'ಸಲಗ' ಸಿನಿಮಾಕ್ಕೂ ತೊಂದರೆ: ಸೂರಪ್ಪ ಬಾಬು ಮೇಲೆ ಬೇಸರ ವ್ಯಕ್ತಪಡಿಸಿದ ಶ್ರೀಕಾಂತ್
ಕೆಲವರ ಷಡ್ಯಂತ್ರದಿಂದಾಗಿ 'ಕೋಟಿಗೊಬ್ಬ 3' ಸಿನಿಮಾ ನಿಗದಿಯಾದ ದಿನ ಬಿಡುಗಡೆ ಆಗಲಿಲ್ಲ ಎಂದು ಈಗಾಗಲೇ ಸುದೀಪ್, ನಿರ್ಮಾಪಕ ಸೂರಪ್ಪ ಬಾಬು ಮಾಧ್ಯಮಗಳಿಗೆ ಹೇಳಿದ್ದಾರೆ. ಇಬ್ಬರು ವಿತರಕರು ಮತ್ತು ಅವರ ಹಿಂದೆ ಕೆಲವು ಹಿರಿಯ ವಿತರಕರು ಸಿನಿಮಾದ ಮೇಲೆ ಷಡ್ಯಂತ್ರ ಮಾಡಿದ್ದಾರೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇನೆ ಎಂದು ಸೂರಪ್ಪ ಬಾಬು ಅಬ್ಬರಿಸಿದ್ದಾರೆ.
'ಕೋಟಿಗೊಬ್ಬ 3' ಹಾಗೂ 'ಸಲಗ' ಸಿನಿಮಾಗಳು ಒಟ್ಟಿಗೆ ತೆರೆಗೆ ಬರಬೇಕಿತ್ತು, ಆದರೆ ಅನಿವಾರ್ಯ ಕಾರಣಗಳಿಂದ 'ಕೋಟಿಗೊಬ್ಬ 3' ಸಿನಿಮಾ ಒಂದು ದಿನ ತಡವಾಗಿ ತೆರೆಗೆ ಬಂತು. 'ಸಲಗ' ಸಿನಿಮಾದ ನಿರ್ಮಾಪಕ ಶ್ರೀಕಾಂತ್ ಪಾತ್ರ ಇದರಲ್ಲಿರಬಹುದು ಎಂಬ ಗುಮಾನಿ ಆರಂಭದಲ್ಲಿ ಎದ್ದಿತ್ತಾದರೂ ನಂತರ ಸುದೀಪ್ ಹಾಗೂ ಜಾಕ್ ಮಂಜು ಅವರೇ 'ಸಲಗ' ಸಿನಿಮಾದ ಪಾತ್ರ ಈ ಷಡ್ಯಂತ್ರದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದೀಗ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ 'ಸಲಗ' ಸಿನಿಮಾದ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ''ಕೊಟಿಗೊಬ್ಬ 3' ಸಿನಿಮಾಕ್ಕೆ ಮಾತ್ರವೇ ಅಲ್ಲ 'ಸಲಗ' ಸಿನಿಮಾದ ವಿರುದ್ಧವೂ ಷಡ್ಯಂತ್ರ ನಡೆದಿದೆ'' ಎಂದಿದ್ದಾರೆ.
''ಕೋಟಿಗೊಬ್ಬ 3' ಸಿನಿಮಾಕ್ಕೆ ಶೇರ್ ಹಣ ನೀಡದೆ ಆಟವಾಡಿಸಿದ ಮೈಸೂರಿನ ವಿತರಕ ನಮ್ಮ ಸಿನಿಮಾಕ್ಕೂ ಹಣ ನೀಡಿಲ್ಲ. ನಮಗೂ ಕೈಕೊಟ್ಟಿದ್ದಾರೆ. ನಮ್ಮ ಸಿನಿಮಾದ ವಿರುದ್ಧವೂ ಷಡ್ಯಂತ್ರ ನಡೆದಿದೆ. ಎಲ್ಲ ವಿಷಯಗಳ ಬಗ್ಗೆ ನಮ್ಮ ಸಿನಿಮಾದ ಸಕ್ಸಸ್ ಮಿಟ್ನಲ್ಲಿ ಮಾತನಾಡುತ್ತೇನೆ. ದಾಖಲೆಗಳನ್ನು ಮುಂದೆ ಇಡುತ್ತೇನೆ'' ಎಂದಿದ್ದಾರೆ ಶ್ರೀಕಾಂತ್.
ತಮ್ಮ ಸಿನಿಮಾ ಸುದೀಪ್ ಅವರ 'ಕೋಟಿಗೊಬ್ಬ 3' ಸಿನಿಮಾದ ಜೊತೆಗೆ ಕ್ಲ್ಯಾಷ್ ಆದ ಬಗ್ಗೆ ಮಾತನಾಡಿದ ನಿರ್ಮಾಪಕ ಶ್ರೀಕಾಂತ್, ''ನಾವು 'ಸಕ್ರಿಯ ನಿರ್ಮಾಪಕರು' ಎಂಬ ಸಂಘ ಮಾಡಿಕೊಂಡಿದ್ದೆವು. ಎಲ್ಲರೂ ಎರಡೆರಡು ವಾರ ಬಿಟ್ಟುಕೊಂಡು ಬರಬೇಕು ಎಂದುಕೊಂಡಿದ್ದೆವು. ಚಿತ್ರಮಂದಿರ ಪೂರ್ಣ ತೆಗೆಯುವ ಘೋಷಣೆ ಆದಾಗ ಸ್ವತಃ ಸೂರಪ್ಪ ಬಾಬು ಅವರೇ ನಮಗೆ ಹೇಳಿದ್ದರು, ನೀವು ಅಕ್ಟೋಬರ್ 14ಕ್ಕೆ ಸಿನಿಮಾ ಮಾಡಿ ನನ್ನ ಸಿನಿಮಾದ ಕಾಪಿ ರೆಡಿಯಾಗಲು ತಡವಾಗುತ್ತದೆ, ನಾನು ತಡವಾಗಿ ಬಿಡುಗಡೆ ಮಾಡ್ತೀನಿ ಎಂದಿದ್ದರು'' ಎಂದು ಹಿಂದೆ ನಡೆದಿದ್ದ ಮಾತುಕತೆ ಬಗ್ಗೆ ಹೇಳಿದರು ಕೆ.ಪಿ ಶ್ರೀಕಾಂತ್.

