ಗುರುವಿನ ಆಸೆಯನ್ನು ಶಿಷ್ಯ ಉಪೇಂದ್ರ ಈಡೇರಿಸಲೇ ಇಲ್ಲ.!
ಮೈಸೂರು, ಜನವರಿ 18 : 'ಅನುಭವ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ನಟ, ನಿರ್ದೇಶಕ ಕಾಶಿನಾಥ್. ಇವರ ಬಹುತೇಕ ಸಿನಿಮಾಗಳ ಟೈಟಲ್ ಕನ್ನಡ ವರ್ಣಮಾಲೆಯ ಮೊದಲ ಅಕ್ಷರ 'ಅ' ದಿಂದಲೇ ಪ್ರಾರಂಭವಾಗುತ್ತಿದ್ದದ್ದು ವಿಶೇಷ.
'ಅನಾಮಿಕ', 'ಅನುಭವ', 'ಅನಂತನ ಅವಾಂತರ', 'ಅಜಗಜಾಂತರ'... ಹೀಗೆ ಬಹುತೇಕ ಸಿನಿಮಾಗಳ ಶೀರ್ಷಿಕೆ 'ಅ' ಅಕ್ಷರದಿಂದಲೇ ಆರಂಭವಾಗುತ್ತಿತ್ತು. ಈ ಬಗ್ಗೆ ಏನಾದರು ವಿಶೇಷತೆ ಇದೆಯೇ ಎಂದು ಪ್ರಶ್ನಿಸಿದರೆ, ''ಅಂಥದ್ದೇನೂ ಇಲ್ಲ. ಕಥೆ ಏನನ್ನು ಬಯಸುತ್ತದೆಯೋ ಆ ಟೈಟಲ್ ಅನ್ನು ಇಡುತ್ತೇನೆ. ಬಹುಶಃ 'ಅ' ಅಕ್ಷರದಿಂದಲೇ ಪ್ರಾರಂಭವಾಗುತ್ತಿರುವುದು ಕಾಕತಾಳೀಯ ಇರಬಹುದು'' ಎಂದಿದ್ದರು.
ಕಣ್ಮರೆಯಾದ ಕಾಶಿನಾಥ್ ಅವರ ಅಪರೂಪದ ಫೋಟೋ ಆಲ್ಬಂ
ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದ್ದವರು ಕಾಶಿನಾಥ್. ಉಪೇಂದ್ರ, ವಿ.ಮನೋಹರ್, ಸುನೀಲ್ ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದವರು ಕಾಶೀನಾಥ್.

ಗುರು-ಶಿಷ್ಯರು ಒಂದಾಗಲೇ ಇಲ್ಲ:
ಕಾಶಿನಾಥ್ ಎಂದಾಕ್ಷಣ ಎಲ್ಲರೂ ಉಪೇಂದ್ರರನ್ನ ನೆನಪಿಸಿಕೊಳ್ಳುತ್ತಾರೆ. ಕಾರಣ, ಕಾಶಿನಾಥ್ ಗರಡಿಯಲ್ಲಿ ಪಳಗಿದ ಉಪೇಂದ್ರ, ಆನಂತರ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಆದರು. ಈ ಗುರು-ಶಿಷ್ಯರು ಒಟ್ಟಾಗಿ ಸೇರಿ ಸಿನಿಮಾ ಮಾಡುತ್ತಾರೆ ಎಂಬ ಮಾತು ಗಾಂಧಿನಗರದಲ್ಲಿ ಹಬ್ಬಿತ್ತು.
ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್
ಈ ಬಗ್ಗೆ ಸ್ವತಃ ಕಾಶಿನಾಥ್ ಅವರೇ ಮಾತನಾಡಿ, ''ಭವಿಷ್ಯದಲ್ಲಿ ನಾನು- ಉಪೇಂದ್ರ ಸೇರಿ ಮತ್ತೆ ಸಿನಿಮಾ ಮಾಡುವ ಬಗ್ಗೆ ಸದ್ಯಕ್ಕೆ ಏನೂ ಹೇಳಲಾರೆ. ಇಬ್ಬರಿಗೂ ಇಷ್ಟವಾದ ಕಥೆ ಸಿಗಬೇಕು. ನಾವು ಒಟ್ಟಿಗೆ ಕುಳಿತು ಚರ್ಚಿಸಬೇಕು. ಅನಂತರವಷ್ಟೆ ಸಿನಿಮಾ ಮಾಡುವ ಸಾಹಸ. ಆದರೆ ಈ ತನಕ ಈ ಬಗ್ಗೆ ಯಾವುದೇ ಅಪ್ರೋಚ್ ಬಂದಿಲ್ಲ. ಹೀಗಾಗಿ ಸದ್ಯದಲ್ಲಿ ನಮ್ಮಿಬ್ಬರ ಸಿನಿಮಾ ಯಾವುದೂ ಇಲ್ಲ, ಅವರೂ ಸಾಕಷ್ಟು ಬಿಜಿ ಇದ್ದಾರೆ. ಆದರೆ ಭವಿಷ್ಯದಲ್ಲಿ ಯಾಕಾಗಬಾರದು? ನಮ್ಮಿಬ್ಬರಿಗೂ ಒಪ್ಪಿಗೆಯಾದ ಕಥೆ ಸಿಕ್ಕರೆ ಮತ್ತೆ ನಾವಿಬ್ಬರೂ ಒಂದಾಗಿ ಸಿನಿಮಾ ಮಾಡುವುದು ತುಂಬಾ ಖುಷಿಯ ಸಂಗತಿ'' ಎಂದಿದ್ದರು. ಆದರೆ ಕಾಶಿನಾಥ್ ಅವರ ಈ ಆಸೆ ಈಡೇರಲಿಲ್ಲ. ಕಾರಣ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಈ ನಟ ಇಂದು ಇಹಲೋಕ ತ್ಯಜಿಸಿದರು.


Click it and Unblock the Notifications











