ಪುನೀತ್ ಮುಂದಿನ ಚಿತ್ರಕ್ಕೆ ಕಾಲಿವುಡ್ ನಿರ್ದೇಶಕರು ಬರ್ತಾರೆ!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಂದಿನ ಚಿತ್ರಗಳ ಪಟ್ಟಿ ಬಗ್ಗೆ ಗಾಂಧಿನಗರದಲ್ಲಿ ದಿನಕ್ಕೊಂದು ಸುದ್ದಿ ಹರಿದಾಡುತ್ತಲೇ ಇದೆ. ಮೊನ್ನೆಯಷ್ಟೇ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ನಿರ್ದೇಶಕ ಸಂತೋಷ್ ಅನಂದರಾಮ್ ಜೊತೆ ಅಪ್ಪು ಸಿನಿಮಾ ಮಾಡ್ತಾರಂತೆ ಅಂತ ಗಾಂಧಿನಗರದ ಗಲ್ಲಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು.
ಈಗ ಮತ್ತೊಂದು ಸುದ್ದಿ ಹೊರಬಂದಿದೆ. ಅದು ಅಪ್ಪು ಆಪ್ತ ಮೂಲಗಳಿಂದಲೇ. ಸಿನಿಮಾ ಮಾಡುವುದಕ್ಕೆ ಉತ್ಸುಕರಾಗಿರುವ ಎಲ್ಲಾ ನಿರ್ದೇಶಕರಿಂದ ಅಪ್ಪು ಕಥೆ ಕೇಳುತ್ತಿರುವುದು ನಿಜ. ಆದ್ರೆ, ಎಲ್ಲಾ ಚಿತ್ರಗಳನ್ನೂ ಅಣ್ಣಾವ್ರ ಮಗ ಒಪ್ಪಿಕೊಳ್ಳುತ್ತಿಲ್ಲ.
ಬಜೆಟ್, ಸಿನಿಮಾ ಮೇಕಿಂಗ್ ಸ್ಟೈಲ್, ಕಥೆಯಲ್ಲಿನ ಗಟ್ಟಿತನದ ಬಗ್ಗೆ ಪ್ರಾಮುಖ್ಯತೆ ಕೊಡುವ ಅಪ್ಪು ಒಂದು ಹೊಸ ಸಿನಿಮಾಗೆ ಚಾಲನೆ ನೀಡಿದ್ದಾರೆ. ಅದಕ್ಕೆ ನಿರ್ದೇಶಕರು ಯಾರು ಗೊತ್ತಾ? ಕಾಲಿವುಡ್ ನ ಭರವಸೆಯ ಯುವ ನಿರ್ದೇಶಕ ಶರವಣನ್. ['ನಾಟಿ ಅಟ್ 40' ಅಪ್ಪುಗೆ ಇದೋ ಇಲ್ಲಿದೆ ಬಿಗ್ ಗಿಫ್ಟ್]

ಹೌದು, ತಮಿಳಿನಲ್ಲಿ ಅಭೂತಪೂರ್ವ ಯಶಸ್ಸು ಕಂಡ 'ಎಂಗೆಯುಮ್ ಎಪ್ಪೋದುಮ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶರವಣನ್, ಪುನೀತ್ ರಾಜ್ ಕುಮಾರ್ ಗಾಗಿ ಕನ್ನಡಕ್ಕೆ ಬರುತ್ತಿದ್ದಾರೆ. ಅದಾಗಲೇ, ಅಪ್ಪುಗಾಗಿ ಒಂದೊಳ್ಳೆ ರೋಮ್ಯಾಂಟಿಕ್ ಲವ್ ಸ್ಟೋರಿ ರೆಡಿ ಮಾಡಿರುವ ಶರವಣನ್, ಪುನೀತ್ ಕಾಲ್ ಶೀಟ್ ಕೂಡ ಗಿಟ್ಟಿಸಿಕೊಂಡಿದ್ದಾರೆ.
ಕಥೆ ಕೇಳಿ ಕ್ಲೀನ್ ಬೌಲ್ಡ್ ಆಗಿರುವ ಅಪ್ಪು, 'ಡೊಡ್ಮನೆ ಹುಡುಗ' ಚಿತ್ರದ ನಂತ್ರ ಶರವಣನ್ ಸಿನಿಮಾಗೆ ಚಾಲನೆ ನೀಡುತ್ತಾರಂತೆ. ಅಂದ್ಹಾಗೆ, ಪರಭಾಷಾ ಚಿತ್ರಗಳ ನಿರ್ದೇಶಕರೊಂದಿಗೆ ಪುನೀತ್ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. [ರಾಮಾಚಾರಿ ಡೈರೆಕ್ಟರ್ ಪುನೀತ್ ಗೆ ಆಕ್ಷನ್ ಕಟ್]
ಹಾಗ್ನೋಡಿದ್ರೆ, 'ಅಪ್ಪು'ನ ಬೆಳ್ಳಿತೆರೆ ಮೇಲೆ ಲಾಂಚ್ ಮಾಡಿದ್ದೇ ಟಾಲಿವುಡ್ ಮತ್ತು ಕಾಲಿವುಡ್ ನ ಬಹು ಬೇಡಿಕೆಯ ನಿರ್ದೇಶಕ ಪೂರಿ ಜಗನ್ನಾಥ್. 'ವೀರ ಕನ್ನಡಿಗ' ಚಿತ್ರಕ್ಕಾಗಿ ಮೆಹರ್ ರಮೇಶ್, 'ಯಾರೇ ಕೂಗಾಡಲಿ' ಚಿತ್ರಕ್ಕಾಗಿ ಕಾಲಿವುಡ್ ನ ಸಮುದ್ರಖಣಿ ಗಾಂಧಿನಗರಕ್ಕೆ ಬಂದಿದ್ದರು. ಇದೀಗ ಶರವಣನ್ ಸರದಿ.
ಆದ್ರೆ, ಶರವಣನ್ ತಮ್ಮದೇ 'ಎಂಗೆಯುಮ್ ಎಪ್ಪೋದುಮ್' ಕಥೆ ಹೊತ್ತು ಕನ್ನಡಕ್ಕೆ ಬರುತ್ತಾರೋ, ಇಲ್ಲಾ ಫ್ರೆಶ್ ಸ್ಟೋರಿ ತರುತ್ತಾರೋ ಅನ್ನುವ ಮಾಹಿತಿ ಇನ್ನೂ ಗುಟ್ಟಾಗಿದೆ. ಹೆಚ್ಚಿನ ಮಾಹಿತಿಗೆ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.


Click it and Unblock the Notifications











