ಕೂರ್ಮಾವತಾರ : ವಿಶೇಷ ಪ್ರದರ್ಶನ ಮತ್ತು ಸಂವಾದ
ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿರುವ ಗಿರೀಶ್ ಕಾಸರವಳ್ಳಿ ನಿರ್ದೇಶಿತ ಹೊಸ ಕನ್ನಡ ಚಲನಚಿತ್ರ 'ಕೂರ್ಮಾವತಾರ' ಚಿತ್ರದ ವಿಶೇಷ ಪ್ರದರ್ಶನವನ್ನು ಕನ್ನಡಕ್ಕಾಗಿ ಅವಿರತ ಹೋರಾಟ ಮಾಡುತ್ತಿರುವ 'ಅವಿರತ' ಪ್ರತಿಷ್ಠಾನ ಭಾನುವಾರ, ಜೂನ್ 2ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ.
ಕೂರ್ಮಾವತಾರದ ವಿಶೇಷ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಹನುಮಂತ ನಗರದ ರಾಮಾಂಜನೇಯ ಗುಡ್ಡದ ಆವರಣದಲ್ಲಿರುವ ಕೆಂಗಲ್ ಹನುಮಂತ ಕಲಾಸೌಧ(ಕೆ.ಎಚ್. ಕಲಾಸೌಧ)ದಲ್ಲಿ ಮಧ್ಯಾಹ್ನ 3.30ಕ್ಕೆ ಇಟ್ಟುಕೊಳ್ಳಲಾಗಿದೆ. ಈ ಸಂವಾದದಲ್ಲಿ ಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮತ್ತು ಚಿತ್ರತಂಡದವರು ಭಾಗವಹಿಸುತ್ತಿದ್ದಾರೆ. ಇದು ಅವಿರತದ 46ನೇ ಕನ್ನಡ ಚಲನಚಿತ್ರ ಪ್ರದರ್ಶನವಾಗಿದೆ.
ದಿನಾಂಕ : 2 ಜೂನ್ 2013, ಭಾನುವಾರ, ಮಧ್ಯಾಹ್ನ 3.30
ಸ್ಥಳ : ಕೆ.ಎಚ್. ಕಲಾಸೌಧ, ರಾಮಾಂಜನೇಯ ಗುಡ್ಡದ ಆವರಣ, ಹನುಮಂತನಗರ, ಬೆಂಗಳೂರು.
* ಟಿಕೆಟ್ ಹಾಗೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಕೆಟಿ ಸತೀಶ್ ಗೌಡ: 98800 86300
ಈ ಚಲನಚಿತ್ರ ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಅವರ ಕಾದಂಬರಿ ಆಧಾರಿತ ಚಿತ್ರವಾಗಿದ್ದು, ಬಸಂತಕುಮಾರ್ ಪಾಟೀಲ್ ಅವರು ನಿರ್ಮಿಸಿದ್ದಾರೆ. ಚಿತ್ರದ ಪ್ರದರ್ಶನಕ್ಕೆ 100 ರು. ಟಿಕೆಟ್ ಇರಿಸಲಾಗಿದೆ. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಅಭ್ಯಾಸ ಮಾಡುತ್ತಿರುವ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಹಂಚುವ ಉದ್ದೇಶದಿಂದ ಈ ಚಲನಚಿತ್ರ ಪ್ರದರ್ಶನವನ್ನು ಇರಿಸಿಕೊಳ್ಳಲಾಗಿದೆ ಎಂದು ಅವಿರತದ ಅಧ್ಯಕ್ಷ ಕೆ.ಟಿ. ಸತೀಶ್ ಗೌಡ ಅವರು ಒನ್ಇಂಡಿಯಾಗೆ ತಿಳಿಸಿದ್ದಾರೆ.
ಅವಿರತ ಸಂಸ್ಥೆ ಕುರಿತು : ಅವಿರತ ನ್ಯಾಸ(ನೊಂ) ಹೆಚ್ಚಾಗಿ ಸಾಫ್ಟ್ವೇರ್ ತಂತ್ರಜ್ಞರು, ವೈದ್ಯರುಗಳನ್ನು ಕೂಡಿದ, ಕನ್ನಡನಾಡಿನ ಭಾಷೆ, ಸಂಸ್ಕೃತಿ, ಕಲಾವೈಭವಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವ ಸಲುವಾಗಿ ರಚನೆಯಾದ ನ್ಯಾಸ. ಕನ್ನಡದ ರಕ್ಷಣೆಗೆ ತನ್ನದೇ ರೀತಿಯಲ್ಲಿ ಕಾಳಜಿಯನ್ನು ತೋರುತ್ತಾ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಕನ್ನಡಿಗರಿಗೆ ನಮ್ಮ ಸಂಸ್ಕೃತಿ, ಕಲೆಯ ಪರಿಚಯ ಮಾಡುವುದರೊಂದಿಗೆ ಕನ್ನಡಮ್ಮನ ಸೇವೆಗೆ ತನ್ನ ಕಿರು ಕಾಣಿಕೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಸಾಗಿದೆ.


Click it and Unblock the Notifications












