ಕಮಲ್ ಹಾಸನ್ ನಂತರದ ಅತ್ಯುತ್ತಮ ನಟ ಸುದೀಪ್
ಕನ್ನಡ ನಟ ಕಿಚ್ಚ ಸುದೀಪ್, 'ಸೌತ್ ಇಂಡಿಯಾ ಸ್ಟಾರ್' ಆಗಲಿರುವುದು ಎಲ್ಲರೂ ಮಾತನಾಡಿಕೊಳ್ಳುತ್ತಿರುವ ವಿಷಯ. ಅದಕ್ಕಿಂತಲೂ ಹೆಚ್ಚಿನದಾದ, ಅಚ್ಚರಿಯೆಂಬಂತ ಬಿರುದೊಂದು ಸುದೀಪ್ ಅವರಿಗೀಗ ದಕ್ಕಿದೆ. ಅದು 'ಕಮಲ್ ಹಾಸನ್ ನಂತರದ ಅತ್ಯುತ್ತಮ ನಟ' ಬಿರುದು. ಇದನ್ನು ದಯಪಾಲಿಸಿದವರು ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ. ಇವರೇ 'ಈಗ' ಚಿತ್ರಕ್ಕೆ ಸಂಗೀತ ನಿರ್ದೇಶಕರು.
ನಾಳೆ, ಅಂದರೆ ಜುಲೈ 06, 2012 ರಂದು ಸುದೀಪ್ ಖಳನಾಯಕನ ಪಾತ್ರದಲ್ಲಿ ಮಿಂಚಿರುವ ತೆಲುಗಿನ 'ಈಗ' ಹಾಗೂ ಇದೇ ಚಿತ್ರದ ತಮಿಳು ಡಬ್ ಆವೃತ್ತಿ 'ನಾನ್ ಈ' ಚಿತ್ರಗಳು ಹೈದ್ರಾಬಾದ್, ತಮಿಳುನಾಡು ಹಾಗೂ ಕರ್ನಾಟಕದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗಲಿವೆ. ಈ ಸಂದರ್ಭದಲ್ಲಿ ಕೀರವಾಣಿಯವರು ಸುದೀಪ್ ಅವರನ್ನು ಕಮಲ್ ಹಾಸನ್ ಅವರಿಗೆ ಹೋಲಿಸಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿರುವ ಎಂಎಂ ಕೀರವಾಣಿ, "ಕಿಚ್ಚ ಸುದೀಪ್, ತೆಲುಗಿನ ಈಗ ಚಿತ್ರದಲ್ಲಿ ಗಮನಾರ್ಹವಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ಖಳನಾಯಕನ ಪಾತ್ರದಲ್ಲಿ ಅವರು ಮಾಡಿರುವ ಅಭಿನಯ ಊಹೆಗೂ ನಿಲುಕದ್ದು. ಅವರು ಮಾಡಿರುವ ನಟನೆ ಜಾಗತಿಕ ಮಟ್ಟದಲ್ಲಿ ನಾವು ಗುರುತಿಸಿಕೊಳ್ಳುವಂತಿದೆ" ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಕೀರವಾಣಿ, "ಸುದೀಪ್ ಅವರು ಕಮಲ್ ಹಾಸನ್ ನಂತರ ನಾವು ಕಂಡ ಅತ್ತುತ್ತಮ ನಟ" ಎಂದು ಬಣ್ಣಿಸಿದ್ದಾರೆ. ಈ ಮಾತಿಗೆ ಸುದೀಪ್ ಪ್ರತಿಕ್ರಿಯೆ ಏನು ಎಂಬುದು ಸದ್ಯಕ್ಕೆ ಗೊತ್ತಿಲ್ಲವಾದರೂ ಕೀರವಾಣಿಯವರ ಹೊಗಳಿಕೆ ಮಾತಿಗೆ ಸುದೀಪ್ ಅಭಿಮಾನಿಗಳ ದಿಲ್ ಫುಲ್ ಖುಷ್. ಕೀರವಾಣಿಯವರ ಮಾತಿನ ಸತ್ಯಾಸತ್ಯತೆ ಈಗ ಚಿತ್ರ ನೋಡಿದ ನಂತರ ಪ್ರತಿಯೊಬ್ಬರಿಗೂ ಮನವರಿಕೆಯಾಗಲಿದೆ ಎಂಬುದು ಚಿತ್ರತಂಡದ ಹೇಳಿಕೆ.
ಎಸ್ ಎಸ್ ರಾಜಮೌಳಿ ನಿರ್ದೇಶನದ 9 ನೇ ಚಿತ್ರ ನಾಳೆ ಬಿಡುಗಡೆಯಾಗಲಿರುವ ಈಗ. ಈ ಮೊದಲಿನ 8 ಚಿತ್ರಗಳೂ ಸೂಪರ್ ಹಿಟ್ ಆಗಿವೆ. ನಾನಿ ಹಾಗೂ ಸಮಂತಾ ಈಗ ಚಿತ್ರದ ನಾಯಕ ಹಾಗೂ ನಾಯಕಿಯರು. ಸುದೀಪ್ ವಿಲನ್. ಈ ಚಿತ್ರದ ಹಂಚಿಕೆ ಹಕ್ಕುಗಳನ್ನು 'ಪಿವಿಪಿ ಸಿನಿಮಾಸ್'ಗೆ ರು. 34 ಕೋಟಿಗೆ ಕೊಡಲಾಗಿದೆ. ಈ ಚಿತ್ರದ ಸೆಟಲೈಟ್ ಹಕ್ಕು ರು. 5.50 ಕೋಟಿಗೆ ಸನ್ ಟಿವಿ ಪಾಲಾಗಿದೆ.
ಈ ಚಿತ್ರದ ಸೆಟಲೈಟ್ ಹಕ್ಕು ಇದುವರೆಗಿನ ತೆಲುಗು ನಿರ್ದೇಶಕರೊಬ್ಬರ ಚಿತ್ರಕ್ಕೆ ಸಿಕ್ಕ ದಾಖಲೆ ಮೊತ್ತವಾಗಿದೆ. ಈ ಚಿತ್ರದ ಮೂಲಕ ಕನ್ನಡ ನಟ ಸುದೀಪ್, ದಕ್ಷಿಣ ಭಾರತಕ್ಕೆ ಸೂಪರ್ ಸ್ಟಾರ್ ಆಗಿ ಮೆರೆಯಲಿದ್ದಾರೆ ಎಂಬುದು ಎಲ್ಲರ ಅನಿಸಿಕೆ. ಇದು ಈಗ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿಯವರ ಸ್ಪಷ್ಟ ಅಭಿಪ್ರಾಯ ಕೂಡ. ಬಿಡುಗಡೆ ಕ್ಷಣ ಸಮೀಪಿಸುತ್ತಿದೆ, ಇನ್ನೇನು ಉತ್ತರ ಸಿಗಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











