ಸ್ಯಾಂಡಲ್ ವುಡ್ ನ 'ಹೆಬ್ಬುಲಿ'ಯಾಗಿ ಕಿಚ್ಚ ಸುದೀಪ್
'ಗಜಕೇಸರಿ' ಚಿತ್ರದ ಮೂಲಕ ಭರ್ಜರಿ ಇನ್ನಿಂಗ್ಸ್ ಆರಂಭಿಸಿದ ಛಾಯಾಗ್ರಾಹಕ ಎಸ್ ಕೃಷ್ಣ ಅವರು ಇದೀಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಕಿಚ್ಚ ಸುದೀಪ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಸುದೀಪ್ ಮತ್ತು ಕೃಷ್ಣ ಅವರ ಚೊಚ್ಚಲ ಕಾಂಬಿನೇಷನ್ ಚಿತ್ರಕ್ಕೆ 'ಹೆಬ್ಬುಲಿ' ಎಂದು ಹೆಸರಿಡಲಾಗಿದೆ.
ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್ ಬಳಿಕ 'ಹೆಬ್ಬುಲಿ' ಚಿತ್ರ ಸೆಟ್ಟೇರಲಿದೆ. 'ಅತ್ತಾರಿಂಟಿಕಿ ದಾರೇದಿ' ಕನ್ನಡ ರೀಮೇಕ್ ಚಿತ್ರಕ್ಕೆ ಶೀರ್ಷಿಕೆ ಇನ್ನೂ ಪಕ್ಕಾ ಆಗಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ. ಇನ್ನು ಹೆಬ್ಬುಲಿ ಚಿತ್ರದ ವಿಚಾರಕ್ಕೆ ಬಂದರೆ ಇದೇ ಮೊದಲ ಬಾರಿಗೆ ಆರ್ಮಿ ಆಫೀಸರ್ ಆಗಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. [ಗಜಕೇಸರಿ ಚಿತ್ರವಿಮರ್ಶೆ]
ಇದೊಂದು ನಾಯಕ ಪ್ರಧಾನ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಸುದೀಪ್ ಅವರಿಗೆ ಕಥೆ ತುಂಬಾ ಇಷ್ಟವಾಗಿದೆಯಂತೆ. ವರಮಹಾಲಕ್ಷ್ಮಿ ಹಬ್ಬದ ದಿನ (ಆ.8) ಚಿತ್ರದ ವಿವರಗಳನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ ನಿರ್ದೇಶಕರಾಗಿ ಬದಲಾದ ಛಾಯಾಗ್ರಾಹಕ ಎಸ್ ಕೃಷ್ಣ.

ಚಿತ್ರಕ್ಕೆ ಬಂಡವಾಳ ಹೂಡುವವರು ಯಾರು?
ಸದ್ಯಕ್ಕೆ ಹೆಬ್ಬುಲಿ ಚಿತ್ರದ ಕಥೆ ಓಕೆ ಆಗಿದೆ. ಇನ್ನು ಉಳಿದ ಪಾತ್ರವರ್ಗ, ತಾಂತ್ರಿಕ ಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕು. ಹೆಬ್ಬುಲಿ ಚಿತ್ರಕ್ಕೆ ಯಾರು ಬಂಡವಾಳ ಹೂಡುತ್ತಾರೆ ಎಂಬುದು ಇನ್ನೂ ಪಕ್ಕಾ ಆಗಿಲ್ಲ. ಬಹಳ ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ. ಈ ಬಾರಿ ಸುದೀಪ್ ಯಾರಿಗೆ ಮಣೆ ಹಾಕುತ್ತಾರೆ ಎಂಬುದನ್ನು ಕಾದುನೋಡಬೇಕು.

ಮೂರು ತಿಂಗಳ ಹಿಂದೆಯೇ ಟೈಟಲ್ ರಿಜಿಸ್ಟರ್ಡ್
ಹೆಬ್ಬುಲಿ ಶೀರ್ಷಿಕೆಯನ್ನು ಮೂರು ತಿಂಗಳ ಹಿಂದಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಲಾಗಿದೆ. ಕೃಷ್ಣ ಅವರಿಗೆ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ ಕೂಡಲೇ ಅವರು ಶೀರ್ಷಿಕೆ ರಿಜಿಸ್ಟರ್ ಮಾಡಿಸಿದ್ದಾರೆ ಎನ್ನುತ್ತವೆ ಮೂಲಗಳು.

ಸುದೀಪ್ ಮಾಣಿಕ್ಯ ಸೆಂಚುರಿ ಪೂರೈಸಿದೆ
ಸದ್ಯಕ್ಕೆ 'ಬಿಗ್ ಬಾಸ್' ರಿಯಾಲಿಟಿ ಶೋ ನಡೆಸಿಕೊಡುತ್ತಿರುವ ಸುದೀಪ್ ಅವರ 'ಮಾಣಿಕ್ಯ' ಚಿತ್ರ ಸೆಂಚುರಿ ಪೂರೈಸಿದೆ. ಇದೀಗ ಅವರು ಅತ್ತೆ ಮನೆಗೆ ದಾರಿ ಹುಡುಕುವ ಸಮಯ. ಅದಾಗ ಬಳಿಕ 'ಹೆಬ್ಬುಲಿ'ಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಹೆಬ್ಬುಲಿ ಚಿತ್ರಕ್ಕೆ ಸೂರಪ್ಪ ಬಾಬು ಅಥವಾ ಶಂಕರೇಗೌಡ ನಿರ್ಮಾಪಕರಾಗುವ ಸಾಧ್ಯತೆಗಳಿವೆ.

'ಹೆಬ್ಬುಲಿ' ಬಾಂಡ್ ಶೈಲಿಯ ಚಿತ್ರವಂತೆ
ಹಲವಾರು ಚಿತ್ರಗಳ ಸಮ್ಮಿಶ್ರಣದಂತಿದ್ದ 'ಗಜಕೇಸರಿ' ರೀಮಿಕ್ಸ್ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಇದೀಗ ಅವರ 'ಹೆಬ್ಬುಲಿ' ಚಿತ್ರ ಹಾಲಿವುಡ್ ನ ಬಾಂಡ್ ಶೈಲಿಯ ಚಿತ್ರ ಎನ್ನಲಾಗಿದ್ದು, ಕೃಷ್ಣ ಅವರು ಏನೆಲ್ಲಾ ಮೋಡಿ ಮಾಡಲಿದ್ದಾರೆ ಎಂಬುದು ಗೊತ್ತಾಗಬೇಕಾದರೆ ಕಾಯಲೇಬೇಕು.

ಸ್ಯಾಂಡಲ್ ವುಡ್ ನ ಹೊಸ ಹೆಬ್ಬುಲಿ ಇದು
ಈ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ಅವರು 'ಹಸಿದ ಹೆಬ್ಬುಲಿ' (1983) ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಬಳಿಕ 1987ರಲ್ಲಿ ಶಂಕರ್ ನಾಗ್ ಹಾಗೂ ಟೈಗರ್ ಪ್ರಭಾಕರ್ ಅವರು 'ಹುಲಿ ಹೆಬ್ಬುಲಿ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಇದೀಗ 'ಹೆಬ್ಬುಲಿ'ಯಾಗಿ ಸ್ಯಾಂಡಲ್ ವುಡ್ ನಲ್ಲಿ ಪಂಜಾ ಬೀಸಲಿದ್ದಾರೆ ಸುದೀಪ್.


Click it and Unblock the Notifications











