'ಕೆಜಿಎಫ್-2' ಸಿನಿಮಾದ ಬಗ್ಗೆ ಅಪ್ ಡೇಟ್ ನೀಡಿದ ಪ್ರಶಾಂತ್ ನೀಲ್: ಉಡುಪಿ ಬಳಿಕ ಎಲ್ಲಿ ನಡೆಯಲಿದೆ ಚಿತ್ರೀಕರಣ?
ಕೆಜಿಎಪ್-2 ಚಿತ್ರದ ಚಿತ್ರೀಕರಣ ಸದ್ಯ ಉಡುಪಿಯ ಕಡಲ ತೀರದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಕೊನೆಯ ಹಂತದ ಚಿತ್ರೀಕರಣ ಮಾಡಲಾಗುತ್ತಿದೆ. ಕಡಲ ತೀರದಲ್ಲಿ ಎರಡು ಅಥವಾ ಮೂರು ದಿನಗಳ ಚಿತ್ರೀಕರಣ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಈಗಾಗಲೇ ಉಡುಪಿ ಚಿತ್ರೀಕರಣ ಎರಡನೆ ದಿನಕ್ಕೆ ಕಾಲಿಟ್ಟಿದೆ. ಬಳಿಕ ಚಿತ್ರತಂಡ ಯಾವ ಕಡೆ ಯಾವ ಕಡೆ ಪಯಣ ಬೆಳೆಸಲಿದೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ.
ಹೌದು, ಉಡುಪಿ ಚಿತ್ರೀಕರಣ ಬಳಿಕ ಕೆಜಿಎಫ್-2 ತಂಡ ಮತ್ತೆ ಬೆಂಗಳೂರಿಗೆ ಪಯಣ ಬೆಳೆಸಲಿದೆ. ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿ ಹೈದರಾಬಾದ್ ಕಡೆ ಹೊರಡಲಿದೆ. ಈ ಬಗ್ಗೆ ಪ್ರಶಾಂತ್ ನೀಲ್ ಸಾಮಾಜಿಕ ಜಾಲತಾಣದಲ್ಲಿ 'ಬೆಂಗಳೂರು ಮತ್ತು ಹೈದರಾಬಾದ್ ಕರೆಯುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಕೊನೆಯ ಹಂತದ ಚಿತ್ರೀಕರಣ ಮಾಡುತ್ತಿದ್ದು ಕೆಲವೇ ಕೆಲವು ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಇದೆ.
ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಸಂಜಯ್ ದತ್ ಭಾಗದ ಚಿತ್ರೀಕರಣ ದೊಡ್ಡ ತಲೆನೋವಾಗಿದೆ. ಸಂಜಯ್ ದತ್ ಕ್ಯಾನ್ಸರ್ ಚಿಕಿತ್ಸೆ ಜೊತೆಗೆ ಸಿನಿಮಾ ಕೆಲಸದಲ್ಲಿಯೂ ಭಾಗಿಯಾಗುತ್ತಿದ್ದಾರೆ. ಹಿಂದಿ ಸಿನಿಮಾದ ಚಿತ್ರೀಕರಣದಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಕೆಜಿಎಫ್-2 ಸಿನಿಮಾದ ಹೈದರಾಬಾದ್ ಚಿತ್ರೀಕರಣದಲ್ಲಿ ಸಂಜಯ್ ದತ್ ಭಾಗಿಯಾಗುವ ಸಾಧ್ಯತೆ ಇದೆ.

ಸದ್ಯ ಉಡುಪಿಯಲ್ಲಿ ಕೆಜಿಎಫ್-2 ಚಿತ್ರೀಕರಣ ನಡೆಯುತ್ತಿರುವ ಒಂದಿಷ್ಟು ಫೋಟೋಗಳು ವೈರಲ್ ಆಗಿವೆ. ಯಶ್ ಮತ್ತು ಶ್ರೀನಿಧಿ ಶೆಟ್ಟಿ ದೃಶ್ಯವನ್ನು ಸೆರೆಹಿಡಿಯಲಾಗುತ್ತಿದೆ. ಸದ್ಯ ಲೀಕ್ ಆಗಿರುವ ಫೋಟೋಗಳು ನೋಡಿದ್ರೆ ಫೈಟ್ ದೃಶ್ಯ ಇರಬಹುದು ಎನ್ನಲಾಗುತ್ತಿದೆ.
ಚಿತ್ರೀಕರಣ ನಡೆಯುತ್ತಿರುವ ಸ್ಥಳದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ಜಮಾಯಿಸಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಬೌನ್ಸರ್ ಗಳು ಹರಸಾಹಸ ಪಡುತ್ತಿದ್ದಾರೆ. ಚಿತ್ರದ ದೃಶ್ಯಗಳು ಲೀಕ್ ಆಗಬಾರದು ಎಂದು ಸಾಕಷ್ಟು ಕ್ರಮಗಳನ್ನು ಕೈಕೊಂಡಿದ್ದಾರೆ. ಆದರೂ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


Click it and Unblock the Notifications











