ರಾಜ್ಯ ಪ್ರಶಸ್ತಿ ಪ್ರಕಟ: 'ಕೆಜಿಎಫ್' ಹಾಗೂ 'ಟಗರು' ಸಿನಿಮಾಗಳಿಗೆ ಭಾರಿ ನಿರಾಸೆ
2018 ನೇ ಸಾಲಿನ ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಪ್ರಕಟವಾಗಿದೆ. ಈ ಪೈಕಿ ಯಶ್ ನಟನೆಯ 'ಕೆಜಿಎಫ್' ಹಾಗೂ ಶಿವರಾಜ್ ಕುಮಾರ್ ನಟನೆಯ 'ಟಗರು' ಸಿನಿಮಾಗಳಿಗೆ ಭಾರಿ ನಿರಾಸೆಯಾಗಿದೆ.
ಮೊದಲ ಅತ್ಯುತ್ತಮ ಚಿತ್ರ - ಆ ಕರಾಳ ರಾತ್ರಿ
ಎರಡನೇ ಅತ್ಯುತ್ತಮ ಚಿತ್ರ - ರಾಮನ ಸವಾರಿ
ಮೂರನೇ ಅತ್ಯುತ್ತಮ ಚಿತ್ರ - ಒಂದಲ್ಲಾ ಎರಡಲ್ಲ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ - ಸಂತಕವಿ ಕನಕದಾಸರ ರಾಮಧಾನ್ಯ
ಅತ್ಯುತ್ತಮ ಮನರಂಜನಾ ಚಿತ್ರ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
ಅತ್ಯುತ್ತಮ ಮಕ್ಕಳ ಚಿತ್ರ - ಹೂವು ಬಳ್ಳಿ
ಹೀಗೆ ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆದರೆ, ಈ ಪಟ್ಟಿ ನೋಡಿದರೆ 'ಕೆಜಿಎಫ್' ಹಾಗೂ 'ಟಗರು' ಸಿನಿಮಾದ ಅಭಿಮಾನಿಗಳಿಗೆ ಕೊಂಚ ನಿರಾಸೆ ಆಗುತ್ತದೆ. 2018ರಲ್ಲಿ ದೊಡ್ಡ ಯಶಸ್ಸು ಪಡೆದ ಸಿನಿಮಾಗಳು ಪ್ರಶಸ್ತಿ ರೇಸ್ ನಲ್ಲಿ ಹಿಂದೆ ಉಳಿದಿವೆ.

'ಕೆಜಿಎಫ್' ಚಿತ್ರಕ್ಕೆ ಕೇವಲ 2 ಪ್ರಶಸ್ತಿ
ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ದೇಶಾದ್ಯಂತ ದೊಡ್ಡ ಮಟ್ಟದ ಯಶಸ್ಸು ಪಡೆದಿದೆ. ಹಾಗೆಂದ ಮಾತ್ರಕ್ಕೆ ರಾಜ್ಯ ಪ್ರಶಸ್ತಿ ನೀಡಲೇಬೇಕೆಂದು ಅಲ್ಲ. ಆದರೆ, ಈಗಾಗಲೇ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ 'ಕೆಜಿಎಫ್', ರಾಜ್ಯ ಪ್ರಶಸ್ತಿಯಲ್ಲೂ ಹೆಚ್ಚು ಪ್ರಶಸ್ತಿ ಗೆಲ್ಲಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಚಿತ್ರಕ್ಕೆ ಕೇವಲ 2 ಪ್ರಶಸ್ತಿಗಳು ಬಂದಿದೆ.

ಸಂಗೀತ ನಿರ್ದೇಶನ ಹಾಗೂ ಕಲಾ ನಿರ್ದೇಶನ
'ಕೆಜಿಎಫ್' ಸಿನಿಮಾ ಎರಡು ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದಿದೆ. ರವಿ ಬಸ್ರೂರ್ ಅತ್ಯುತ್ತಮ ಸಂಗೀತ ನಿರ್ದೇಶಕ ಹಾಗೂ ಅತ್ಯುತ್ತಮ ಕಲಾ ನಿರ್ದೇಶನಕ್ಕಾಗಿ ಶಿವಕುಮಾರ್ ಜೆ ಪ್ರಶಸ್ತಿ ಪಡೆದಿದ್ದಾರೆ. ಈ ಎರಡು ವಿಭಾಗ ಬಿಟ್ಟರೆ ಬೇರೆ ಯಾವ ವಿಭಾಗದಲ್ಲಿಯೂ ಪ್ರಶಸ್ತಿಗಳು 'ಕೆಜಿಎಫ್'ಗೆ ಬಂದಿಲ್ಲ. ಹೀಗಾಗಿ, ಎರಡು ಪ್ರಶಸ್ತಿಗಳಿಗೆ ಈ ಸಿನಿಮಾ ತೃಪ್ತಿಪಡಬೇಕಾಗಿದೆ.

'ಟಗರು' ಸಿನಿಮಾಗೆ ಯಾವುದೇ ಪ್ರಶಸ್ತಿ ಬಂದಿಲ್ಲ
ಶಿವರಾಜ್ ಕುಮಾರ್ ನಟನೆಯ, ಸೂರಿ ನಿರ್ದೇಶನದ 'ಟಗರು' ಸಿನಿಮಾಗೆ ಯಾವುದೇ ಪ್ರಶಸ್ತಿ ಬಂದಿಲ್ಲ. ರಾಜ್ಯ ಪ್ರಶಸ್ತಿ ಪಡೆಯುವಲ್ಲಿ 'ಟಗರು' ಸಿನಿಮಾ ವಿಫಲವಾಗಿದೆ. 2018 ರಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ 100 ದಿನ ಪೂರೈಸಿದ ಮೊದಲ ಸಿನಿಮಾ ಇದಾಗಿತ್ತು. ಸಿನಿಮಾದ ಚಿತ್ರಕತೆ ದೊಡ್ಡ ಮಟ್ಟದ ಚರ್ಚೆ ಹುಟ್ಟಿಸಿತ್ತು.

ಸಿನಿಮಾ ಗೆದ್ದರೆ, ಪ್ರಶಸ್ತಿ ಬರಬೇಕು ಎಂದೇನೂ ಇಲ್ಲ
ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಗೆದ್ದ ಕೂಡಲೇ, ಆ ಸಿನಿಮಾಗೆ ರಾಜ್ಯ ಪ್ರಶಸ್ತಿ ಬರಬೇಕು ಎಂದೇನೂ ಇಲ್ಲ. ಆದರೆ, 'ಕೆಜಿಎಫ್' ಹಾಗೂ 'ಟಗರು' ಸಿನಿಮಾಗಳು ದೊಡ್ಡ ಯಶಸ್ಸು ಪಡೆದು, ಪ್ರೇಕ್ಷಕರ ಪ್ರೀತಿ ಪಡೆದಿತ್ತು. ಹೀಗಾಗಿ, ಸಿನಿಮಾ ಇಷ್ಟಪಟ್ಟ ಪ್ರೇಕ್ಷಕರಿಗೆ ರಾಜ್ಯ ಪ್ರಶಸ್ತಿ ಪಟ್ಟಿ ಕೊಂಚ ನಿರಾಸೆ ಮೂಡಿಸಿದೆ.


Click it and Unblock the Notifications











