'ಕಿರೀಟ'ದಲ್ಲಿ ಸಖತ್ ಮನೋರಂಜನೆ ಜೊತೆಗೆ ಉತ್ತಮ ಸಂದೇಶಗಳು: ಕಿರಣ್ ಚಂದ್ರ
ಚಂದನವನದಲ್ಲಿ ಈ ವಾರ(ಜುಲೈ 28) ತೆರೆಕಾಣಲಿರುವ ಚಿತ್ರಗಳಲ್ಲಿ ನವ ನಿರ್ದೇಶಕ ಕಿರಣ್ ಚಂದ್ರ ರವರ 'ಕಿರೀಟ' ಸಿನಿಮಾ ಸಹ ಒಂದು. ಈ ಚಿತ್ರದ ಟ್ರೈಲರ್ ನೋಡಿದವರಿಗೆ ಏನಿದು 'ಕಿರೀಟ'?. ಟ್ರೈಲರ್ ಪೂರ್ಣ ಫೈಟಿಂಗ್, ಪಂಚಿಂಗ್ ಡೈಲಾಗ್ಗಳೇ ಕಾಣುತ್ತಿವೆಯಲ್ಲ.. ಅನ್ನೋ ಪ್ರಶ್ನೆ ಹುಟ್ಟದೇ ಇರದು.
ಆದ್ದರಿಂದ ಇದೇ ಪ್ರಶ್ನೆಯನ್ನು ನಿರ್ದೇಶಕರಿಗೆ ಕೇಳಿದಕ್ಕೆ 'ಚಿತ್ರದ ಟೈಟಲ್ ನಲ್ಲೇ ಒಂದು ಸಸ್ಪೆನ್ಸ್ ಇದೆ' ಎಂದ ಅವರು ಚಿತ್ರದ ವಿಶೇಷತೆಗಳ ಬಗ್ಗೆ ಫಿಲ್ಮಿಬೀಟ್ ಜೊತೆಗಿನ ಸಂದರ್ಶನದಲ್ಲಿ ಹೇಳಿದರು. ಅವರೊಂದಿಗಿನ ಸಂದರ್ಶನ ಹೈಲೈಟ್ಸ್ ಈ ಕೆಳಗಿನಂತಿದೆ ಓದಿರಿ..
ಸಂದರ್ಶನ: ಸುನೀಲ್ ಬಿಂಡಹಳ್ಳಿ

'ಕಿರೀಟ' ಎಂತಲೇ ಟೈಟಲ್ ಏಕೆ?
'ಕಿರೀಟ' ಎಂಬ ಟೈಟಲ್ ಈ ಸಿನಿಮಾಗೆ ಏಕೆ ಅಂತ ಹೇಳಿದ್ರೆ ಇಡೀ ಸಿನಿಮಾ ಏನು ಎಂಬುದನ್ನೇ ಹೇಳಿದ ಹಾಗೆ ಆಗುತ್ತೆ. ಸೋ ಟೈಟಲ್ ಬಗ್ಗೆ ಏನು ಹೇಳೊಲ್ಲ. ಸಂಪೂರ್ಣ ಸಿನಿಮಾ ನೋಡಿದ್ರೇನೆ 'ಕಿರೀಟ' ಟೈಟಲ್ ಚಿತ್ರಕ್ಕೆ ಏಕೆ ಎಂದು ತಿಳಿಯುವುದು.

ಚಿತ್ರಕಥೆ ಏನು? ನಿರ್ದೇಶಕರಾಗುವ ಮೊದಲು ಏನ್ ಮಾಡ್ಕೊಂಡಿದ್ರಿ?
ಚಿತ್ರಕಥೆ ಬಗ್ಗೆ ನನಗೆ ಒಂದ್ ಲೈನ್ ನಲ್ಲಿ ಹೇಳೋಕೆ ಆಗಲ್ಲ. ಅದು ಇವತ್ತಿನವರೆಗೂ ಹೇಗೆ ಹೇಳೋದು ಅಂತ ಗೊತ್ತಾಗಿಲ್ಲ. ಒಂದಷ್ಟು ಸಿನಿಮಾಗಳಲ್ಲಿ ಸಂಭಾಷಣೆ ಬರಹಗಾರನಾಗಿ, ಅಸಿಸ್ಟಂಟ್ ಡೈರೆಕ್ಟರ್ ಆಗಿ ವರ್ಕ್ ಮಾಡಿದ್ದೆ. ಈಗ ಅದೆಲ್ಲಾ ಅನುಭವಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೀನಿ.

