ಕ್ರಾಂತಿ ಮೊದಲ ಹಾಡು ಮೈಸೂರಿನಲ್ಲಿ ಬಿಡುಗಡೆ; ಉಳಿದ ಹಾಡುಗಳ ಕತೆಯೇನು? ದರ್ಶನ್ ಕೊಟ್ರು ಉತ್ತರ
ಮುಂಬರುವ ಜನವರಿ ತಿಂಗಳ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್ನ ಕ್ರಾಂತಿ ಚಿತ್ರ ತೆರೆಗೆ ಬರಲಿದೆ. ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತವೇ ಕ್ರಾಂತಿ ತೆರೆ ಕಾಣಲಿದೆ ಎನ್ನಲಾಗಿತ್ತಾದರೂ ಚಿತ್ರೀಕರಣ ಹಾಗೂ ಚಿತ್ರದ ಪೋಸ್ಟರ್ ಪ್ರೊಡಕ್ಷನ್ ಕೆಲಸಗಳು ಬಾಕಿ ಉಳಿದಿದ್ದರಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ.
ಇನ್ನು ಕ್ರಾಂತಿ ಬಿಡುಗಡೆ ದಿನ ಸಮೀಪಿಸುತ್ತಿದ್ದಂತೆ ಚಿತ್ರದ ಪ್ರಚಾರ ಕಾರ್ಯಗಳನ್ನು ಚಿತ್ರತಂಡ ಆರಂಭಿಸಿದ್ದು, ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರಕ್ಕೆ ಇಳಿದಿದ್ದಾರೆ. ವಿವಿಧ ಯುಟ್ಯೂನ್ ಚಾನೆಲ್ಗಳು ನಡೆಸಿದ ವಿಶೇಷ ಸಂದರ್ಶನಗಳಲ್ಲಿ ಭಾಗವಹಿಸಿದ ದರ್ಶನ್ ಭಿನ್ನ ವಿಭಿನ್ನ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ನೇರ ನುಡಿಗೆ ಹೆಸರು ವಾಸಿಯಾಗಿರುವ ದರ್ಶನ್ ಕ್ರಾಂತಿ ಚಿತ್ರದ ಈ ಸಂದರ್ಶನಗಳಲ್ಲಿಯೂ ಸಹ ನೇರ ಉತ್ತರಗಳನ್ನು ನೀಡಿದ್ದು ಕೆಲ ಹೇಳಿಕೆಗಳು ವೈರಲ್ ಆಗುತ್ತಿವೆ.
ಇನ್ನು ನೇರ ಪಂಚ್ ಹೇಳಿಕೆಗಳ ಜತೆಗೆ ದರ್ಶನ್ ಕ್ರಾಂತಿ ಚಿತ್ರದ ಕಂಟೆಂಟ್ ಕುರಿತಾಗಿ ಹೆಚ್ಚು ಮಾತನಾಡಿದ್ದು, ಚಿತ್ರ ಒಂದೊಳ್ಳೆ ಸಂದೇಶವನ್ನು ಸಾರಲಿದೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಚಿತ್ರದ ಮೊದಲ ಹಾಡು ಧರಣಿ ಬಗ್ಗೆ ವಿಶೇಷವಾಗಿ ಮಾಹಿತಿ ನೀಡಿದ ದರ್ಶನ್ ಈ ಹಾಡು ಸ್ನೇಹದ ಮಹತ್ವ ಹಾಗೂ ಸರ್ಕಾರಿ ಶಾಲೆಗಳ ವಿಶೇಷತೆಯ ಕುರಿತು ಇರಲಿದೆ ಎಂದು ಹೇಳಿಕೆ ನೀಡಿದ್ದರು ಹಾಗೂ ಈ ಹಾಡು ರೋಮಾಂಚನಗೊಳಿಸಲಿದೆ ಎಂದೂ ಸಹ ತಿಳಿಸಿದ್ದರು. ಇನ್ನು ಈ ಧರಣಿ ಹಾಡು ಮೈಸೂರಿನಲ್ಲಿ ಬಿಡುಗಡೆಯಾಗಲಿದೆ ಎಂದೂ ಸಹ ಘೋಷಣೆಯಾಗಿದ್ದು, ಸದ್ಯ ಉಳಿದ ಹಾಡುಗಳನ್ನು ಹೇಗೆ ಬಿಡುಗಡೆಗೊಳಿಸಿದ್ದಾರೆ ಎಂಬ ಪ್ರಶ್ನೆ ದರ್ಶನ್ ಅಭಿಮಾನಿಗಳಲ್ಲಿತ್ತು. ಈ ಕುರಿತಾಗಿ ಈಗ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಉತ್ತರಿಸಿದ್ದಾರೆ.

