13 ವರ್ಷದ ಬಳಿಕ ದೆಹಲಿಗೆ ಸುದೀಪ್: ಕೇಂದ್ರ ಸಚಿವರ ಭೇಟಿ
ಬಹುಭಾಷಾ ನಟರಾಗಿರುವ ನಟ ಸುದೀಪ್ ಹಲವು ರಾಜ್ಯಗಳಿಗೆ, ಹಲವು ರಾಜ್ಯಗಳ ಪ್ರಮುಖ ನಗರಗಳಿಗೆ ಸಿನಿಮಾ ಕಾರ್ಯಗಳ ನಿಮಿತ್ತ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಸುದೀಪ್ ದೆಹಲಿಗೆ ಹೋಗಿ 13 ವರ್ಷಗಳಾಗಿದೆಯಂತೆ!
ಆದರೆ ಈಗ ಸುದೀಪ್ ದೆಹಲಿಗೆ ವಿಸಿಟ್ ಮಾಡಿದ್ದಾರೆ. ಹದಿಮೂರು ವರ್ಷಗಳ ಬಳಿಕ ದೆಹಲಿಗೆ ಹೋಗಿರುವ ನಟ ಸುದೀಪ್ ಅಲ್ಲಿ ಕೆಲವು ಮುಖ್ಯ ವ್ಯಕ್ತಿಗಳನ್ನು ಭೇಟಿ ಸಹ ಮಾಡಿದ್ದಾರೆ.
ದೆಹಲಿಗೆ ಭೇಟಿ ನೀಡಿರುವ ಸುದೀಪ್ ಅಲ್ಲಿ ಕರ್ನಾಟಕದ ರಾಜಕಾರಣಿಗಳನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಭೇಟಿ ನೀಡಿ ಅವರೊಟ್ಟಿಗೆ ಮಾತುಕತೆ ಆಡಿದ್ದಾರೆ ನಟ ಸುದೀಪ್. ಈ ಅನಿರೀಕ್ಷಿತ ಭೇಟಿಯ ಬಗ್ಗೆ ಖುಷಿಯವಾಗಿರುವ ಪ್ರಹ್ಲಾದ್ ಜೋಶಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯ ಭೇಟಿ ಮಾಡಿದ ಸುದೀಪ್
ಇಂದು ದೆಹಲಿಯ ನನ್ನ ನಿವಾಸಕ್ಕೆ ಕನ್ನಡದ ಖ್ಯಾತ ಚಿತ್ರನಟ ಕಿಚ್ಚ ಸುದೀಪ್ ಅವರು ಭೇಟಿ ನೀಡಿ ವಿವಿಧ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. 13 ವರ್ಷಗಳ ನಂತರ ದೆಹಲಿಗೆ ಭೇಟಿ ನೀಡುತ್ತಿರುವ ಸುದೀಪ್ ಅವರು, ಕಲೆ ಸಂಸ್ಕೃತಿ ಮತ್ತು ಸಾಮಾಜಿಕ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ಬಹುಭಾಷಾ ನಟರಾಗಿ ಮಿಂಚುತ್ತಿರುವ ಅವರ ಯಶಸ್ಸು ಸಿನಿಮಾ ರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸುತ್ತೇನೆ. ಎಂದು ಪ್ರಹ್ಲಾದ್ ಜೋಶಿ ಬರೆದುಕೊಂಡಿದ್ದಾರೆ.

ಭೇಟಿ ಮಾಡಿದ್ದು ಖುಷಿಯಾಗಿದೆ ಎಂದ ಸುದೀಪ್
ಮನೆಗೆ ಆಗಮಿಸಿದ ಸುದೀಪ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದ ಪ್ರಹ್ಲಾದ್ ಜೋಶಿ, ಶಾಲು ಹೊದಿಸಿ ಸನ್ಮಾನ ಸಹ ಮಾಡಿದ್ದಾರೆ. ಇಬ್ಬರ ಭೇಟಿಯ ಹಲವು ಚಿತ್ರಗಳನ್ನು ಪ್ರಹ್ಲಾದ್ ಜೋಶಿ ತಮ್ಮ ಫೇಸ್ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಹ್ಲಾದ್ ಜೋಶಿಯವರ ಭೇಟಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸುದೀಪ್, ''ಆಹ್ವಾನಕ್ಕೆ ಧನ್ಯವಾದಗಳು. ನಿಮ್ಮ ಸಮಯ ಹಾಗೂ ಆತಿಥ್ಯಕ್ಕೂ ಧನ್ಯವಾದ. ನಿಮ್ಮನ್ನು ಭೇಟಿ ಮಾಡಿದ್ದು ಬಹಳ ಸಂತೋಶವಾಗಿದೆ'' ಎಂದಿದ್ದಾರೆ.

ದೆಹಲಿ ಭೇಟಿ ಬಗ್ಗೆ ಪ್ರತ್ಯೇಕ ಟ್ವೀಟ್
ತಮ್ಮ ದೆಹಲಿ ಭೇಟಿ ಬಗ್ಗೆ ಪ್ರತ್ಯೇಕ ಟ್ವೀಟ್ ಮಾಡಿರುವ ನಟ ಸುದೀಪ್, ದೆಹಲಿಯಲ್ಲಿ ಮೊದಲ ದಿನ ಬಹಳ ಆಸಕ್ತಿಕರವಾಗಿತ್ತು. ಕೆಲವು ಅದ್ಭುತ ವ್ಯಕ್ತಿಗಳನ್ನು ಭೇಟಿ ಮಾಡಿದೆ. 'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ ಹಲವು ಆಸಕ್ತಿಕರ ಪ್ರಶ್ನೆಗಳಿಗೆ ಉತ್ತರ ಸಹ ನೀಡಿದೆ. ಈಗ ಎರಡನೇ ದಿನ ಇನ್ನೂ ಸಾಕಷ್ಟು ಜನರನ್ನು ಭೇಟಿ ಮಾಡಬೇಕಿದೆ. ಎಲ್ಲರನ್ನೂ ಭೇಟಿ ಮಾಡಲು ಕಾತರನಾಗಿದ್ದೇನೆ ಎಂದಿದ್ದಾರೆ. ಅಂದಹಾಗೆ ಸುದೀಪ್ ಅವರು ಜುಲೈ 15 ರಂದೇ ದೆಹಲಿಗೆ ತೆರಳಿದ್ದಾರೆ.

ಸಿನಿಮಾ ಪ್ರಚಾರಕ್ಕಾಗಿ ದೆಹೆಲಿಗೆ ತೆರಳಿರುವ ಸುದೀಪ್
'ವಿಕ್ರಾಂತ್ ರೋಣ' ಸಿನಿಮಾದ ಪ್ರಚಾರಕ್ಕಾಗಿ ನಟ ಸುದೀಪ್ ದೆಹಲಿಗೆ ತೆರಳಿದ್ದು, ಅಲ್ಲಿ ಹಲವು ಹಿಂದಿ, ಇಂಗ್ಲೀಷ್ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದಾರೆ. ಕೆಲವು ಸಿನಿಮಾ ಪ್ರಚಾರ ಇವೆಂಟ್ಗಳಲ್ಲಿ ಸಹ ಪಾಲ್ಗೊಂಡಿದ್ದಾರೆ. ಈ ನಡುವೆ ಪ್ರಹ್ಲಾದ್ ಜೋಶಿಯವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಸುದೀಪ್ ಭೇಟಿ ನೀಡಿದ್ದಿರಬಹುದು. ಇನ್ನಷ್ಟು ಮಂದಿಯನ್ನು ಸುದೀಪ್ ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ.


Click it and Unblock the Notifications











