆ: ಜ್ಞಾನೇಂದ್ರ
''ಚಿತ್ರಮಂದಿರ ಟಿಕೆಟ್ ಅನ್ನು ಆನ್ಲೈನ್ ಮೂಲಕ ಬುಕಿಂಗ್ ಮಾಡುವ ಅಪ್ಲಿಕೇಶನ್ಗಳು ಹೇಗೆ ಚಿತ್ರಮಂದಿರಗಳು ಅದರಲ್ಲಿಯೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಬರಬೇಕಾದ ಆದಾಯವನ್ನು ದೋಚುತ್ತಿವೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಈ ಆನ್ಲೈನ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ಗಳ ಮೇಲೆ ಕಡಿವಾಣ ಇಲ್ಲ, ಹಾಗೂ ಅಸ್ಪರ್ಧಾತ್ಮಕ ಮಾದರಿಯಲ್ಲಿ ಈ ಅಪ್ಲಿಕೇಶನ್ಗಳು ಹಣ ಗಳಿಸುತ್ತಿವೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ'' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಹೇಳಿದ್ದಾರೆ.

ಅವರದ್ದೇ ಆದ ಅಪ್ಲಿಕೇಶನ್ ನಿರ್ಮಾಣ!
''ಚಿತ್ರಮಂದಿರಗಳು ಸಿನಿಮಾ ಟಿಕೆಟ್ ಆನ್ಲೈನ್ ಬುಕಿಂಗ್ಗೆ ಅವರದ್ದೇ ಆದ ಅಪ್ಲಿಕೇಶನ್ ಅನ್ನು ಬಳಸಲು ಅವಕಾಶವನ್ನು ಚಿತ್ರರಂಗದ ಕೆಲವರು ಕೋರಿದ್ದಾರೆ. ಆ ಮೂಲಕ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಉದ್ದೇಶ ಅರಿಗಿದೆ. ನಾವು ಈ ಬಗ್ಗೆ ಇನ್ನಷ್ಟು ಸಭೆಗಳನ್ನು ಮಾಡಿ ವಿವರವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ'' ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

''ಚಿತ್ರೋದ್ಯಮವನ್ನು ಹಾಳು ಮಾಡುತ್ತಿರುವ ಅಪ್ಲಿಕೇಶನ್ಗಳು''
ಈ ವಿಷಯವಾಗಿ ಮಾತನಾಡಿದ ಹಿರಿಯ ನಿರ್ದೇಶಕ ಎಸ್ವಿ ರಾಜೇಂದ್ರ ಸಿಂಗ್ ಬಾಬು, ''ಸಿನಿಮಾ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ಗಳು ಚಿತ್ರೋದ್ಯಮವನ್ನು ಹಾಳು ಮಾಡುವ ಹಾದಿಯಲ್ಲಿವೆ. ಈ ಅಪ್ಲಿಕೇಶನ್ಗಳು, ಚಿತ್ರಮಂದಿರಕ್ಕೆ ಅಥವಾ ಚಿತ್ರೋದ್ಯಮಕ್ಕೆ ಏನನ್ನೂ ನೀಡುತ್ತಿಲ್ಲ ಆದರೆ ಟಿಕೆಟ್ ಮಾರಾಟದಿಂದ ಬರುವ ಮುಕ್ಕಾಲು ಪಾಲು ಲಾಭವನ್ನು ತೆಗೆದುಕೊಂಡು ಹೋಗುತ್ತಿವೆ'' ಎಂದಿದ್ದಾರೆ.

ಜನತಾ ಚಿತ್ರಮಂದಿರಗಳ ನಿರ್ಮಾಣ!
ಎಸ್ವಿ ರಾಜೇಂದ್ರ ಸಿಂಗ್ ಬಾಬು ಜೊತೆಗೆ ನಾಗತಿಹಳ್ಳಿ ಚಂದ್ರಶೇಖರ್, ಟಿಎಸ್ ನಾಗಾಭರಣ ಇನ್ನೂ ಕೆಲವು ಪ್ರಮುಖರು ಇದ್ದ ಈ ಸಭೆಯಲ್ಲಿ ಜನತಾ ಸಿನಿಮಾ ಮಂದಿರಗಳ ನಿರ್ಮಾಣದ ಬಗ್ಗೆಯೂ ಮಾತುಕತೆ ನಡೆಯಿತು. 200 ರಿಂದ 400 ಜನರು ಕೂರಬಲ್ಲ ಜನತಾ ಸಿನಿಮಾ ಮಂದಿರಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರವೇ ನಿರ್ಮಿಸುವ ಬಗ್ಗೆ ಸಲಹೆ ನೀಡಲಾಗಿದೆ. ಜೊತೆಗೆ ಕನ್ನಡ ಸಿನಿಮಾಗಳ ಬಿಡುಗಡೆ ಇರುವ ನಿಯಮಗಳನ್ನು ಇನ್ನಷ್ಟು ಸರಳೀಕರಿಸುವ ಬಗ್ಗೆಯೂ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.


Click it and Unblock the Notifications