ಹಠಾತ್ತನೆ ಅಕ್ಟೋಬರ್ 14ಕ್ಕೆ ಬಿಡುಗಡೆ ಎಂದರು: ಶ್ರೀಕಾಂತ್
''ಅದಾದ ಬಳಿಕ ಇದ್ದಕ್ಕಿದ್ದಂತೆ ಅಕ್ಟೋಬರ್ 15 ರಂದು ಸಿನಿಮಾ ಬಿಡುಗಡೆ ಮಾಡುತ್ತೀನಿ ಎಂದು ಘೋಷಣೆ ಮಾಡಿದರು. ಅದ್ಯಾರು ಅವರಿಗೆ ಹುರಿದುಂಬಿಸಿದರೊ ಗೊತ್ತಿಲ್ಲ. ಹಠಾತ್ತನೆ ಅಕ್ಟೋಬರ್ 15ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದರು. ನಂತರ ಅದನ್ನು ಅಕ್ಟೋಬರ್ 14 ಎಂದು ಬದಲಾಯಿಸಿದರು. 'ಸಲಗ' ಸಿನಿಮಾದ ವಿರುದ್ಧ ಯಾರ್ಯಾರು ಷಡ್ಯಂತ್ರ ಮಾಡಿದರು ಎಂಬುದನ್ನು ಶೀಘ್ರದಲ್ಲಿಯೇ ನಾನು ಬಹಿರಂಗಪಡಿಸುತ್ತೇನೆ'' ಎಂದು ಶ್ರೀಕಾಂತ್ ಹೇಳಿದರು.

ಅವರು ಹೇಳಿದ ಡೇಟ್ಸ್ಗೆಲ್ಲ ನಾನು ಓಕೆ ಎಂದಿದ್ದೆ: ಶ್ರೀಕಾಂತ್
''ಸಕ್ರಿಯ ನಿರ್ಮಾಪಕರ ಗುಂಪಿನಲ್ಲಿ ಸೂರಪ್ಪ ಬಾಬು ಈ ಹಿಂದೆ ಅವರೇ ಮುಂದೆ ನಿಂತು ಕೆಲವು ಸಿನಿಮಾಗಳನ್ನು ಬಿಡುಗಡೆ ಮಾಡಿಸಿದ್ದರು. 'ಪೊಗರು' ಬಿಡುಗಡೆಗಾಗಿ ಸಾಕಷ್ಟು ಕೆಲಸ ಮಾಡಿದ್ದರು. ನಿರ್ಮಾಪಕರ ಸಂಘದಲ್ಲಿ ಅವರು ಹೇಳಿದಂತೆಯೇ ನಾವೆಲ್ಲ ಕೇಳುತ್ತಿದ್ದೆವು. ಮೊದಲು ಆಗಸ್ಟ್ 20 ಕ್ಕೆ ಬಿಡುಗಡೆ ಮಾಡುವಂತೆ ನನಗೆ ಹೇಳಿದ್ದರು ನಾನು ಓಕೆ ಎಂದಿದ್ದೆ, ಆ ನಂತರ ಸೆಪ್ಟೆಂಬರ್ 06 ಕ್ಕೆ ಬಿಡುಗಡೆ ಮಾಡಲು ಹೇಳಿದರು ಆಗಲೂ ಓಕೆ ಎಂದಿದ್ದೆ. ಕೊನೆಗೆ ಅಕ್ಟೋಬರ್ 14ಕ್ಕೆ ಹೇಳಿದರು ಅದಕ್ಕೂ ಓಕೆ ಎಂದೆ. ನಾನೇ ಅವರ ಕಚೇರಿಗೆ ಹೋಗಿ ಕಾದಿದ್ದು ಸಿನಿಮಾ ಬಿಡುಗಡೆ ಮಾಡಲು ಒಪ್ಪಿಗೆ ಪಡೆದುಕೊಂಡು ಬಂದಿದ್ದೆ'' ಎಂದಿದ್ದಾರೆ ಕೆಪಿ ಶ್ರೀಕಾಂತ್.

