'ಕಿರಗೂರಿನ ಗಯ್ಯಾಳಿಗಳು' ನನಗೆ ಚೊಚ್ಚಲ ಚಿತ್ರ ಎಂದ ನಟಿ ಯಾರು?
ಸೀದಾ ರಂಗಭೂಮಿಯಿಂದ ಕಿರುತೆರೆಗೆ ಜಂಪ್ ಆಗಿ ತದನಂತರ ಬೆಳ್ಳಿತೆರೆಯಲ್ಲಿ ಮೊದಲನೇ ಬಾರಿಗೆ 'ಸೈಬರ್ ಯುಗದೊಳ್ ನವ ಯುವ ಪ್ರೇಮ ಕಾವ್ಯಂ' ಹಾಗೂ 'ಸಿಂಪಲ್ ಆಗ್ ಒಂದು ಲವ್ ಸ್ಟೋರಿ' ಜೊತೆಗೆ 'ಫೇರ್ ಅಂಡ್ ಲವ್ಲಿ' ಸಿನಿಮಾಗಳಲ್ಲಿ ನಟಿಸಿರುವ ನಟಿ ಶ್ವೇತಾ ಶ್ರೀವಾತ್ಸವ್ ಅವರು ಇದೀಗ 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಚಿತ್ರದಲ್ಲಿ ನಟಿಸುವ ಮೂಲಕ ಅದ್ಭುತ ಅನುಭವ ಪಡೆದುಕೊಂಡ ನಟಿ, ಇದು ನನ್ನ ಮೊದಲ ಸಿನಿಮಾ ಎನ್ನುತ್ತಿದ್ದಾರೆ.
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ 'ಕಿರಗೂರಿನ ಗಯ್ಯಾಳಿಗಳು' ಎಂಬ ಕಥೆ ಆಧಾರಿತ ಖ್ಯಾತ ಕಾದಂಬರಿಯನ್ನು ನಿರ್ದೇಶಕಿ ಸುಮನಾ ಕಿತ್ತೂರು ಅವರು ಸಿನಿಮಾ ಮಾಡುತ್ತಿದ್ದಾರೆ.
ಯಾವುದೇ ನಟಿಗೆ ತನ್ನ ಮೊದಲ ಸಿನಿಮಾ ಎಂದು ಹೇಳಿಕೊಳ್ಳಲು, ಅದಕ್ಕಾಗಿ ಅತೀ ಹೆಚ್ಚು ಶ್ರಮವಹಿಸಿರಬೇಕು. ನಾನು 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ನಟಿಸುವಾಗ ಇದು ನನ್ನ ಚೊಚ್ಚಲ ಸಿನಿಮಾ ಎನ್ನುವ ಅನುಭವವಾಯಿತು', ಎನ್ನುತ್ತಾರೆ ಸಿಂಪಲ್ ಬೆಡಗಿ ಶ್ವೇತಾ.
ವಾರಗಳ ಹಿಂದೆ ಚಿತ್ರದ ಡಬ್ಬಿಂಗ್ ಪಾರ್ಟ್ ಮುಗಿಸಿರುವ ನಟಿ ಶ್ವೇತಾ ಅವರು ಚಿತ್ರದ ಶೂಟಿಂಗ್ ಗಾಗಿ ಹಾಕಿದ ಶ್ರಮ ತುಂಬಾ ಒಳ್ಳೆಯ ಅನುಭವ ಎನ್ನುತ್ತಾರೆ.[ಗಾಂಧಿನಗರಕ್ಕೆ ಕಾಲಿಟ್ಟ 'ಕಿರಗೂರಿನ ಗಯ್ಯಾಳಿಗಳು'!]
"ಯಾವುದೇ ರೀತಿಯ ಸೌಲಭ್ಯಗಳಿಲ್ಲದ ಹಳ್ಳಿಯಲ್ಲಿ ಇರಬೇಕಾಯಿತು. ಶೂಟಿಂಗ್ ಮುಗಿಯುವವರೆಗೂ ಬರಿಗಾಲಿನಲ್ಲೇ ಇದ್ದೆ. ಇಂತಹ ಸಿನಿಮಾ ಮಾಡುವಾಗ ಅದು ಸಾಮಾನ್ಯ, ಆದರೆ ಮನೆಯ ಒಳಗಡೆಯೂ ಚಪ್ಪಲಿ ಹಾಕಿ ಅಭ್ಯಾಸ ಇರುವ ನನಗೆ ಮಾತ್ರ ಇದು ಸ್ವಲ್ಪ ಕಷ್ಟ ಆಯ್ತು. ಇಂತಹ ಸಣ್ಣ ಸಂಗತಿಗಳು ಹಳ್ಳಿ ಜೀವನದ ಬಗ್ಗೆ ಅರಿಯಲು ತುಂಬಾ ಸಹಾಯ ಮಾಡಿದವು' ಎನ್ನುತ್ತಾರೆ ನಟಿ ಶ್ವೇತಾ ಶ್ರೀವಾತ್ಸವ್ ಅವರು.
ಪೂರ್ಣಚಂದ್ರ ತೇಜಸ್ವಿ ಅವರ ಖ್ಯಾತ ಕಾದಂಬರಿ ಕಿರಗೂರಿನ ಗಯ್ಯಾಳಿಗಳಿಗೆ, ಅಗ್ನಿ ಶ್ರೀಧರ್ ಅವರು ಸ್ಕ್ರಿಪ್ಟ್ ಬರೆದಿದ್ದು, ನಿರ್ದೇಶಕಿ ಸುಮನಾ ಕಿತ್ತೂರ್ ಅವರು ಆಕ್ಷನ್-ಕಟ್ ಹೇಳಿದ್ದಾರೆ.
ನಟಿ ಶ್ವೇತಾ ಶ್ರೀವಾತ್ಸವ್, ನಟಿ ಸೋನು ಗೌಡ, ನಟ ಕಿಶೋರ್, ನಟ-ನಿರ್ದೇಶಕ ಎಸ್ ನಾರಾಯಣ್, ನಟಿ ಸುಕೃತಾ ವಾಗ್ಲೆ, ಹಿರಿಯ ನಟಿ ಬಿ.ಜಯಶ್ರೀ, ನಟ ಅಚ್ಯುತ್ ಕುಮಾರ್, ನಟ ಶರತ್ ಲೋಹಿತಾಶ್ವ, ನಟ ರವಿಶಂಕರ್, ಲೂಸ್ ಮಾದ ಯೋಗೇಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
ಛಾಯಾಗ್ರಾಹಕ ಮನೋಹರ್ ಜೋಷಿ ಅವರು ಕ್ಯಾಮರ ಕೈ ಚಳಕ ತೋರಿದ್ದಾರೆ. ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಮ್ಯೂಸಿಕ್ ಕಂಪೋಸಿಷನ್ ಚಿತ್ರದ ಹಾಡುಗಳಿಗಿವೆ.
ಈಗಾಗಲೇ ಸಿನಿಮಾದ ಬಹುತೇಕ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದು, ಸದ್ಯದಲ್ಲೇ ಚಿತ್ರ ತೆರೆ ಮೇಲೆ ಅಪ್ಪಳಿಸಲಿದೆ.


Click it and Unblock the Notifications













