ಮಂಡ್ಯ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಡ್ತಾರಂತೆ ಸುದೀಪ್.!
ಮಂಡ್ಯ ಲೋಕಸಭೆ ಚುನಾವಣೆ ಕಿಚ್ಚ ಸುದೀಪ್ ಎಂಟ್ರಿ ಕೊಡ್ತಾರೆ ಎಂಬ ಮಾತು ಈಗ ಗಾಂಧಿನಗರದಲ್ಲಿ ದೊಡ್ಡದಾಗಿ ಸದ್ದು ಮಾಡ್ತಿದೆ. ತನ್ನ ಈ ಹಿಂದಿನ ನಿಲುವನ್ನು ಬ್ರೇಕ್ ಮಾಡಿ ಸುಮಲತಾ ಪರ ಪ್ರಚಾರಕ್ಕೆ ಹೋಗುತ್ತಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ.
ಈಗಾಗಲೇ ನಟರಾದ ಯಶ್ ಮತ್ತು ದರ್ಶನ್ ಸುಮಲತಾ ಪರ ಪ್ರಚಾರ ಮಾಡ್ತಿದ್ದಾರೆ. ಈ ಜೋಡೆತ್ತುಗಳಿಗೆ ಸುದೀಪ್ ಕೂಡ ಸಾಥ್ ನೀಡಲಿದ್ದಾರಂತೆ. ಮಂಡ್ಯದ ಕೆಲವು ಪ್ರದೇಶಗಳಲ್ಲಿ ಏಪ್ರಿಲ್ 10 ಮತ್ತು 11 ರಂದು ಎರಡು ದಿನಗಳ ಕಾಲ ಸುದೀಪ್ ಪ್ರಚಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಪ್ರಚಾರದ ವಿಚಾರವಾಗಿ ಕೆಲವು ದಿನಗಳ ಹಿಂದೆಯಷ್ಟೇ ಸುದೀಪ್ ತನ್ನ ನಿರ್ಧಾರವನ್ನ ಸ್ಪಷ್ಟಪಡಿಸಿದ್ದರು. 'ನಾನು ಪ್ರಚಾರಕ್ಕೆ ಹೋಗಲ್ಲ, ದರ್ಶನ್ ಇದ್ದಾರೆ, ಅವರು ಸಾಕು, ಸಿನಿಮಾ ಕಮಿಟ್ ಮೆಂಟ್ ಬಿಟ್ಟು ಹೋಗಲು ಸಾಧ್ಯವಿಲ್ಲ' ಎಂದು ಖಡಕ್ ಆಗಿ ಹೇಳಿದ್ದರು.

ಅಲ್ಲಿಗೆ ಸುಮಲತಾ ಪರ ಸುದೀಪ್ ಪ್ರಚಾರ ಮಾಡಲ್ಲ. ಮಂಡ್ಯ ಅಖಾಡದಿಂದ ದೂರ ಉಳಿಯಲಿದ್ದಾರೆ ಎಂಬುದು ಖಚಿತವಾಗಿತ್ತು. ಆದ್ರೀಗ, ಅಂಬರೀಶ್ ಮೇಲಿನ ಪ್ರೀತಿ ಮತ್ತು ಸುಮಲತಾ ಅವರ ಮೇಲಿನ ಗೌರವಕ್ಕೆ ಬೆಲೆ ಕೊಟ್ಟು ಪ್ರಚಾರ ಮಾಡಲು ಮನಸ್ಸು ಮಾಡಿದ್ದಾರೆ ಎಂಬುದು ಆಪ್ತವಲಯದಲ್ಲಿ ಕೇಳಿಬರುತ್ತಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಿ ಅಭಿಮಾನಿಗಳಿಂದ ಟೀಕೆಗಳನ್ನ ಎದುರಿಸಿದ್ದ ಸುದೀಪ್, 'ಇನ್ಮುಂದೆ ಗೆಳೆಯರು ಮತ್ತು ಆಪ್ತರಿಗಾಗಿ ಪ್ರಚಾರಕ್ಕೆ ಹೋಗಲ್ಲ' ಎಂದು ಬಹಿರಂಗವಾಗಿ ಪತ್ರ ಬರೆದಿದ್ದರು. ಇದೀಗ, ಕೊಟ್ಟ ಮಾತನ್ನ ಮೀರಿ ಮತ್ತೆ ಚುನಾವಣಾ ಪ್ರಚಾರಕ್ಕೆ ಸುದೀಪ್ ಹೋಗುತ್ತಿದ್ದಾರಾ ಎನ್ನುವ ವಿಚಾರ ಭಾರಿ ಸದ್ದು ಮಾಡುತ್ತಿದೆ.
ಇನ್ನೊಂದು ಮೂಲಗಳ ಪ್ರಕಾರ, ಇದು ಸುಳ್ಳು ಎನ್ನಲಾಗಿದೆ. ಸುದೀಪ್ ಮಂಡ್ಯಕ್ಕೆ ಹೋಗುವುದಿಲ್ಲ. ಅವರು ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಇದೆಲ್ಲವನ್ನ ಪಕ್ಕಕ್ಕಿಟ್ಟು ಅಂಬಿ-ಸುಮಲತಾಗಾಗಿ ಮಂಡ್ಯಕ್ಕೆ ಹೋದರು ಅಚ್ಚರಿಯಿಲ್ಲ.


Click it and Unblock the Notifications