ಸಿನಿಮಾ ಬಿಡುಗಡೆ ಆಗಬಾರದು ಎಂದು ಯಾರೂ ತಡೆದಿಲ್ಲ: ಕೆಪಿ ಶ್ರೀಕಾಂತ್
''ಏನೇ ಷಡ್ಯಂತ್ರ ಆಗಿದ್ದರೂ ಚಿತ್ರಮಂದಿರಗಳ ಮಟ್ಟದಲ್ಲಿ ಮಾತ್ರವೇ ಆಗಿದೆ. ಎರಡೂ ಸಿನಿಮಾವನ್ನು ಬರದಂತೆ ತಡೆಯಬೇಕು ಎಂಬುದು ಯಾರ ಮನಸ್ಸಿನಲ್ಲಿಯೂ ಇಲ್ಲ. ಅದಂತೂ ನಾನು ಖಂಡಿತವಾಗಿ ಹೇಳಬಲ್ಲೆ. ಚಿತ್ರಮಂದಿರಗಳಿಗಾಗಿ ಪ್ರಬಲವಾದ ಪೈಪೋಟಿ ಆಗಿದೆಯೇ ಹೊರತು ಇನ್ನೊಂದು ಸಿನಿಮಾ ಬರಬಾರದು ಎಂದು ಯಾರೂ ತಡೆದಿಲ್ಲ. ಎರಡೆರಡು ಶೋಗಾಗಿ ಕೆಲವೆಡೆ ಕಿತ್ತಾಟ ಆಗಿದೆಯೇ ಹೊರತು, ಯಾವ ನಿರ್ಮಾಪಕರೂ ಈ ಸಿನಿಮಾಗಳು ಬಿಡುಗಡೆ ಆಗಬಾರದೆಂದು ತಡೆದಿಲ್ಲ'' ಎಂದು 'ಕೋಟಿಗೊಬ್ಬ 3' ಸಿನಿಮಾ ಶೋಗಳು ಮೊದಲ ದಿನ ರದ್ದಾದ ಬಗ್ಗೆ ಬೇಸರ ವ್ಯಕ್ತಪಡಿಸಿದರು ಶ್ರೀಕಾಂತ್.

''ಶಿವರಾಜ್ ಕುಮಾರ್, ಸುದೀಪ್ ಬಳಿ ಕೂತು ಬಗೆಹರಿಸಿಕೊಳ್ಳಬಹುದಿತ್ತು''
''ಬಿಡುಗಡೆ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳಬಹುದಿತ್ತು. ಚಿತ್ರರಂಗದ ನಾಯಕರು ಇದ್ದಾರೆ ಶಿವರಾಜ್ ಕುಮಾರ್ ಇದ್ದಾರೆ, ಸುದೀಪ್ ಇದ್ದಾರೆ. ಅವರ ಮನೆಗೆ ಹೋಗಿ ಕುಳಿತುಕೊಂಡು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಬಿಡುಗಡೆ ವಿಷಯವನ್ನು ಕೊನೆಯ ಹಂತದವರೆಗೆ ಎಳೆದುಕೊಂಡು ಬಂದು, ಬಿಡುಗಡೆ ಅಗದೇ ಇರುವಾಗ ಅವರ ಮೇಲೆ ಇವರು, ಇವರ ಮೇಲೆ ಅವರು ಕೆಸರೆರಚಾಟ ಮಾಡುತ್ತಿರುವುದು ಸರಿಯಲ್ಲ'' ಎಂದರು ಕೆ.ಪಿ ಶ್ರೀಕಾಂತ್.


Click it and Unblock the Notifications