'ಕಿರೀಟ'ದ ವಿಶೇಷತೆ ಏನು?
ಕಂಪ್ಲೀಟ್ ಎಂಟರ್ಟೈನ್ಮೆಂಟ್. ಬೇರೆ ಯಾವುದೇ ಉದ್ದೇಶವಿಲ್ಲ. ಮನೋರಂಜನೆ ಜೊತೆಗೆ ಒಂದಷ್ಟು ಉತ್ತಮ ಮತ್ತು ಒಳ್ಳೆ ಸಂದೇಶಗಳನ್ನು ಹೇಳಿದ್ದೀವಿ. ಅದ್ ಬಿಟ್ರೆ ಇನ್ನೇನು ಇಲ್ಲ.

ಟ್ರೈಲರ್ನಲ್ಲಿ ಪಂಚಿಂಗ್ ಡೈಲಾಗ್, ಫೈಟ್ ಗಳೇ ಇವೆ.. ಕಾಮಿಡಿ ಕಾಣಲೇ ಇಲ್ಲವಲ್ಲ?
ಟ್ರೈಲರ್ ನಲ್ಲಿ ಎಲ್ಲಾನು ಹೇಳೋಕೆ ಅಗೋಲ್ಲ. ಇರೋ 60 ಸೆಕೆಂಡ್ ನಲ್ಲಿ ಚಿತ್ರದ ಹೈಲೈಟ್ ಏನು ಅನ್ನೋದನ್ನ ಕಥೆಯ ಸಾರವನ್ನು ಸರಳವಾಗಿ ಹೇಳಲು ಪ್ರಯತ್ನಿಸಿದ್ದೀವಿ. ಮನರಂಜನೆ ಅಂದ್ರೆ ಬರಿ ನಗೋದು ಅಷ್ಟೇ ಅಲ್ಲ. ಎಮೋಷನ್ ನ ಟಚ್ ಮಾಡೋದು ಆಗಿರಬಹುದು ಅಲ್ವಾ...!

ಮೊದಲ ಚಿತ್ರ ನಿರ್ದೇಶನ ಮಾಡಿದ ಅನುಭವ ಹೇಗಿತ್ತು?
ಎಂತಹವರಿಗೆ ಆದರು ಫಸ್ಟ್ ಫಿಲ್ಮ್ ಅಂದಾಗ ಖುಷಿ-ಭಯ ಎಲ್ಲವೂ ಇರುತ್ತೆ. ಎಲ್ಲಾ ನಿರ್ದೇಶಕರ ಹಾಗೆ ನನಗು ಆ ಒಂದು ಭಯ ಇದೆ. ಜೊತೆಗೆ ಅಷ್ಟೇ ಧೈರ್ಯವು ಇದೆ. ಇಷ್ಟೂ ವರ್ಷದ ಶ್ರಮಕ್ಕೆ ನಾಳೆ ಪ್ರತಿಫಲ ಸಿಗಲಿರುವ ಬಗ್ಗೆ ಕುತೂಹಲ, ಸಂತೋಷ ಎರಡೂ ಇದೆ.

