ಸುದೀಪ್ 'ಬಚ್ಚನ್'ಗೆ ವೀರಪರಂಪರೆಯ ಐಂದ್ರಿತಾ ರೇ
ಸುದೀಪ್-ಶಶಾಂಕ್ ಜೋಡಿಯ 'ಬಚ್ಚನ್' ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದೆ. ಅವರು ಬೇರಾರೂ ಅಲ್ಲ, ಐಂದ್ರಿತಾ ರೇ. ಈ ಮೊದಲು ಸುದೀಪ್ ಜೊತೆ 'ವೀರಪರಂಪರೆ' ಚಿತ್ರದಲ್ಲಿ ಐಂದ್ರಿತಾ ನಟಿಸಿದ್ದರು. ಆದರೆ ಶಶಾಂಕ ಜೊತೆ ಇದು ಐಂದ್ರಿತಾಗೆ ಮೊದಲ ಸಿನಿಮಾ.
ಸೂಪರ್ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದಿದ್ದ ದಕ್ಷಿಣಭಾರತದ ಪ್ರಸಿದ್ಧ ನಟಿ ನಯನತಾರಾ ಅವರನ್ನು ತಮ್ಮ ಬಚ್ಚನ್ ಚಿತ್ರಕ್ಕಾಗಿ ಕರೆಸಲು ನಿರ್ದೇಶಕ ಶಶಾಂಕ್ ಹರಸಾಹಸ ಮಾಡಿದ್ದರು. ಸಾಕಷ್ಟು ಬಾರಿ ಮಾತುಕತೆಯಾಗಿ ಇನ್ನೇನು ನಯನಾ 'ಹೂಂ' ಅನ್ನಬೇಕು ಅನ್ನುವಷ್ಟರಲ್ಲಿ ಅವರಿಗೆ ಪ್ರತಿಷ್ಠಿತ ಬ್ಯಾನರಿನ ತಮಿಳು ಚಿತ್ರದ ಆಫರ್ ಬಂತು.
ತಕ್ಷಣ ಎಚ್ಚೆತ್ತ ನಯನಾ, ಕನ್ನಡದ ಬಚ್ಚನ್ ಚಿತ್ರಕ್ಕೆ 'ನೋ' ಅಂದಿದ್ದಾರೆ. ತಮಿಳು ಚಿತ್ರಕ್ಕೆ ಬರುವ ಭಾರೀ ಸಂಭಾವನೆಗಾಗಿ ಕೈಯೊಡ್ಡಿದ್ದಾರೆ. ಇತ್ತ ಶಶಾಂಕ್ ಕೂಡ ನಯನತಾರಾಗೆ, 'ಹೋದರೆ ಹೋಗು ನನಗೇನು...' ಎಂದು ಐಂದ್ರಿತಾಗೆ ಮಣೆಹಾಕಿದ್ದಾರೆ.
"ಜರಾಸಂಧ ಚಿತ್ರದ ದಯನೀಯ ಸೋಲಿನಿಂದ ನಿರ್ದೇಶಕ ಶಶಾಂಕ್ ಪಾಠ ಕಲಿತಿದ್ದಾರೆ. ಹಾಗಾಗಿ, ಈ ಬಚ್ಚನ್ ಚಿತ್ರಕ್ಕೆ ಅಚ್ಚುಕಟ್ಟಾಗಿ ಕಥೆ ಸಿದ್ಧಪಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಸುದೀಪ್ ಅವರನ್ನು ನಾಯಕರನ್ನಾಗಿಸಿಕೊಂಡಿದ್ದಾರೆ. ಹೇಳಿಕೇಳಿ ಸುದೀಪ್ ನಿರ್ದೇಶನವೂ ಗೊತ್ತಿರುವ ನಟ, ಶಶಾಂಕ್ ಅವರಿಗೂ ಪಾಠ ಮಾಡಬಹುದು" ಎಂಬುದು ಚಿತ್ರತಂಡದ ಮಾತು.
ಒಟ್ಟಿನಲ್ಲಿ ಬಚ್ಚನ್ ಚಿತ್ರಕ್ಕೀಗ ನಾಯಕಿಯಾಗಿ ಐಂದ್ರಿತಾ ಸಿಕ್ಕಾಗಿದೆ. ಇನ್ನೇನಿದ್ದರೂ ಸದ್ಯದಲ್ಲೇ ಮುಹೂರ್ತ. ಕನ್ನಡದ ಕಿಚ್ಚ ಸುದೀಪ್, ಬಚ್ಚನ್ ಆಗಿ ಬರಲಿದ್ದಾರೆ. ಆದರೆ ಸದ್ಯಕ್ಕೆ ಸೋಲಿನ ಸರಪಳಿಯಲ್ಲಿರುವ ನಿರ್ದೇಶಕ ಶಶಾಂಕ್, ಈ ಚಿತ್ರದ ಮೂಲಕವಾದರೂ ಕಳೆದು ಹೋಗಿರುವ ತಮ್ಮ ಚಾರ್ಮನ್ನು ಮತ್ತೆ ಗಳಿಸಬಹುದೇ? (ಒನ್ ಇಂಡಿಯಾ ಕನ್ನಡ)


Click it and Unblock the Notifications











