ಕಲಾವಿದರಿಗೆ ಸರ್ಕಾರದ ಆರ್ಥಿಕ ನೆರವು: ಪಡೆದುಕೊಳ್ಳುವುದು ಹೇಗೆ?
ಕೊರೊನಾ ಲಾಕ್ಡೌನ್ನಿಂದಾಗಿ ಸಿನಿಮಾ ಚಿತ್ರೀಕರಣ, ಪ್ರದರ್ಶನ, ರಂಗಭೂಮಿ ಹಾಗೂ ಇತರೆ ಚಟುವಟಿಕೆಗಳು ಬಂದ್ ಆಗಿದ್ದು ಇವುಗಳನ್ನೇ ನಂಬಿಕೊಂಡಿದ್ದ ಕಲಾವಿದರಿಗೆ, ತಂತ್ರಜ್ಞರಿಗೆ ಜೀವನ ನಿರ್ವಣೆ ಕಷ್ಟವಾಗಿದೆ.
ಕಲಾವಿದರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಕಲಾವಿದರಿಗೆ ಆರ್ಥಿಕ ನೆರವು ಘೋಷಿಸಿದ್ದು 4.82 ಕೋಟಿ ರುಪಾಯಿಗಳನ್ನು ಕಲಾವಿದರಿಗೆಂದು ಬಿಡುಗಡೆ ಮಾಡಿದೆ. ಕಲಾವಿದರಿಗೆ 3000 ರು ನೆರವನ್ನು ಸರ್ಕಾರ ನೀಡುತ್ತಿದೆ.
ಕಲಾವಿದರು ಈ ಮೂರು ಸಾವಿರ ಆರ್ಥಿಕ ನೆರವು ಪಡೆದುಕೊಳ್ಳಲು ಕೆಲವು ನಿಯಮಗಳು ಇದ್ದು ಅವುಗಳು ಈ ಕೆಳಕಂಡಂತಿವೆ.

ಕಲಾವಿದರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸುವಲ್ಲಿ ಯಾವುದೇ ತೊಡಕು ಉಂಟಾದರೆ ಕೂಡಲೇ ಇದಕ್ಕಾಗಿಯೇ ಇರುವ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ. ಜಿಲ್ಲಾವಾರು ಸಹಾಯವಾಣಿಯನ್ನು ಸರ್ಕಾರ ಪ್ರಕಟಿಸಿದೆ.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಎಲ್ಲಾ ಪ್ರಕಾರದ ಕಲಾವಿದರು ಅರ್ಜಿ ಸಲ್ಲಿಸಬಹುದು. ಜೂನ್ 5ರ ಒಳಗಾಗಿಯೇ ಅರ್ಜಿ ಸಲ್ಲಿಸಬೇಕು. ಅದರ ನಂತರ ಅರ್ಜಿ ಸಲ್ಲಿಸಲಾಗದು.
ಅರ್ಜಿ ಸಲ್ಲಿಸುವ ಕಲಾವಿದರು ವೃತ್ತಿ ನಿರತರಾಗಿರಬೇಕು. 35 ವರ್ಷಕ್ಕೂ ಹೆಚ್ಚಿನ ವಯಸ್ಸಿನವರಾಗಿರಬೇಕು. ಕಲಾಸೇವೆ ಮಾಡಿರುವ ಕನಿಷ್ಟ ಒಂದು ಫೊಟೊ ಆದರೂ ಲಗತ್ತಿಸಬೇಕು.
ಅರ್ಜಿ ಸಲ್ಲಿಸುವ ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು ಹಾಗೂ ಯಾವುದೇ ಸರ್ಕಾರಿ ನೌಕರರಾಗಿರಬಾರದು.
2021/22 ನೇ ಸಾಲಿನ ಸಾಮಾನ್ಯ, ವಿಶೇಷ, ಗಿರಿಜನ ಉಪಯೋಜನೆಗಳಡಿ ಸಾಂಸ್ಕೃತಿಕ ಸಂಘ ಸಂಸ್ಥೆಗಳ ಚಟುವಟಿಕೆಗೆಂದು ಧನಸಾಹಯ ಪಡೆದವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಅರ್ಜಿ ಸಲ್ಲಿಸುವ ಕಲಾವಿದರು ತಮ್ಮ ಹೆಸರು, ವಿಳಾಸ, ಕಲಾ ಪ್ರಕಾರ, ಆಧಾರ್ ಸಂಖ್ಯೆ, ದೂರವಾಣಿ ಸಂಖ್ಯೆ, ಬ್ಯಾಂಕ್ ಸಂಖ್ಯೆ, ಆಧಾರ್ನ ಫೋಟೊ, ಬ್ಯಾಂಕ್ ಪಾಸ್ ಬುಕ್ನ ಫೋಟೊವನ್ನು ಲಗತ್ತಿಸಬೇಕು. ಕಲಾವಿದರು ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಸಲ್ಲಿಸಬಹುದು ಅಥವಾ ಜಿಲ್ಲೆಯ ಯಾವುದೇ ನಾಗರೀಕ ಸೇವಾ ಕೇಂದ್ರದ ಮೂಲಕ ಭರ್ತಿ ಮಾಡಬಹುದು.
Recommended Video
ಅರ್ಜಿಯನ್ನು 28/05/2021 ರಿಂದ 05/06/2021 ರ ಒಳಗಾಗಿ ಸಲ್ಲಿಸಬೇಕು. ಸಲ್ಲಿಕೆಯಾದ ಅರ್ಜಿಗಳನ್ನು ಪ್ರತಿ ಜಿಲ್ಲೆಯಲ್ಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಒಳಗೊಂಡ ಐದು ಜನರ ಸಮಿತಿಯು ಅರ್ಹ ಕಲಾವಿದರನ್ನು ಆಯ್ಕೆ ಮಾಡಿ ಕೇಂದ್ರ ಕಚೇರಿಗೆ ಕಳುಹಿಸುತ್ತದೆ. ನಂತರ ಕೇಂದ್ರ ಕಚೇರಿಯಿಂದ ಕಲಾವಿದರ ಖಾತೆಗೆ ನೇರವಾಗಿ ಆರ್ ಟಿ ಜಿ ಎಸ್ ಮೂಲಕ ಪರಿಹಾರದ ಮೊತ್ತ ಜಮಾ ಆಗತ್ತದೆ.


Click it and Unblock the Notifications