ಮೊದಲ ಚಿತ್ರದಲ್ಲೇ ಮೂರು ಜನ ಹಿರೋಯಿನ್ ಇದಾರಲ್ಲಾ?
ಕಥೆ ಏನು ಕೇಳುತ್ತೆ ಹಾಗೆ. ಚಿತ್ರದಲ್ಲಿ ಲೇಖಾ ಚಂದ್ರ, ದೀಪ್ತಿ ಕಾಪ್ಸೆ, ರೋಹಿನಿ ಸಿಂಗ್ ಮೂವರು ಹೀರೋಯಿನ್ಗಳು ಉತ್ತಮವಾಗಿ ಅಭಿನಯಿಸಿದ್ದು, ಸಮನಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಮ್ಯಾಕ್ಸಿಮಮ್ ಎಫರ್ಟ್ ಹಾಕಿದ್ದಾರೆ.

ನಿಮ್ಮ ಚಿತ್ರದ ನಾಯಕನ ಬಗ್ಗೆ ಹೇಳಿ?
ನಾಯಕ ನಟ ಚಿತ್ರದಲ್ಲಿ ನಾಲ್ಕು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದ್ದರಿಂದ ಒಂದೊಂದು ಶೇಡ್ಗೆ ಒಬ್ಬೊಬ್ಬರು ಹೀರೋಯಿನ್ ಇರ್ತಾರೆ. ಸಿನಿಮಾದಲ್ಲಿ ಸಮರ್ಥ್ ಅವರ ಸ್ಟಂಟ್, ಡೈಲಾಗ್ ಗಳೇ ಹೈಲೈಟ್. ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ರಿಯಲ್ ಸ್ಟಂಟ್ಗಳನ್ನೆಲ್ಲಾ ಮಾಡಿದ್ದಾರೆ. ಕಥೆಗಾಗಿ ಮತ್ತು ನಿರ್ದೇಶಕನಿಗಾಗಿ ಅವರು ತುಂಬಾ ಎಫರ್ಟ್ ಹಾಕಿದ್ದಾರೆ. 'ಉಗ್ರಂ' ಮಂಜು ರವರು ಒಂದು ಒಳ್ಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವೀಕ್ಷಕನಾಗಿ ಸಿನಿಮಾ ನಿರ್ದೇಶನ ಮಾಡಿದ್ದೇನೆ!
ನಾನು ಸಿನಿಮಾ ನೋಡುವುದು ಕಡಿಮೆ. ಆದರೆ ಕನ್ನಡ ಚಿತ್ರಗಳನ್ನು ಮಾತ್ರ ಜಾಸ್ತಿ ನೋಡ್ತೀನಿ. ಥಿಯೇಟರ್ಗೆ ಹೋದ್ರೆ ನಾನು ವಿಸೆಲ್ ಹೊಡೆದುಕೊಂಡು, ಎಂಜಾಯ್ ಮಾಡಿಕೊಂಡು ಚಿತ್ರ ನೋಡೋದು. ಹಾಗೆ ಒಬ್ಬ ವೀಕ್ಷಕನಾಗಿ ಮನರಂಜನೆ ನೀಡುವ ಎಲ್ಲಾ ಎಲಿಮೆಂಟ್ಸ್ಗಳನ್ನು ಈ ಚಿತ್ರದಲ್ಲಿ ನೀಡಿದ್ದೇನೆ. ಇದುವರೆಗೆ ನಾನು ಬರೆದಿರುವ ಹಲವು ಕಥೆಗಳನ್ನು ಒಂದ್ಲೈನ್ ನಲ್ಲಿ ಹೇಳಬಲ್ಲೇ. ಆದರೆ 'ಕಿರೀಟ' ಚಿತ್ರದ ಕಥೆಯನ್ನು ಒಂದ್ಲೈನ್ ನಲ್ಲಿ ಹೇಳೋಕೆ ಆಗ್ಲಿಲ್ಲ. ಅದೇ ಒಂದು ವಿಶೇಷತೆ ಅನ್ನಬಹುದು.
ನಾಳೆ(ಜುಲೈ 28) ತೆರೆಕಾಣಲಿರುವ ಕಿರಣ್ ಚಂದ್ರ ರವರ ನಿರ್ದೇಶನದ 'ಕಿರೀಟ' ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ


Click it and Unblock the Notifications