ಉಳಿದ ಹಾಡುಗಳ ಬಿಡುಗಡೆ ಹೇಗೆ?
ಕ್ರಾಂತಿ ಚಿತ್ರದ ಧರಣಿ ಹಾಡನ್ನು ಮೈಸೂರಿನಲ್ಲಿ ಬಿಡುಗಡೆಗೊಳಿಸಲಿದ್ದೇವೆ ಎಂದು ಚಿತ್ರತಂಡ ಘೋಷಿಸಿದ ನಂತರ ಸಂತಸ ವ್ಯಕ್ತಪಡಿಸಿದ ಅಭಿಮಾನಿ ಬಳಗ ಉಳಿದ ಹಾಡುಗಳನ್ನು ಹೇಗೆ ಬಿಡುಗಡೆಗೊಳಿಸಬಹುದು ಎಂಬ ಪ್ರಶ್ನೆಗಳನ್ನೂ ಸಹ ಹಾಕಿದ್ದರು. ಫಿಲ್ಮೋಲಜಿ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ದರ್ಶನ್ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಚಿತ್ರದ ಮೊದಲ ಹಾಡನ್ನು ಮೈಸೂರಿನಲ್ಲಿ ಬಿಡುಗಡೆಗೊಳಿಸಿದರೆ, ಉಳಿದ ಹಾಡುಗಳನ್ನು ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಬಿಡುಗಡೆಗೊಳಿಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ದರ್ಶನ್ ತಿಳಿಸಿದರು. ಈ ಮೂಲಕ ರಾಜ್ಯದ ವಿವಿಧೆಡೆ ಹಾಡುಗಳನ್ನು ಬಿಡುಗಡೆ ಮಾಡುವುದರಿಂದ ಚಿತ್ರಕ್ಕೆ ಮತ್ತಷ್ಟು ಹೆಚ್ಚಿನ ಪ್ರಚಾರ ಸಿಗುವುದು ಖಚಿತ ಎನ್ನಬಹುದು.

ಸೆಲೆಬ್ರಿಟಿಗಳ ಕೈಯಲ್ಲಿ ಬಿಡುಗಡೆ ಮಾಡಿಸುವ ಬದಲು ಅಭಿಮಾನಿಗಳ ಕೈಯಲ್ಲಿ ಬಿಡುಗಡೆಗೊಳಿಸುವುದು ಉತ್ತಮ
ಇನ್ನು ಆಡಂಬರದ ಆಡಿಯೊ ಬಿಡುಗಡೆ ಕಾರ್ಯಕ್ರಮ ಮಾಡದೇ ಸರಳವಾಗಿ ಹಾಡುಗಳನ್ನು ಬಿಡುಗಡೆಗೊಳಿಸಲಿದ್ದೇವೆ ಎಂದ ದರ್ಶನ್ ಯಾರೋ ದೊಡ್ಡ ನಟರನ್ನು ಕರೆಸಿ ಅವರ ಬಳಿ ಹಾಡು ಬಿಡುಗಡೆ ಮಾಡಿಸುವುದಕ್ಕಿಂತ ಅಭಿಮಾನಿಗಳ ಕೈಯಲ್ಲಿ ಬಿಡುಗಡೆ ಮಾಡಿಸುವುದು ಉತ್ತಮ ಎಂದರು. ಏಕೆಂದರೆ ಆ ದೊಡ್ಡ ನಟರಿಗೆ ಚಿತ್ರದ ಬಗ್ಗೆ ಗಂಧ ಗಾಳಿ ಗೊತ್ತಿರುವುದಿಲ್ಲ, ಆದರೆ ಅಭಿಮಾನಿಗಳು ಹಾಗಲ್ಲ, ಎಲ್ಲವನ್ನೂ ತಿಳಿದಿರುತ್ತಾರೆ, ಆದ್ದರಿಂದ ಈ ನಿರ್ಧಾರ ಎಂದು ದರ್ಶನ್ ತಿಳಿಸಿದರು.

ದರ್ಶನ್ ನಿರೂಪಣೆ
ಹೀಗೆ ನಡೆಯಲಿರುವ ಕ್ರಾಂತಿ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರೂಪಣೆ ಮಾಡಲಿದ್ದಾರೆ ಎಂಬುದು ವಿಶೇಷ. ಈ ವಿಷಯವನ್ನು ಸ್ವತಃ ದರ್ಶನ್ ಅವರೇ ತಿಳಿಸಿದ್ದು, ಇಷ್ಟು ದಿನಗಳ ಕಾಲ ದರ್ಶನ್ ಅವರನ್ನು ನಟನಾಗಿ ಕಂಡಿದ್ದ ಅಭಿಮಾನಿಗಳು ಹಾಗೂ ಸಿನಿ ರಸಿಕರು ಈಗ ನಿರೂಪಕನನ್ನಾಗಿಯೂ ನೋಡಬಹುದಾಗಿದೆ.


Click it and Unblock the Notifications











